ಕರ್ನಾಟಕ

karnataka

ETV Bharat / state

ಪುತ್ತೂರು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆ!! - samanya sabhe

ತಾಲೂಕಿನ ಕೊಳ್ತಿಗೆ, ಒಳಮೊಗ್ರು, ಗೋಳಿತೊಟ್ಟು ಸೇರಿದಂತೆ ಹಲವಾರು ಭಾಗದಲ್ಲಿ ಬಡವರಿಗೆ ಹಕ್ಕುಪತ್ರವನ್ನು ಕಂದಾಯ ಇಲಾಖೆ ನೀಡಿದ್ದರೂ, ಅರಣ್ಯ ಇಲಾಖೆಯ ಆಕ್ಷೇಪಣೆಯಿಂದ ಮನೆಕಟ್ಟಲು ಸಾಧ್ಯವಾಗದೆ ಜನತೆ ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

general-meeting-of-puttur-taluk-panchayat
general-meeting-of-puttur-taluk-panchayat

By

Published : Jan 29, 2020, 8:25 PM IST

ಪುತ್ತೂರು:ತಾಲೂಕಿನ ಕೊಳ್ತಿಗೆ, ಒಳಮೊಗ್ರು, ಗೋಳಿತೊಟ್ಟು ಸೇರಿದಂತೆ ಹಲವಾರು ಭಾಗದಲ್ಲಿ ಬಡಮಂದಿಗೆ ಹಕ್ಕುಪತ್ರವನ್ನು ಕಂದಾಯ ಇಲಾಖೆ ನೀಡಿದ್ದರೂ, ಅರಣ್ಯ ಇಲಾಖೆಯ ಆಕ್ಷೇಪಣೆಯಿಂದ ಮನೆಕಟ್ಟಲು ಸಾಧ್ಯವಾಗದೆ ಜನತೆ ಅತಂತ್ರ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಮ್ಮ ಸಾಲು ಸಾಲು ಸಮಸ್ಯೆಗಳನ್ನು ಸದಸ್ಯರು ತೋಡಿಕೊಂಡರು. ಕೊಳ್ತಿಗೆ ಗ್ರಾಮದಲ್ಲಿ 18 ಮಂದಿಗೆ ಕಂದಾಯ ಇಲಾಖೆ ಹಕ್ಕುಪತ್ರ ನೀಡಿದೆ. ಆದರೆ ಇದೀಗ ಹಕ್ಕುಪತ್ರ ಪಡೆದ ಜಾಗಕ್ಕೆ ಅರಣ್ಯ ಇಲಾಖೆ ಆಕ್ಷೇಪಣೆ ವ್ಯಕ್ತಪಡಿಸಿದೆ. ಇದರಿಂದ ಹಕ್ಕುಪತ್ರ ಪಡೆದ ಮಂದಿ ಅಸಹಾಯಕರಾಗಿದ್ದು, ಅವರ ಜೀವನ ಬೀದಿಗೆ ಬೀಳುವಂತಾಗಿದೆ ಎಂದು ಪಂಚಾಯಿತಿ ಸದಸ್ಯರು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪುತ್ತೂರು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

ತಾಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಬದಲಿ ವ್ಯವಸ್ಥೆ ಮಾಡುವ ತನಕ ಹಕ್ಕುಪತ್ರ ಪಡೆದ ಮಂದಿಯನ್ನು ಎಬ್ಬಿಸುವ ಕೆಲಸ ಮಾಡಬಾರದು ಎಂದು ತಿಳಿಸಿದರು. ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ನೀವ್ಯಾಕೆ ಮೊದಲು ಆಕ್ಷೇಪಣೆ ಮಾಡಿಲ್ಲ. ಈಗ ಆಕ್ಷೇಪಣೆ ಮಾಡುತ್ತಿರುವುದು ಯಾಕೆ ಎಂದರು. ಈ ಬಗ್ಗೆ ಮಾಹಿತಿ ನೀಡಿದ ಅರಣ್ಯ ಇಲಾಖೆ ಅಧಿಕಾರಿ ಈ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ. ಕಂದಾಯ ಇಲಾಖೆ ಹಕ್ಕುಪತ್ರ ನೀಡಿರುವುದು ನಮಗೆ ಗೊತ್ತೇ ಇಲ್ಲ ಎಂದರು.

'ದಂಡ' ಹಣ ವಾಪಾಸ್ ಮಾಡಲು ಆಗ್ರಹ:ಅನರ್ಹ ಬಿಪಿಎಲ್ ಪಡಿತರ ಹೊಂದಿದ್ದ ಜನರಿಗೆ ದಂಡ ವಿಧಿಸಿ ಸುಮಾರು ರೂ.4.51 ಲಕ್ಷ ಹಣ ಸಂಗ್ರಹ ಮಾಡಲಾಗಿದೆ. ಆದರೆ ನಂತರ ಸರ್ಕಾರ ಈ ದಂಡ ವಿಧಿಸುವುದನ್ನು ರದ್ದು ಮಾಡಿತ್ತು. ಹೀಗಿರುವಾಗ ದಂಡ ಕಟ್ಟಿದ ಮಂದಿಯ ಹಣವನ್ನು ತಕ್ಷಣ ವಾಪಾಸು ಮಾಡುವಂತೆ ಒತ್ತಾಯಿಸಿದರು. ಆದರೆ ಈ ಕುರಿತು ನಿರ್ಣಯ ಕೈಗೊಳ್ಳಲು ಆಗುವುದಿಲ್ಲ ಎಂದು ಅಧ್ಯಕ್ಷರು ತಿಳಿಸಿದರು.

ಮರಳು ಮಾರಾಟ- ಗ್ರಾ.ಪಂ.ಗಳಿಗೆ ನೀಡಲು ನಿರ್ಣಯ: ಮರಳು ಮಾರಾಟದ ಟೆಂಡರ್ ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದ್ದು, ಸ್ಥಳೀಯ ಜನತೆಗೆ ಅನುಕೂಲವಾಗುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಮರಳು ಮಾರಾಟದ ಗುತ್ತಿಗೆ ನೀಡುವಂತೆ ಆಗ್ರಹಿಸಿ ನಿರ್ಣಯ ಕೈಗೊಳ್ಳಲಾಯಿತು. ಮರಳು ಮಾರಾಟದ ಕುರಿತು ಮಾಹಿತಿ ನೀಡಿದ ಗಣಿ ಇಲಾಖೆ ಅಧಿಕಾರಿಯವರು ಗುತ್ತಿಗೆದಾರರು ಬೆಲೆ ನಿಗದಿ ಮಾಡುತ್ತಾರೆ ಎಂದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಈಶ್ವರ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಇದ್ದರು.

ABOUT THE AUTHOR

...view details