ಕರ್ನಾಟಕ

karnataka

By

Published : Aug 24, 2020, 11:53 PM IST

Updated : Aug 25, 2020, 7:38 AM IST

ETV Bharat / state

ವೀರೇಂದ್ರ ಹೆಗ್ಗಡೆಯವರಿಗೆ 'ಧರ್ಮಯಾನ' ಗ್ರಂಥ ಸಮರ್ಪಣೆ

ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಸೇವೆ ಸಲ್ಲಿಸಿದ 50 ವರ್ಷಗಳ ಸವಿನೆನಪಿಗಾಗಿ ಸುವರ್ಣ ಮಹೋತ್ಸವ ಸಮಿತಿಯಿಂದ ರಚಿಸಲಾದ ಅಭಿನಂದನಾ ಗ್ರಂಥ 'ಧರ್ಮಯಾನ' ವನ್ನು ಸಮಿತಿಯ ಅಧ್ಯಕ್ಷರಾದ ಹರ್ಷೇಂದ್ರ ಕುಮಾರ್ ಹಾಗೂ ಸುಪ್ರಿಯ ಹರ್ಷೇಂದ್ರ ಕುಮಾರ್​ ಅವರು ಸಮರ್ಪಿಸಿದ್ದಾರೆ.

dharmayana-scripture-dedication-to-veerendra-hegde
ಗ್ರಂಥ ಸಮರ್ಪಣೆ

ಬೆಳ್ತಂಗಡಿ (ದಕ್ಷಿಣಕನ್ನಡ):ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ಸೇವೆ ಸಲ್ಲಿಸಿದ 50 ವರ್ಷಗಳ ಸವಿನೆನಪಿಗಾಗಿ ಸುವರ್ಣ ಮಹೋತ್ಸವ ಸಮಿತಿಯಿಂದ ರಚಿಸಲಾದ ಅಭಿನಂದನಾ ಗ್ರಂಥ 'ಧರ್ಮಯಾನ' ಸಮರ್ಪಿಸಲಾಯಿತು.

ಸುಮಾರು 750 ಪುಟಗಳುಳ್ಳ 'ಧರ್ಮಯಾನ'ದಲ್ಲಿ 180 ಬಿಡಿ ಲೇಖನಗಳಿದ್ದು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶುಭ ಸಂದೇಶಗಳಿವೆ. ಡಾ. ಹೆಗ್ಗಡೆಯವರನ್ನು ದೀರ್ಘಕಾಲ ಕಂಡ ಅನೇಕ ದಾರ್ಶನಿಕರು, ಧಾರ್ಮಿಕರು, ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು, ಸ್ವಾತಂತ್ರ್ಯ ಹೋರಾಟಗಾರರು ಮತ್ತಿತರರು ಗ್ರಂಥದಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ವೀರೇಂದ್ರ ಹೆಗ್ಗಡೆಯವರಿಗೆ ಸುವರ್ಣ ಮಹೋತ್ಸವ 'ಧರ್ಮಯಾನ' ಗ್ರಂಥ ಸಮರ್ಪಣೆ

ಈ ಬೃಹತ್‌ ಸಂಪುಟವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ವಿವೇಕ್‌ ರೈ, ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಮತ್ತು ತಾಳ್ತಜೆ ವಸಂತಕುಮಾರ್‌ ಅವರನ್ನು ಒಳಗೊಂಡ ಸಂಪಾದಕ ಮಂಡಳಿಯು ವಿಮರ್ಶಿಸಿದೆ. 2018ರಲ್ಲಿ ಡಾ. ಹೆಗ್ಗಡೆಯವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವದ ಸಂದರ್ಭ ಡಾ. ಹೆಗ್ಗಡೆಯವರು ಕೈಗೊಂಡಿರುವ ಅನೇಕ ವಿನೂತನ ಕಾರ್ಯಕ್ರಮಗಳ ಕುರಿತು 23 ಪುಸ್ತಕಗಳ 'ಸುವರ್ಣ ಸಂಚಯ' ಈಗಾಗಲೇ ಪ್ರಕಟಗೊಂಡಿದೆ.

'ಧರ್ಮಯಾನ' ಸಂಪುಟ ಬಿಡುಗಡೆ ಸಂದರ್ಭ ಮಾತನಾಡಿದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅವರು, ಶ್ರೀಕ್ಷೇತ್ರ ಧರ್ಮಸ್ಥಳವನ್ನು ತಮ್ಮ ನಂಬಿಕೆ ಮತ್ತು ಆಶಯದ ಮೂಲ ಕೇಂದ್ರವಾಗಿಟ್ಟುಕೊಂಡು ಧಾರ್ಮಿಕ ಕೇಂದ್ರವೊಂದು ಹೇಗೆ ಜನಸಾಮಾನ್ಯರ ಬದುಕಿನಲ್ಲಿ ಆತ್ಮವಿಶ್ವಾಸ ಮೂಡಿಸಬಹುದೆಂದು ಡಾ. ಹೆಗ್ಗಡೆಯವರು ಹೊರಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಅವರು ಮಾಡಿರುವ ಕಾರ್ಯಗಳ ಕುರಿತು ವಿವರಿಸುತ್ತಾ ಹೋದಲ್ಲಿ ಪ್ರತಿಯೊಂದು ಸಾಧನೆಗೆ ಪ್ರತ್ಯೇಕ ಸಂಪುಟ ಮಾಡಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಎಲ್ಲರ ನಿಲುವುಗಳನ್ನು ಒಳಗೊಂಡಿರುವ 'ಧರ್ಮಯಾನ' ಮಹತ್ವದ ಸಾಮೂಹಿಕ ಪ್ರಯತ್ನವಾಗಬಹುದು ಎಂದರು.

ಸಂಪುಟವನ್ನು ಸ್ವೀಕರಿಸಿ ಮಾತನಾಡಿದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಕ್ಷೇತ್ರವು ಪರಂಪರಾನುಗತವಾಗಿ ಕಟ್ಟುಕಟ್ಟಳೆಯ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದರೂ ಜನಸಾಮಾನ್ಯರೊಂದಿಗೆ ಬೆರೆತುಕೊಂಡಿದೆ. ಆದುದರಿಂದ ಸಾಮಾಜಿಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ನನಗೆ ಸಾಧ್ಯವಾಯಿತು. ತಾವು ಮಾಡಿರುವ ಕೆಲಸಗಳಲ್ಲಿ ಹೆಚ್ಚಿನವು ಪರಂಪರೆಯಿಂದ ಬಂದವುಗಳಾದರೂ ಕೆಲವೊಂದನ್ನು ನನ್ನ ಅನುಭವದಲ್ಲಿ ಜಾರಿಗೆ ತರಲು ಸಾಧ್ಯವಾಗಿದೆ. ಆದರೂ ನಾನು ಇದುವರೆಗೆ ಸಾಧಿಸಿದ್ದು ಕಡಿಮೆ ಎಂಬ ವಿನಮ್ರತೆ ನನ್ನಲ್ಲಿದೆ ಎಂದರು. ವಿವೇಕ್‌ ರೈಯವರ ಸಮ್ಮುಖದಲ್ಲಿ ಧರ್ಮಯಾನ ಗ್ರಂಥದ ಕರಡು ಪ್ರತಿಯನ್ನು ಕೆಲ ಸಮಯದ ಹಿಂದೆ ಬಿಡುಗಡೆ ಮಾಡಿದ್ದನ್ನು ಸ್ಮರಿಸಿಕೊಂಡು ಈ ಪ್ರಯತ್ನದಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

Last Updated : Aug 25, 2020, 7:38 AM IST

ABOUT THE AUTHOR

...view details