ಮಂಗಳೂರು: ಇಂದು ಮಾಧ್ಯಮವು ರಾಜಕೀಯ ಸುದ್ದಿಗಳಿಗೆ ಅತೀ ಹೆಚ್ಚು ಮಹತ್ವ ನೀಡುತ್ತಿದೆ. ಆದರೆ ನಿಜವಾಗಿಯೂ ಜನರಿಗೆ ಉಪಯೋಗವಾಗುವಂತಹ ಸುದ್ದಿಗಳಿಗೆ ಮಹತ್ವ ನೀಡುವಂತಹ ಕಾರ್ಯ ಆಗಬೇಕಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪುರಭವನದಲ್ಲಿ ನಡೆದ 35ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಬಹಳಷ್ಟು ಒಳ್ಳೆಯ ಕೆಲಸಗಳು ಸಮಾಜದಲ್ಲಿ ನಡೆಯುತ್ತಿವೆ. ಆದರೆ ಅಷ್ಟೇ ಕೆಟ್ಟ ಕೆಲಸವೂ ನಡೆಯುತ್ತಿದೆ. ಆದ್ದರಿಂದ ಜನರಿಗೆ ನ್ಯಾಯ ದೊರಕಿಸಿಕೊಡಬೇಕಾಗಿದ್ದಲ್ಲಿ ಪತ್ರಕರ್ತರು ಮಹತ್ವದ ಪಾತ್ರ ವಹಿಸಬೇಕಿದೆ ಎಂದರು.
ಜಾಗತೀಕರಣವಾದ ಬಳಿಕ ಎಲ್ಲಾ ಕಡೆಗಳಲ್ಲಿಯೂ ಹಣ ಬಹಳಷ್ಟು ಮಹತ್ವ ಪಡೆಯುತ್ತಿದೆ. ಆದ್ದರಿಂದ ವೃತ್ತಿಯಲ್ಲಿ ಮೌಲ್ಯ ಇರಿಸಿಕೊಳ್ಳುವುದು ಪತ್ರಿಕೋದ್ಯಮದಲ್ಲಿ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಮೌಲ್ಯ, ನೈತಿಕತೆ ಇರಿಸಿ ಪತ್ರಕರ್ತರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಡಾ. ಸಿ.ಎನ್.ಅಶ್ವತ್ಥ್ ನಾರಾಯಣ್, ಡಿಸಿಎಂ ಈ ಸಂದರ್ಭ ಪದ್ಮಶ್ರೀ ಪುರಸ್ಕೃತ 'ಅಕ್ಷರ ಸಂತ' ಹರೇಕಳ ಹಾಜಬ್ಬರಿಗೆ ಸನ್ಮಾನ ಮಾಡಲಾಯಿತು. ಅಲ್ಲದೆ ಹರೇಕಳ ಹಾಜಬ್ಬರನ್ನು ಮೊದಲ ಬಾರಿಗೆ ಗುರುತಿಸಿದ ನಾಲ್ವರು ಪತ್ರಕರ್ತರನ್ನೂ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ತರಂಗ ಪತ್ರಿಕೆಯ ವ್ಯವಸ್ಥಾಪಕಿ ಸಂಧ್ಯಾ ಪೈ, ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.