ಮಂಗಳೂರು :ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು 311 ಮಂದಿಯಲ್ಲಿ ಸೋಂಕು ಕಂಡು ಬಂದಿದ್ರೆ, 8 ಮಂದಿ ಸಾವನ್ನಪ್ಪಿದ್ದಾರೆ. ಇಂದು ಕೊರೊನಾದಿಂದ ಮೃತಪಟ್ಟ 8 ಮಂದಿಯಲ್ಲಿ ಇಬ್ಬರು ಉತ್ತರಕನ್ನಡ ಜಿಲ್ಲೆಯವರಾಗಿದ್ದು, ಒಬ್ಬರು ದಾವಣಗೆರೆ ಮತ್ತು 5 ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ 70 ವರ್ಷದ ಪುರುಷ, ಭಟ್ಕಳದವ 68 ವರ್ಷದ ಮಹಿಳೆ , ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ 69 ವರ್ಷದ ಪುರುಷ , ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ 72 ವರ್ಷದ ಮಹಿಳೆ, 56 ವರ್ಷದ ಪುರುಷ, 72 ವರ್ಷದ ಪುರುಷ, ಸುಳ್ಯ ತಾಲೂಕಿನ 53 ವರ್ಷದ ಪುರುಷ, ಬೆಳ್ತಂಗಡಿ ತಾಲೂಕಿನ 65 ವರ್ಷದ ಪುರುಷ ಸಾವನ್ನಪ್ಪಿದವರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ .
ಹೊರ ಜಿಲ್ಲೆಗಳಿಂದ ಹೆಚ್ಚಿನ ಚಿಕಿತ್ಸೆಗೆ ದಕ್ಷಿಣ ಕನ್ನಡ ಜಿಲ್ಲೆಯ ಆಸ್ಪತ್ರೆಗಳಲ್ಲಿ ದಾಖಲಾಗಿ ಈವರೆಗೆ ಮರಣ ಹೊಂದಿದ 12 ಪ್ರಕರಣಗಳಲ್ಲಿ ಕೊರೊನಾ ಸೋಂಕು ಇರುವುದನ್ನು ಪತ್ತೆ ಹಚ್ಚಲಾಗಿದೆ. ಈವರೆಗೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಾಲ್ಕು ಮಂದಿ, ಶಿರಸಿಯ ಒಬ್ಬರು, ಬೆಳಗಾವಿ ಜಿಲ್ಲೆಯ ರಾಮದುರ್ಗದ ಒಬ್ಬರು, ಹಾಸನ ಜಿಲ್ಲೆಯ ಸಕಲೇಶಪುರದ ಒಬ್ಬರು, ಚಿಕ್ಕಮಗಳೂರಿನ ಇಬ್ಬರು, ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಒಬ್ಬರು, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಒಬ್ಬರು, ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಒಬ್ಬರು ಕೊರೊನಾದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 311 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಇದು ಈವರೆಗೆ ಪತ್ತೆಯಾದ ಕೊರೊನಾ ಪ್ರಕರಣದಲ್ಲಿ ಅತೀ ಹೆಚ್ಚಿನದು. ಇಂದು ಪತ್ತೆಯಾದ ಕೊರೊನಾ ಪ್ರಕರಣದ ಮೂಲವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 3074 ಕೊರೊನಾ ಪ್ರಕರಣ ದೃಢಪಟ್ಟಿವೆ. ಇಂದು 115 ಮಂದಿ ಗುಣಮುಖರಾಗಿದ್ದು, ಈವರೆಗೆ 1278 ಮಂದಿ ಗುಣಮುಖರಾಗಿದ್ದಾರೆ. 1725 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.