ಕರ್ನಾಟಕ

karnataka

By

Published : Jun 10, 2020, 3:47 AM IST

ETV Bharat / state

ಕಳೆದ ವರ್ಷ ಪ್ರಕೃತಿ ವಿಕೋಪಕ್ಕೀಡಾಗಿದ್ದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ಕಳೆದ ವರ್ಷ ಮಳೆಗಾಲದ ಸಂದರ್ಭ ಬೆಳ್ತಂಗಡಿ ತಾಲೂಕಿನಲ್ಲಿ ನೆರೆ ಹಾಗೂ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಕುಸಿತ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾಗೂ ತಡೆಗೋಡೆಗಳ ಕುಸಿತದಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದ ಕೆಲ ಪ್ರದೇಶಗಳಿಗೆ ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಭೇಟಿ ನೀಡಿದ್ದರು.

beltangali
ಕಳೆದ ವರ್ಷ ಪ್ರಕೃತಿ ವಿಕೋಪಕ್ಕೀಡಾಗಿದ್ದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ಬೆಳ್ತಂಗಡಿ:ಕಳೆದ ವರ್ಷ ಪ್ರಕೃತಿ ವಿಕೋಪಕ್ಕೀಡಾದ ಪ್ರದೇಶಗಳ ಸ್ಥಿತಿಗತಿ ಪರಿಶೀಲನೆಗಾಗಿ ಹಾಗೂ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮಂಗಳವಾರ ಚಾರ್ಮಾಡಿ ಘಾಟ್, ಪರ್ಲಾಣಿ, ಅನ್ನಾರು ಪ್ರದೇಶಗಳಿಗೆ ಭೇಟಿ ನೀಡಿ, ಬಳಿಕ ಬೆಳ್ತಂಗಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.

ಕಳೆದ ವರ್ಷ ಮಳೆಗಾಲದ ಸಂದರ್ಭ ಬೆಳ್ತಂಗಡಿ ತಾಲೂಕಿನಲ್ಲಿ ನೆರೆ ಹಾಗೂ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಕುಸಿತ ಉಂಟಾಗಿತ್ತು. ಘಾಟ್ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಹಾಗೂ ತಡೆಗೋಡೆಗಳ ಕುಸಿತದಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಜಿಲ್ಲಾಧಿಕಾರಿಯವರು ಚಾರ್ಮಾಡಿ ಘಾಟ್ ರಸ್ತೆಯ ಕಾಮಗಾರಿ ವೀಕ್ಷಿಸಿದ ಬಳಿಕ ಪ್ರವಾಹದಿಂದ ಹಾನಿಗೀಡಾದ ಪರ್ಲಾಣಿ-ಹೊಸಮಠ ಸೇತುವೆ ಹಾಗೂ ಅನ್ನಾರು ಸೇತುವೆ ಪ್ರದೇಶಕ್ಕೆ ಭೇಟಿ ನೀಡಿದರು. ಅನ್ನಾರು ಬಳಿ ನೂತನ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು.

ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಫರ್ಲಾಣಿಯಲ್ಲಿ ಮೃತ್ಯುಂಜಯ ನದಿಯಿಂದ ಮರಳುಗಾರಿಕೆ ನಡೆಸುವುದರಿಂದ ಚಾರ್ಮಾಡಿ-ಫರ್ಲಾಣಿ ರಸ್ತೆ ಸಂಪರ್ಕ ಹದಗೆಟ್ಟಿರುವ ಕುರಿತು ಊರವರು ಪ್ರತಿಭಟಿಸಿದರು. ಇಲ್ಲಿಗೆ ಭೇಟಿ ನೀಡಿದ್ದ ಡಿಸಿಯವರು ಕೂಡಲೇ ರಸ್ತೆ ದುರಸ್ತಿ ಪಡಿಸಿ ಮರಳುಗಾರಿಕೆ ಮುಂದುವರಿಸುವಂತೆ ಪರವಾನಿಗೆಯನ್ನು ಪಡೆದುಕೊಂಡವರಿಗೆ ಆದೇಶಿಸಿದರು.

ಬಳಿಕ ಬೆಳ್ತಂಗಡಿ ಮಿನಿ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು, ಕೋವಿಡ್-19 ಸೋಂಕಿತ ಪ್ರಕರಣಗಳು ಹೊರ ರಾಜ್ಯದಿಂದ ಬರುವವರಲ್ಲಿ ಕಾಣಿಸಿಕೊಳ್ಳುತ್ತಿದೆ. ಹೊರ ರಾಜ್ಯದಿಂದ ಬಂದವರು ಕಡ್ಡಾಯ ಕ್ವಾರಂಟೈನ್ ನಿಯಮ ಪಾಲಿಸಬೇಕು. ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಸುತ್ತಾಡದಂತೆ ಸಂಪೂರ್ಣ ನಿಗಾವಹಿಸಬೇಕು ಎಂದರು.

ಮಳೆಗಾಲ ಸಮೀಪಿಸುತ್ತಿದ್ದು, ಪೂರ್ವ ಸಿದ್ಧತೆ ಬೇಕಾಗಿದೆ. ಅಧಿಕಾರಿಗಳ ತಂಡ ರಚಿಸಿ ಮುನ್ನೆಚ್ಚರಿಕಾ ಪರಿಕರಗಳನ್ನು ಸಿದ್ಧಪಡಿಸುವಂತೆ ತಹಸೀಲ್ದಾರ್ ಅವರಿಗೆ ಡಿಸಿ ಸೂಚಿಸಿದರು.

ಈ ವೇಳೆ ತಹಸೀಲ್ದಾರ್ ಗಣಪತಿ ಶಾಸ್ತ್ರಿ, ತಾ.ಪಂ. ಇಒ ಕೆ.ಇ.ಜಯರಾಮ್, ತಾಲೂಕು ಆರೋಗ್ಯಧಿಕಾರಿ ಡಾ. ಕಲಾಮಧು, ಬಿಇಒ ತಾರಕೇಸರಿ, ಎಲ್ಲಾ ಗ್ರಾ.ಪಂ. ಪಿಡಿಒಗಳು, ವಿಎಗಳು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details