ಕರ್ನಾಟಕ

karnataka

By

Published : Jul 9, 2020, 6:13 PM IST

ETV Bharat / state

ಕೊರೊನಾ ಸೋಂಕಿತರ ಗಾಯದ ಮೇಲೆ ಬರೆ ಎಳೆದಂತಾಗಿದೆ: ಮುನೀರ್ ಕಾಟಿಪಳ್ಳ

ದ.ಕ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಸಮುದಾಯದ ಮಧ್ಯೆ ಹರಡಿರೋದು ಎಲ್ಲರಿಗೂ ತಿಳಿದ ಸಂಗತಿ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಹಣಕ್ಕಾಗಿ ಪೀಡಿಸುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ಸಂದರ್ಭ ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

Mangalore
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ

ಮಂಗಳೂರು: ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಖಾಸಗಿ ಆಸ್ಪತ್ರೆಗಳಲ್ಲಿಯೂ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸೋಂಕಿತರು ಗುಣಮುಖರಾಗಿ ತೆರಳುವಾಗ ಲಕ್ಷಾಂತರ ರೂ. ಹಣವನ್ನು ಖಾಸಗಿ ಆಸ್ಪತ್ರೆಗಳು ವಸೂಲಿ ಮಾಡುತ್ತಿವೆ. ಇದು ಸೋಂಕಿತರಿಗೆ ಗಾಯದ ಮೇಲೆ ಮತ್ತೆ ಬರೆ ಎಳೆದಂತಹ ಸ್ಥಿತಿಯಂತಾಗಿದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೊನಾ ಸೋಂಕಿನಿಂದ ದಾಖಲಾಗಿ ಬುಧವಾರ ಗುಣಮುಖನಾಗಿ ಬಿಡುಗಡೆ ಹೊಂದಿರುವವರ ಬಿಲ್

ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿನಿಂದ ದಾಖಲಾಗಿ ಬುಧವಾರ ಗುಣಮುಖನಾಗಿ ಬಿಡುಗಡೆ ಹೊಂದಿರುವವರ ಬಿಲ್ ವೈರಲ್ ಆಗಿದ್ದು, 1,80,000 ಲಕ್ಷ ರೂ. ಬಿಲ್ ಹಾಕಲಾಗಿದೆ. ಈ ಬಿಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನ ಕಿಡಿಕಾರಿದ್ದಾರೆ.

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ

ಈ ಬಗ್ಗೆ ಮುನೀರ್ ಕಾಟಿಪಳ್ಳ ಮಾತನಾಡಿ, ದ.ಕ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ಸಮುದಾಯದ ಮಧ್ಯೆ ಹರಡಿರೋದು ಎಲ್ಲರಿಗೂ ತಿಳಿದ ಸಂಗತಿ. ಈ ಸಂದರ್ಭ ಜಿಲ್ಲಾಡಳಿತ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಹಣಕ್ಕಾಗಿ ಪೀಡಿಸುವ ಪ್ರಕರಣಗಳು ವರದಿಯಾಗುತ್ತಲೇ ಇವೆ. ರಾಜ್ಯ ಸರ್ಕಾರ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ದಿನಕ್ಕೆ 10 ಸಾವಿರ ರೂ. ದರ ನಿಗದಿ ಮಾಡಿತ್ತು. ನಾವು ಇದನ್ನು ವಿರೋಧಿಸಿದ್ದರೂ, ಸರ್ಕಾರ ಅದಕ್ಕೆ ಮನ್ನಣೆ ನೀಡಿರಲಿಲ್ಲ. ಆದರೆ ಇದೀಗ ಖಾಸಗಿ ಆಸ್ಪತ್ರೆಗಳು ಸರ್ಕಾರದ ಈ ನೀತಿಯನ್ನು ಬಳಸಿಕೊಂಡು ದಿನಕ್ಕೆ ರೋಗ ಲಕ್ಷಣ ಇಲ್ಲದಿರುವವರಿಂದಲೂ, ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದಿರುವವರಿಂದಲೂ 15 ಸಾವಿರ ರೂ. ವರೆಗೆ ವಸೂಲು ಮಾಡುತ್ತಿದೆ ಎಂದು ಆರೋಪಿಸಿದರು.

ಅಲ್ಲದೆ ಸೋಂಕಿನ ಲಕ್ಷಣ ಇಲ್ಲದಿರುವವರನ್ನು ಮನೆಗೆ ಕಳುಹಿಸಿ ಕ್ವಾರಂಟೈನ್ ವ್ಯವಸ್ಥೆ ಮಾಡಬಹುದು ಎಂದು ಘೋಷಿಸಿದ್ದರೂ, ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ 10 ದಿನಗಳ ಕಾಲ ಆಸ್ಪತ್ರೆಗಳಲ್ಲಿಯೇ ಇರಿಸಲು ಒತ್ತಾಯಿಸುತ್ತಿವೆ. ಇದರಿಂದ ಒಬ್ಬ ರೋಗಿಯಿಂದ 1.20 ಲಕ್ಷ ರೂ.ನಿಂದ 1.50ಲಕ್ಷ ರೂ. ವರೆಗೂ ಹಣ ವಸೂಲಿ ಮಾಡುತ್ತಿವೆ ಎಂದು ದೂರಿದರು.

ಜಿಲ್ಲಾಡಳಿತದ ಪ್ರಕಾರ ಆಗಸ್ಟ್‌ ಅಂತ್ಯದ ವೇಳೆಗೆ ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಮಾಣ 8 ಸಾವಿರಕ್ಕೆ ಏರಿಕೆಯಾಗಬಹುದು. ಆದ್ದರಿಂದ ಸೋಂಕಿತನಿಗೆ ಮನೆಯಲ್ಲಿಯೇ ಕ್ವಾರಂಟೈನ್ ಗೆ ಒಳಗಾಗಲು ವ್ಯವಸ್ಥೆ ಇಲ್ಲದಿದ್ದಲ್ಲಿ ಆರೈಕೆ ಕೇಂದ್ರಗಳನ್ನು ಸ್ಥಾಪಿಸಬೇಕು ಎಂಬುದು ಸರ್ಕಾರದ ನೀತಿ. ಆದರೆ ಈವರೆಗೆ ಯಾವುದೇ ರೀತಿಯಲ್ಲಿ ಜಿಲ್ಲಾಡಳಿತ ಆರೈಕೆಯ ಕೇಂದ್ರಗಳನ್ನು ನಿರ್ಮಿಸಿಲ್ಲ. ಪರಿಣಾಮ ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ‌ ಬೆಡ್​ಗಳಿಲ್ಲದೆ ಖಾಸಗಿ ಆಸ್ಪತ್ರೆಗಳಲ್ಲೇ ದಾಖಲಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ಈ ಬಗ್ಗೆ ಜಿಲ್ಲಾಡಳಿತ ಮೌನ ವಹಿಸಿದ್ದು, ದ.ಕ. ಜಿಲ್ಲಾಧಿಕಾರಿ, ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು ಈ ಬಗ್ಗೆ ಮಾತನಾಡುತ್ತಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ದ.ಕ.ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಲು ವಿಶೇಷ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲಿ ಎಂದು ಮುನೀರ್ ಕಾಟಿಪಳ್ಳ ಒತ್ತಾಯಿಸಿದರು.

ABOUT THE AUTHOR

...view details