ಕರ್ನಾಟಕ

karnataka

’ಹತ್ಯಾಚಾರಿ’ಗಳನ್ನ ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನು ಜಾರಿಯಾಗಲಿ‌: ಶಕುಂತಲಾ ಶೆಟ್ಟಿ

By

Published : Oct 19, 2021, 7:43 PM IST

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರು ಇತ್ತೀಚೆಗೆ ಸುರತ್ಕಲ್​ನಲ್ಲಿ ನಡೆದ ಭಾಷಣದಲ್ಲಿ 'ಸುರತ್ಕಲ್ ನ ಬಂಟ ಸಮುದಾಯದ ಹೆಣ್ಣೊಬ್ಬಳಿಗೆ ಮುಸ್ಲಿಂ ಯುವಕನೊಂದಿಗೆ ಪ್ರೀತಿಯಿದೆ. ಆಕೆ 30 ವರ್ಷವಾದರೂ ವಿವಾಹವಾಗಿಲ್ಲ' ಎಂದು ಹೇಳಿಕೆ ನೀಡಿದ್ದಾಳೆ. ಹಾಗಾದರೆ, ಚೈತ್ರಾ ಕುಂದಾಪುರ ಅವರದ್ದೇ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ 55 ವರ್ಷವಾದರೂ ವಿವಾಹವಾಗಿಲ್ಲ ಏಕೆ ಎಂದು ಪ್ರಶ್ನಿಸಿಲ್ಲ ಎಂದು ಶಕುಂತಲಾ ಶೆಟ್ಟಿ ಟಾಂಗ್ ನೀಡಿದ್ದಾರೆ.

Former MLA Shakuntala Shetty
ಮಾಜಿ ಶಾಸಕಿ‌ ಶಕುಂತಲಾ ಶೆಟ್ಟಿ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ಸಾಕಷ್ಟು ದೌರ್ಜನ್ಯ ಪ್ರಕರಣಗಳು ಕಂಡು ಬರುತ್ತಿದ್ದರೂ ಸರ್ಕಾರ ಅದನ್ನು ತಡೆಯಲು ಆಸಕ್ತಿ ವಹಿಸುತ್ತಿಲ್ಲ. ಆದ್ದರಿಂದ, ಅತ್ಯಾಚಾರ ಮಾಡಿ ಕೊಲೆ ಮಾಡುವವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನು ಜಾರಿಯಾಗಲಿ‌ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಆಗ್ರಹಿಸಿದರು.

ಮಾಜಿ ಶಾಸಕಿ‌ ಶಕುಂತಲಾ ಶೆಟ್ಟಿ

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಂತಹ ಶಿಕ್ಷೆ ನಾಲ್ಕು ಜನರಿಗಾದಲ್ಲಿ ತನ್ನಷ್ಟಕ್ಕೇ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳುತ್ತದೆ. ಹೆಣ್ಣುಮಕ್ಕಳ ಮೇಲಿನ‌ ಅತ್ಯಾಚಾರ, ಅನಾಚಾರ ಹಾಗೂ ದೌರ್ಜನ್ಯ ತಡೆಯಲು ಕಠಿಣವಾದ ಶಾಸನ ಜಾರಿಯಾಗಬೇಕಿದೆ ಎಂದು ಹೇಳಿದರು.

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರು ಇತ್ತೀಚೆಗೆ ಸುರತ್ಕಲ್​ನಲ್ಲಿ ನಡೆದ ಭಾಷಣದಲ್ಲಿ 'ಸುರತ್ಕಲ್​​​ನ ಬಂಟ ಸಮುದಾಯದ ಹೆಣ್ಣೊಬ್ಬಳಿಗೆ ಮುಸ್ಲಿಂ ಯುವಕನೊಂದಿಗೆ ಪ್ರೀತಿಯಿದೆ. ಆಕೆ 30 ವರ್ಷವಾದರೂ ವಿವಾಹವಾಗಿಲ್ಲ' ಎಂದು ಹೇಳಿಕೆ ನೀಡಿದ್ದಾಳೆ. ಹಾಗಾದರೆ, ಚೈತ್ರಾ ಕುಂದಾಪುರ ಅವರದ್ದೇ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರು 55 ವರ್ಷವಾದರೂ ವಿವಾಹವಾಗಿಲ್ಲವೆಂದು ಯಾಕೆ ಪ್ರಶ್ನಿಸಿಲ್ಲ ಎಂದು ಶಕುಂತಲಾ ಶೆಟ್ಟಿ ಟಾಂಗ್ ನೀಡಿದರು.

ಮಾಜಿ ಶಾಸಕಿ‌ ಶಕುಂತಲಾ ಶೆಟ್ಟಿ

ಚೈತ್ರಾ ಕುಂದಾಪುರ ಬೊಟ್ಟು ಮಾಡಿರುವ ಯುವತಿಯು ಸುರತ್ಕಲ್ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಹಾಗೂ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಅವರ ಸಮುದಾಯದರು. ಹಾಗಾದರೆ, ಚೈತ್ರಾ ಕುಂದಾಪುರ ಅವರು ಆ ಬಂಟ ಸಮುದಾಯದ ಯುವತಿಯನ್ನು ಪ್ರೀತಿ ಮಾಡಿರುವ ಮುಸ್ಲಿಂ ಯುವಕ ಯಾರು? ಎಂದು ತೋರಿಸಿಕೊಡಿ ಎಂದು‌ ಸವಾಲು ಹಾಕುತ್ತೇನೆ. ಅದಾಗದಿದ್ದಲ್ಲಿ ಸಾರ್ವಜನಿಕವಾಗಿ ಇಡೀ ದ.ಕ ಜಿಲ್ಲೆಯ ಹೆಣ್ಣು ಮಕ್ಕಳ ಬಗ್ಗೆ ಕ್ಷಮೆ ಯಾಚನೆ ಮಾಡಿ. ಅದೇ ರೀತಿ ಚೈತ್ರಾ ಕುಂದಾಪುರ ಅವರೂ ಹೆಣ್ಣು. ಆಕೆ ಯಾವಾಗ? ಎಷ್ಟು ವರ್ಷದ ಒಳಗೆ ಮದುವೆಯಾಗಲಿದ್ದಾರೆ ಅದನ್ನೂ ತಿಳಿಸಲಿ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ದ. ಕ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ

ಕುಂದಾಪುರದ ಚೈತ್ರಾ ಅವರಿಗೆ ಸುರತ್ಕಲ್​ನ ಯುವತಿ ಮುಸ್ಲಿಂ ಯುವಕನನ್ನು ಪ್ರೀತಿ ಮಾಡುವ ವಿಚಾರ ತಿಳಿಯುವುದು ಹೇಗೆ?. ಆದ್ದರಿಂದ ನಿಮಗೆ ಇದನ್ನು ಹೇಳಿಕೊಟ್ಟವರು ಯಾರು? ಎಂದು ಮೊದಲು ತಿಳಿಸಿ. ಅವರ ಹಣೆಬರಹವೂ ನಮಗೆ ತಿಳಿಯುತ್ತದೆ. ಸೀತಾ ಸಾವಿತ್ರಿ, ಗೀತಾ ಗಾಯತ್ರಿ ಇದ್ದ ಈ ದೇಶದಲ್ಲಿ ಲಂಕಿಣಿ ಶೂರ್ಪನಖಿಯರೂ ಇದ್ದರು.‌ ನೀವು ಯಾವ ಪಂಗಡಕ್ಕೆ ಸೇರಿದವರೆಂದು ಮೊದಲು ತಿಳಿಸಿ. ಚೈತ್ರಾ ಕುಂದಾಪುರ ಅವರಿಗೆ ಇಂತಹ ಹಿಂದೂ ಪಾಠ ಯಾರು ಮಾಡಿದ್ದು?. ಯಾವ ಸಂಘಟನೆ ಮಾಡಿದ್ದು ಎಂದು ಪ್ರಶ್ನಿಸಿದರು.

ಸುರಿಯವನ್ನು ತಲವಾರ್​ಗೆ ಹೋಲಿಸಿದ್ದು ತಪ್ಪು

ಅದೇ ಸುರತ್ಕಲ್​ನ ಭಾಷಣದಲ್ಲಿ ತುಳುನಾಡಿನ ಕ್ರಾಂತಿಪುರುಷರಾದ ಕೋಟಿ-ಚೆನ್ನಯರ ಕೈಯಲ್ಲಿರುವ ಆಯುಧವಾದ ಸುರಿಯವನ್ನು ತಲವಾರಿಗೆ ಹೋಲಿಸಿದ್ದು ಶುದ್ಧ ತಪ್ಪು. ಸುರಿಯಕ್ಕೆ ಅದರದ್ದೇ ಆದ ಗೌರವವಿದೆ. ಬಿಲ್ಲವ ಸಮುದಾಯಕ್ಕೆ ಅದೊಂದು ಪೂಜನೀಯ ವಸ್ತು. ಅಂತಹ ವಸ್ತುವನ್ನು ತಲವಾರಿಗೆ ಹೋಲಿಕೆ ಮಾಡಿರುವ ಚೈತ್ರಾ ಕುಂದಾಪುರ ಅವರಿಗೆ ಕರಾವಳಿಯ ಮಣ್ಣಿನ ಮಹತ್ವವೇ ತಿಳಿದಿಲ್ಲ.

ಅಲ್ಲದೇ, ಅವರ ಬುದ್ಧಿವಂತಿಕೆ ಕರತಾಡನಕ್ಕೆ ಮಾತ್ರ ಸೀಮಿತವಾಗಿದೆ. ಆದ್ದರಿಂದ, ಚೈತ್ರಾ ತಮ್ಮ ನಾಲಿಗೆ ಹರಿಯಬಿಡುವುದನ್ನು ಜಾಗ್ರತೆ ಮಾಡಿಕೊಳ್ಳಲಿ.‌ ಹೆಣ್ಣು ಹೆಣ್ಣಾದರೆ ಮಾತ್ರ ಚೆನ್ನ. ಆದರೆ, ಚೈತ್ರಾ ಸಮಾಜಕ್ಕೆ ಹುಣ್ಣಾಗುವ ಲಕ್ಷಣ ಕಾಣುತ್ತಿದೆ ಎಂದು ಹೇಳಿದರು.

ನೈತಿಕ ಪೊಲೀಸ್ ಗಿರಿ ಹತ್ತಿಕ್ಕುವಲ್ಲಿ ಮಂಗಳೂರು ಪೊಲೀಸರು ವಿಫಲ: ಶಾಲೆಟ್ ಪಿಂಟೊ

ಇತ್ತೀಚೆಗೆ ದ.ಕ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚುತ್ತಿವೆ. ಸುರತ್ಕಲ್​ನಲ್ಲಿ ವಿದ್ಯಾರ್ಥಿಗಳಿದ್ದ ಕಾರಿನ ಮೇಲಿನ ದಾಳಿಯಲ್ಲಿ ವಿಡಿಯೋ ದಾಖಲೆಗಳಿದ್ದರೂ ಪೊಲೀಸರು ಸರಿಯಾದ ಕ್ರಮ ಕೈಗೊಂಡಿಲ್ಲ. ಪೊಲೀಸರು ವಿದ್ಯಾರ್ಥಿನಿಯರು ಈ ಬಗ್ಗೆ ಯಾವುದೇ ದೂರು ದಾಖಲಿಸಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಸಾಕಷ್ಟು ಆಧಾರ ಇರುವಾಗ ಪೊಲೀಸರಿಗೆ ಸುಮೋಟೊ ಕೇಸ್ ದಾಖಲು ಮಾಡಬಹುದಿತ್ತು. ಆದ್ದರಿಂದ, ಹೆಣ್ಣು ಮಕ್ಕಳ ರಕ್ಷಣೆಯ ವಿಚಾರದಲ್ಲಿ ಜಿಲ್ಲೆಯ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ದ. ಕ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ ಆಕ್ರೋಶ ವ್ಯಕ್ತಪಡಿಸಿದರು.

ಓದಿ:ದೇಶದಲ್ಲಿ ಜಿ23 ಕುತಂತ್ರ ಮಾಡಿದ್ರೆ, ರಾಜ್ಯದಲ್ಲಿ ಸಿದ್ದರಾಮಯ್ಯ ಮಾಡುತ್ತಿದ್ದಾರಷ್ಟೇ.. ಸಚಿವ ಆರ್. ಅಶೋಕ್​

ABOUT THE AUTHOR

...view details