ಕರ್ನಾಟಕ

karnataka

By

Published : Jun 5, 2020, 8:26 PM IST

ETV Bharat / state

ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಗೆ ಬೇಕಿದೆ ಕಾಯಕಲ್ಪ

ನೇತ್ರಾವತಿ ಸ್ನಾನಘಟ್ಟ ಸುತ್ತಮುತ್ತ ನದಿಯಲ್ಲಿ ಮರಳು, ಹೂಳು, ತ್ಯಾಜ್ಯ ವಸ್ತುಗಳು ತುಂಬಿಕೊಂಡು ನದಿ ನೀರಿನ ಸುಗಮ ಹರಿವಿಗೆ ಅಡಚಣೆಯಾಗುತ್ತಿದೆ.

Netravathi river
Netravathi river

ಬೆಳ್ತಂಗಡಿ:ನದಿಗಳು ನಿತ್ಯ ಚಲನಶೀಲವಾಗಿದ್ದು, ಕ್ರಿಯಾಶೀಲವಾಗಿರುತ್ತವೆ. ನದಿಗಳು ಉಗಮ ಸ್ಥಾನದಿಂದ ಸಮುದ್ರ ಸೇರುವವರೆಗೂ ತಮ್ಮ ಉಭಯ ಮಗ್ಗುಲುಗಳಲ್ಲಿ ಜನರಿಗೆ ಉಪಯುಕ್ತವಾಗುತ್ತವೆ.

ಕುದುರೆಮುಖ ಪರ್ವತ ಶ್ರೇಣಿಯ ಎಳನೀರು ಘಾಟಿಯ ಬಂಗ್ರಬಲಿಗೆ ಕಣಿವೆ ಎಂಬಲ್ಲಿ ಉಗಮವಾಗುವ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಯೆಂದೇ ಕರೆಯಲ್ಪಡುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಮೂಲಕ ಹರಿದು ಹೋಗುವ ನೇತ್ರಾವತಿ ನದಿ ಪುಣ್ಯನದಿ ಎಂದೇ ಕರೆಸಿಕೊಳ್ಳುತ್ತದೆ. ಧರ್ಮಸ್ಥಳಕ್ಕೆ ಬರುವ ಭಕ್ತರು ನೇತ್ರಾವತಿಯಲ್ಲಿ ಮಿಂದು ಮಂಜುನಾಥ ಸ್ವಾಮಿಯ ದರ್ಶನಕ್ಕೆ ಹೋಗುವುದು ಸಂಪ್ರದಾಯವಾಗಿದೆ.

ನೇತ್ರಾವತಿ ನದಿಯು ಸಂಗಮ ಕ್ಷೇತ್ರ ಉಪ್ಪಿನಂಗಡಿಯಲ್ಲಿ ಕುಮಾರಧಾರ ನದಿಯೊಂದಿಗೆ ಸಂಗಮವಾಗಿ ಬಂಟ್ವಾಳದ ಮೂಲಕ ಹರಿದು ಮಂಗಳೂರಿನಲ್ಲಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

ಮಳೆಗಾಲದಲ್ಲಿ ನದಿ ನೀರಿನೊಂದಿಗೆ ಮರಳು, ತ್ಯಾಜ್ಯ, ಮುರಿದು ಬಿದ್ದ ಮರ ಇನ್ನಿತರ ಕಸಕಡ್ಡಿಗಳು ಬರುವುದರಿಂದ ಕೃತಕ ನೆರೆ ಉಂಟಾಗುತ್ತದೆ. ಇದರಿಂದಾಗಿ ನದಿಯ ಉಭಯ ಮಗ್ಗುಲಲ್ಲಿ ವಾಸಿಸುವ ಜನರಿಗೆ ಅವರ ಮನೆ ಹಾಗೂ ಕೃಷಿಗೂ ಹಾನಿಯಾಗುವ ಸಾಧ್ಯತೆ ಇರುತ್ತದೆ.

ಕಳೆದ ವರ್ಷ ಅಗಸ್ಟ್​ನಲ್ಲಿ ಬೆಳ್ತಂಗಡಿಯಲ್ಲಿ ಸುರಿದ ಮಳೆಗೆ ತಾಲೂಕಿನ ದಿಡುಪೆ, ಕಿಲ್ಲೂರು, ಚಾರ್ಮಾಡಿ, ಕೊಳಂಬೆ ಮೊದಲಾದ ಕಡೆಗಳಲ್ಲಿ ನೆರೆಯಿಂದಾಗಿ ಅಲ್ಲಲ್ಲಿ ಅಪಾರ ಹಾನಿ ಉಂಟಾಗಿತ್ತು. ಮಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೂಲವೇ ನೇತ್ರಾವತಿ ನದಿಯಾಗಿದೆ.

ಬೆಳ್ತಂಗಡಿ, ಬಂಟ್ವಾಳ ಹಾಗೂ ಮಂಗಳೂರು ತಾಲೂಕಿನ ಜನರು ಕುಡಿಯುವ ನೀರು, ಕೃಷಿ ಹಾಗೂ ತೋಟಗಳಿಗೆ ನೇತ್ರಾವತಿ ನದಿ ನೀರನ್ನು ಬಳಸುತ್ತಾರೆ. ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನಘಟ್ಟ ಸುತ್ತಮುತ್ತ ನದಿಯಲ್ಲಿ ಮರಳು, ಹೂಳು, ತ್ಯಾಜ್ಯ ವಸ್ತುಗಳು ತುಂಬಿಕೊಂಡು ನದಿ ನೀರಿನ ಸುಗಮ ಹರಿವಿಗೆ ಅಡಚಣೆಯಾಗುತ್ತಿದೆ.

ಇದರಿಂದ ನದಿಯ ಎರಡೂ ಬದಿಗಳಲ್ಲಿ ಮಣ್ಣಿನ ಸವೆತ ಸಂಭವಿಸುತ್ತಿದೆ. ಅಧಿಕ ನೆರೆ ಬಂದಾಗ ನದಿಯು ತನ್ನ ಹರಿವಿನ ದಿಕ್ಕನ್ನು ಬದಲಾಯಿಸುವ ಸಾಧ್ಯತೆ ಇದೆ. ನದಿಯಲ್ಲಿ ತುಂಬಿಕೊಂಡಿರುವ ಮರಳು, ತ್ಯಾಜ್ಯ ಹಾಗೂ ಇತರ ವಸ್ತುಗಳನ್ನು ಆಗಾಗ ತೆಗೆದಲ್ಲಿ ನದಿ ಸ್ವಚ್ಛವಾಗಿ ನೀರಿನ ಸುಗಮ ಹರಿವಿಗೆ ಅನುಕೂಲವಾಗುತ್ತದೆ. ಈ ದಿಸೆಯಲ್ಲಿ ನೇತ್ರಾವತಿ ನದಿಗೆ ಅಗತ್ಯ ಕಾಯಕಲ್ಪ ನೀಡಬೇಕಾಗಿದೆ.

ABOUT THE AUTHOR

...view details