ಪುತ್ತೂರು: ಉಪ್ಪಿನಂಗಡಿಯ ಹಳೇ ಗೇಟಿನಲ್ಲಿ ಹಿಂದೂ ಯುವಕನ ಹಸಿ ಮೀನು ಮಾರಾಟದ ಅಂಗಡಿಗೆ ಬೆಂಕಿ ಇಟ್ಟು 24 ಗಂಟೆ ಕಳೆದರೂ ಕೃತ್ಯ ಎಸಗಿದ ದುಷ್ಕರ್ಮಿಗಳನ್ನೂ ಬಂಧಿಸಿಲ್ಲ, ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿ ಉಪ್ಪಿನಂಗಡಿಯ ನಾಗರಿಕರು ಹಾಗೂ ವಿವಿಧ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.
ಅಪರಾಧಿಗಳ ಪತ್ತೆ ಹಚ್ಚುವಂತೆ ಹಿಂದೂ ಸಂಘಟನೆ ಪ್ರತಿಭಟನೆ..! ಕಜೆಕಾರು ಅಶೋಕ್ ಶೆಟ್ಟಿ ಹಾಗೂ ಅವರ ಸಹೋದರ ಹಿಂದೂ ಸಂಘಟನೆ ಮುಖಂಡ ಮೋಹನದಾಸ್ ಎಂಬವರಿಗೆ ಸೇರಿದ ಮೀನಿನ ಮಾರಾಟದ ಶೆಡ್ಡಿಗೆ ಆ. 22ರ ತಡರಾತ್ರಿ 2 ಗಂಟೆಯ ಸುಮಾರಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.
ಇದರಿಂದ ಅಂಗಡಿಯ ಒಳಗಿದ್ದ ಎರಡು ಪ್ರಿಡ್ಜ್, ತೂಕದ ಯಂತ್ರ ಹಾಗೂ ಹಸಿ ಮೀನು ಸೇರಿದಂತೆ ಒಟ್ಟು 1 ಲಕ್ಷದ 40 ಸಾವಿರ ರೂ. ಮೌಲ್ಯದ ವಸ್ತು ನಷ್ಟ ಸಂಭವಿಸಿದೆ ಎಂದು ಆಶೋಕ್ ಶೆಟ್ಟಿ ಅವರು ದೂರು ನೀಡಿದ್ದು, ಉಪ್ಪಿನಂಗಡಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 506 ಹಾಗೂ 436ರಡಿ ಪ್ರಕರಣ ದಾಖಲಾಗಿದೆ.
ನಿನ್ನೆ ಘಟನಾ ಸ್ಥಳಕ್ಕೆ ಹಿಂದೂ ಕಾರ್ಯಕರ್ತರ ಜತೆ ಭೇಟಿ ನೀಡಿದ ಅರುಣ್ ಕುಮಾರ್ ಪುತ್ತಿಲ 24 ಗಂಟೆಯೊಳಗಡೆ ಆರೋಪಿಗಳ ಬಂಧನವಾಗದಿದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಕರೆ ನೀಡಿದ್ದರು. ಅದರಂತೆ ಇಂದು ಹಿಂದೂ ಕಾರ್ಯಕರ್ತರು ಹಾಗೂ ಉಪ್ಪಿನಂಗಡಿಯ ನಾಗರಿಕರು ನ್ಯಾಯಕ್ಕಾಗಿ ಆಗ್ರಹಿಸಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಪೊಲೀಸ್ ಇಲಾಖೆಯ ಆರೋಪಿಗಳ ಬಂಧನಕ್ಕೆ ಸಮಯಾವಕಾಶ ಕೇಳಿದ್ದು, ಅದರಂತೆ ಗುರುವಾರದವರೆಗೆ ಸಮಯಾವಕಾಶ ನೀಡಿದ ಪ್ರತಿಭಟನಾಕಾರರು ಅದರೊಳಗಡೆ ಆರೋಪಿಗಳ ಬಂಧನವಾಗದಿದ್ದಲ್ಲಿ ಶುಕ್ರವಾರ ಉಪ್ಪಿನಂಗಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.