ಕರ್ನಾಟಕ

karnataka

ETV Bharat / state

ಏರ್ ಇಂಡಿಯಾ ವಿಮಾನದಲ್ಲಿ ಹಾಜಬ್ಬಗೆ ಅಭಿನಂದನೆ: ಭಾವುಕರಾದ ಅಕ್ಷರ ಸಂತ- ವಿಡಿಯೋ

Harekala Hajabba felicitated in Air India flight: ವಿಮಾನದ ಕ್ಯಾಪ್ಟನ್​ ಮಾತುಗಳಿಗೆ ಆನಂದ ಭಾಷ್ಪ ಹರಿಸಿದ ಅಕ್ಷರ ಸಂತ ಹರೇಕಲ ಹಾಜಬ್ಬ ಭಾವುಕರಾದರು.

By ETV Bharat Karnataka Team

Published : Nov 24, 2023, 2:20 PM IST

Updated : Nov 24, 2023, 8:51 PM IST

Felicitation to Harekala Hajabba on Air India flight
ಏರ್​ ಇಂಡಿಯಾ ವಿಮಾನದಲ್ಲಿ ಹರೇಕಳ ಹಾಜಬ್ಬ ಅವರಿಗೆ ಅಭಿನಂದನೆ

ಏರ್​ ಇಂಡಿಯಾ ವಿಮಾನದಲ್ಲಿ ಹರೇಕಳ ಹಾಜಬ್ಬ ಅವರಿಗೆ ಅಭಿನಂದನೆ

ಮಂಗಳೂರು: ವಿಮಾನದಲ್ಲಿ ಹೊರಟಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಏರ್ ಇಂಡಿಯಾ ಎಕ್ಸ್​ಪ್ರೆಸ್‌ ವಿಮಾನ ಸಿಬ್ಬಂದಿ ಅಭಿನಂದಿಸಿ ಗೌರವ ತೋರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಿದಾಯ ಫೌಂಡೇಶನ್ ‌ಜುಬೈಲ್ ಘಟಕದ ವತಿಯಿಂದ ದುಬೈನ ದಮ್ಮಾಮ್​ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹರೇಕಳ ಹಾಜಬ್ಬ ಮಂಗಳೂರಿನಿಂದ ದಮ್ಮಾಮ್​ಗೆ ಏರ್ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅವರನ್ನು ಗುರುತಿಸಿದ ಏರ್ ಇಂಡಿಯಾ ವಿಮಾನದ ಸಿಬ್ಬಂದಿ, ಕ್ಯಾಪ್ಟನ್ ಗಮನಕ್ಕೆ ತಂದಿದ್ದಾರೆ. ಆಗ ವಿಮಾನದ ಕ್ಯಾಪ್ಟನ್ ವಿಮಾನದಲ್ಲಿರುವ ಪ್ರಯಾಣಿಕರಿಗೆ ಹಾಜಬ್ಬ ಅವರನ್ನು ಪರಿಚಯಿಸಿದರು. "ಶಿಕ್ಷಣ ಕ್ಷೇತ್ರಕ್ಕೆ ಅಪೂರ್ವವಾದ ಸೇವೆ ಸಲ್ಲಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರು ನಮ್ಮ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ನಮಗೆಲ್ಲ ತುಂಬಾ ಸಂತೋಷವಾಗಿದೆ. ಅವರಿಗೆ ಹೃದಯ ತುಂಬಿದ ಅಭಿನಂದನೆಗಳು" ಎಂದು ಹೇಳಿದ್ದಾರೆ.

ಕೆಲವು ನಿಮಿಷಗಳ ಕಾಲ ಹಾಜಬ್ಬ ಅವರ ಸ್ವಾರ್ಥವಿಲ್ಲದ ಸಾಧನೆಯ ಬಗ್ಗೆ ವಿಮಾನದ ಕ್ಯಾಪ್ಟನ್​ ಕೊಂಡಾಡಿದ್ದಾರೆ. ಅವರ ಮಾತುಗಳಿಗೆ ಹರೇಕಳ ಹಾಜಬ್ಬ ಅವರು ಭಾವುಕರಾಗಿದ್ದು, ಆನಂದಭಾಷ್ಪ ಹರಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕ್ಯಾಪ್ಟನ್​ ಮಾತುಗಳ ನಡು-ನಡುವೆಯೇ ಹಾಜಬ್ಬ ಅವರು ಕ್ಯಾಪ್ಟನ್​ ಸೇರಿದಂತೆ, ವಿಮಾನದಲ್ಲಿದ್ದ ಪ್ರಯಾಣಿಕರಿಗೆಲ್ಲರಿಗೂ ಸೇರಿ, ಎಂದಿನಂತೆ ತಮ್ಮ ಮುಗ್ಧತೆಯಿಂದ ತಲೆಬಾಗಿ ಕೈಮುಗಿದು ವಿಧೇಯತೆಯನ್ನು ತೋರಿದ್ದಾರೆ. ಪ್ರಯಾಣಿಕರು ಚಪ್ಪಾಳೆ ತಟ್ಟುವ ಮೂಲಕ ಅವರಿಗೆ ಗೌರವ ಸೂಚಿಸಿದರು. ಪ್ರಯಾಣಿಕರು ಕೆಲವರು ಸೇರಿದಂತೆ ವಿಮಾನದ ಸಿಬ್ಬಂದಿ ಹರೇಕಳ ಹಾಜಬ್ಬ ಜೊತೆಗೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆಸಿಕೊಂಡರು.

ನಿಸ್ವಾರ್ಥ ಸಮಾಜಸೇವೆಗೆ ದೊರೆತ ಪದ್ಮಶ್ರೀ: 1978-79ರಲ್ಲಿ ತಮ್ಮ ಊರಿನಲ್ಲಿ ಸರ್ಕಾರಿ ಶಾಲೆ ತೆರೆಯುವ ಕನಸು ಕಂಡವರು ಹರೇಕಳ ಹಾಜಬ್ಬ. ಕನಸು ಕಂಡದ್ದು ಮಾತ್ರವಲ್ಲದೆ ಶಾಸಕರು, ದಾನಿಗಳ ಸಹಾಯ ಹಾಗೂ ಸಾಲ ಮಾಡಿ ಶಾಲೆಯನ್ನೂ ಕಟ್ಟಿಸಿದ್ದಾರೆ. ಕಿತ್ತಳೆ ಹಣ್ಣು ಮಾರಾಟ ಮಾಡಿ ಶಾಲೆ ನಿರ್ಮಾಣಕ್ಕೆಂದು ತೆಗೆದ ಸಾಲವನ್ನೂ ತೀರಿಸಿದ್ದಾರೆ. ಆದರೆ ಈ ವ್ಯಕ್ತಿ ಯಾವತ್ತೂ ಶಾಲೆ ತನ್ನೊಬ್ಬನದೇ ಪರಿಶ್ರಮದ ಫಲವೆಂದು ಬೀಗದೆ, ಪ್ರತಿ ಬಾರಿಯೂ ಶಾಲೆಗೆ ಜಾಗ ಕೊಳ್ಳಲು, ಕಟ್ಟಡ ಕಟ್ಟಲು, ಸಹಾಯದ ಮಾಡಿದ ದಾನಿಗಳನ್ನು, ನೂರಾರು ಜನರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿ ಹರೇಕಳದಲ್ಲಿ ಹಾಜಬ್ಬ ಆರಂಭಿಸಿದ ಕನ್ನಡ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕಿತ್ತು ತಿನ್ನುವ ಬಡತನದ ನಡುವೆಯೂ, ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಹರೇಕಳ ಹಾಜಬ್ಬ ಅವರಿಗೆ 2020ರ ಸಾಲಿನ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಶ್ರೀ ಮುಡಿಗೇರಿದೆ.

ಇದನ್ನೂ ಓದಿ:ಸಾಮಾಜಿಕ ಕೆಲಸದಲ್ಲಿ ಎಲ್ಲ ಪಕ್ಷದವರು ಸಹಾಯ ಮಾಡಿದ್ದಾರೆ, ವಿವಾದ ಮಾಡಬೇಡಿ: ಹರೇಕಳ ಹಾಜಬ್ಬ

Last Updated : Nov 24, 2023, 8:51 PM IST

ABOUT THE AUTHOR

...view details