ಬೆಳ್ತಂಗಡಿ: ಆಗಸ್ಟ್ 19ರಂದು ಬಸವನಹುಳ ಬಾಧೆ ನಿರ್ಮೂಲನೆಗೆ ಕೃಷಿ ತೋಟದಲ್ಲಿ ಪ್ರಾತ್ಯಕ್ಷಿಕೆ ಮಾಹಿತಿ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಟಿವಿ ಭಾರತ್ ಫಲಶೃತಿ: ಆ.19ರಂದು ಬಸವನ ಹುಳು ನಿರ್ಮೂಲನೆಗೆ ಪ್ರಾತ್ಯಕ್ಷಿಕೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಬಸವನ ಹುಳು ಬಾಧೆಯಿಂದ ತತ್ತರಿಸಿದ ರೈತರಿಗೆ ಆಗಸ್ಟ್ 19ರಂದು ಪ್ರಾತ್ಯಕ್ಷಿಕೆ ಮಾಹಿತಿ ನೀಡಲಾಗುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಉರುವಾಲು ಗ್ರಾಮದ ಸುತ್ತಮುತ್ತ ಆಫ್ರಿಕನ್ ಬಸವನಹುಳ ಬಾಧೆ ಹೆಚ್ಚಾಗಿದ್ದು, ಈ ಕುರಿತು ಆಗಸ್ಟ್ 13ರಂದು ಈಟಿವಿ ಭಾರತ ಸುದ್ದಿ ಪ್ರಕಟಿಸಿತ್ತು. ಈ ಕುರಿತು ಕೃಷಿಕರಿಗೆ ಮಾಹಿತಿ ನೀಡಲು ತೋಟಗಾರಿಕೆ ಹಾಗೂ ಜಿವಿಕೆ ಅಧಿಕಾರಿಗಳು ಭೇಟಿ ನೀಡಿ, ಹುಳು ನಿರ್ಮೂಲನೆಯ ಬಗ್ಗೆ ಮೌಖಿಕ ಮಾಹಿತಿಯನ್ನು ನೀಡಲಾಯಿತು. ನಿಯಂತ್ರಣ ಕ್ರಮಗಳ ಕುರಿತು ಕೆಲವು ವಿಚಾರಗಳನ್ನು ನೀಡಿದರು. ಆದರೆ, ಅವುಗಳು ಅಸಮರ್ಪಕ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಔಷಧಿಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಬೇಕೆಂದು ರೈತರು ಒತ್ತಾಯಿಸಿದರು.
ಈಗಾಗಲೇ ಕಳೆದ 4 ವರ್ಷಗಳಿಂದ ಹುಳಗಳ ಬಾಧೆಯಿಂದ ನಾವು ತತ್ತರಿಸಿ ಹೋಗಿದ್ದೇವೆ. ಯಾವುದೇ ರೀತಿಯ ತರಕಾರಿಯಾಗಲಿ ಹಾಗೂ ಇನ್ನಿತರ ಕೃಷಿ ಮಾಡದಂತಹ ಸ್ಥಿತಿ ನಮ್ಮದಾಗಿದೆ. ಹಲವು ರೀತಿಯಲ್ಲಿ ನಿಯಂತ್ರಣಕ್ಕೆ ಔಷಧಿಗಳನ್ನು ಉಪಯೋಗಿಸಿದ್ದೇವೆ. ಅಧಿಕಾರಿಗಳು ನಮಗೆ ಸರಿಯಾದ ರೀತಿಯಲ್ಲಿ ಇದರ ನಿರ್ಮೂಲನೆ ಔಷಧಿಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಸ್ಥಳೀಯ ಕೃಷಿಕ ಸುಶ್ರುತ್ ಜಿ.ಭಟ್ ಆಗ್ರಹಿಸಿದರು.