ಬೆಳ್ತಂಗಡಿ (ದಕ್ಷಿಣ ಕನ್ನಡ):ಜೀವನದಲ್ಲಿ ಎಷ್ಟು ಕಷ್ಟದಲ್ಲಿದ್ದರೂ ಸಮಾಜ ಸೇವೆ ಮಾಡಬೇಕು ಎಂಬ ಹಂಬಲ ಎಲ್ಲರಲ್ಲಿ ಇರುತ್ತದೆ. ಅವಕಾಶಗಳು ಸಿಗುವುದು ಕಡಿಮೆ. ಹೀಗಾಗಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವಿಪತ್ತು ನಿರ್ವಹಣೆಗೆ ತಂಡ ಆರಂಭ ಮಾಡಲಾಗಿದೆ. ಈ ತಂಡದಲ್ಲಿ ಸಣ್ಣ ಕೃಷಿಕರು, ವ್ಯವಹಾರಸ್ಥರು ಹಾಗೂ ಜನಸಾಮಾನ್ಯರಿದ್ದಾರೆ. ಸಾಮಾನ್ಯ ಜನರಿಗೂ ಸಮಾಜ ಸೇವೆಯಲ್ಲಿ ಆಸಕ್ತಿಯಿದೆ ಎಂಬುದಕ್ಕೆ ವಿಪತ್ತು ನಿರ್ವಹಣಾ ತಂಡ ಸಾಕ್ಷಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್. ಮಂಜುನಾಥ್ ಹೇಳಿದರು.
'ಜನಸಾಮಾನ್ಯರಿಗೂ ಸಮಾಜ ಸೇವೆಯಲ್ಲಿ ಆಸಕ್ತಿಯಿದೆ' - ದಕ್ಷಿಣಕನ್ನಡ ಸುದ್ದಿ
ಧರ್ಮಸ್ಥಳ ವಿಪತ್ತು ನಿರ್ವಹಣೆಗೆ ತಂಡ ವತಿಯಿಂದ ಬೆಳ್ತಂಗಡಿ ರಾಘವೇಂದ್ರ ಮಠದ ಸಮೀಪವಿರುವ ಸೋಮಾವತಿ ನದಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿರುವ ಕಸಕಡ್ಡಿ, ಮರಗಳ ತೆರವು ಕಾರ್ಯಾಚರಣೆ ಮಾಡಲಾಯಿತು.
ಬೆಳ್ತಂಗಡಿ ರಾಘವೇಂದ್ರ ಮಠದ ಸಮೀಪ ಸೋಮಾವತಿ ನದಿಯ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿರುವ ಕಸಕಡ್ಡಿ, ಮರಗಳ ತೆರವು ಕಾರ್ಯಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಜೆಸಿಐ ಸಂಸ್ಥೆಗಳು ಅವರದ್ದೇ ಆದ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುತ್ತಾರೆ. ನಮ್ಮ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ 35 ಲಕ್ಷ ಸದಸ್ಯರಲ್ಲಿ ಸಮಾಜ ಸೇವೆ ಮಾಡುವ ಶಕ್ತಿಯಿದೆ. ಇವರನ್ನು ಸಂಘಟನೆ ಮಾಡಿದರೆ ಹೇಗೆ ಎಂಬುದನ್ನು ಮನಗಂಡು ವಿಪತ್ತು ನಿರ್ವಹಣಾ ತಂಡ ರಚಿಸಿದ್ದು, ಇದು ಯಶಸ್ವಿಯಾಗಿದೆ. ರಾಜ್ಯದ 55 ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ವಿಪತ್ತು ನಿರ್ವಹಣೆಗೆ ಸಜ್ಜುಗೊಳಿಸಲಾಗಿದೆ. ಇವರಲ್ಲಿ ಸಮಾಜ ಸೇವೆಯ ಆಸಕ್ತಿ ಇರುವುದರೊಂದಿಗೆ ವ್ಯಕ್ತಿತ್ವ ವಿಕಸನವಾಗಲು, ಸಮಾಜದಲ್ಲಿ ಗುರುತಿಸಲು ಇದು ಸಹಕಾರಿಯಾಗಲಿದೆ ಎಂದರು.
ಬೆಳ್ತಂಗಡಿ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿ ಸುಧಾಕರ್ ಮಾತನಾಡಿ, ತುರ್ತು ವಿಕೋಪಗಳು ಬಂದಾಗ ಸರ್ಕಾರದ ಸೇವೆಯನ್ನು ಅವಲಂಬಿಸದೇ ಸ್ಥಳೀಯರು, ಸಂಘ ಸಂಸ್ಥೆಗಳು ತಕ್ಷಣ ಸೇವೆಗೆ ಮುಂದಾದರೆ ಹೆಚ್ಚಿನ ಅನಾಹುತ ಆಗುವುದರಿಂದ ತಪ್ಪಿಸಬಹುದು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವಿಪತ್ತು ನಿರ್ವಹಣಾ ತಂಡದವರು ಸೇವೆಗೆ ಸನ್ನದ್ಧರಾಗಿ ಅನೇಕ ಸೇವೆಗಳಲ್ಲಿ ಮುಂದಾಗಿರುವುದು ನಮಗೆ ಹೆಮ್ಮೆ ತಂದಿದೆ ಎಂದರು.