ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಅವರು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ನಿಮಿತ್ತ ಸುಳ್ಯ ತಾಲೂಕಿನ ಮಂಡೆಕೋಲಿಗೆ ಶುಕ್ರವಾರ ಸಂಜೆ ಭೇಟಿ ನೀಡಿ, ಮಂಡೆಕೋಲಿನಲ್ಲಿ ವಾಸ್ತವ್ಯ ಹೂಡಿ, ಜನರ ಅಹವಾಲುಗಳನ್ನು ಸ್ವೀಕರಿಸಿದರು.
ಸಂಜೆ ಮಂಡೆಕೋಲಿಗೆ ಆಗಮಿಸಿದ ಜಿಲ್ಲಾಧಿಕಾರಿ ಇಲ್ಲಿನ ಮುರೂರು ಚೆಕ್ಪೋಸ್ಟ್ಗೆ ಭೇಟಿ ನೀಡಿ ಸ್ಥಳೀಯರು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು. ರಸ್ತೆ ಅಭಿವೃದ್ಧಿ, ಸ್ಥಳೀಯರಿಗೆ ಅಧಿಕೃತ ಗುರುತಿನ ಚೀಟಿ ನೀಡುವ ಬಗ್ಗೆ ಸೂಚಿಸಿದರು. ಶೌಚಾಲಯ, ಸಿಸಿ ಕ್ಯಾಮರಾ ಅಳವಡಿಕೆ ಬಗ್ಗೆ ಭರವಸೆ ನೀಡಿದರು.
ಛಾವಡಿ ಚರ್ಚೆ:ಬಳಿಕ ಗ್ರಾಮದ ಪುತ್ಯ ಶಾಲೆಗೆ ಆಗಮಿಸಿದ ಜಿಲ್ಲಾಧಿಕಾರಿಗಳು ಶಾಲಾ ಮೈದಾನದಲ್ಲಿ ಛಾವಡಿ ಚರ್ಚೆ ನಡೆಸಿದರು. ಡಿಸಿ ಸಹಿತ ಜಿಲ್ಲೆಯ ಇತರ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಸ್ಥರು ಮೈದಾನದಲ್ಲಿ ಕುಳಿತುಕೊಂಡು ಚರ್ಚೆ ನಡೆಸಿದರು. ಈ ವೇಳೆ, ಮಾತನಾಡಿದ ಜಿಲ್ಲಾಧಿಕಾರಿ ಡಾ ರಾಜೇಂದ್ರ ಅವರು ತಮ್ಮ ಊರಿನ ಬಗ್ಗೆ ನೆನಪಿಸಿಕೊಂಡು, ಗ್ರಾಮಸ್ಥರ ಬೇಡಿಕೆಗಳನ್ನು ಹಂತ, ಹಂತವಾಗಿ ಪರಿಹರಿಸುವ ಭರವಸೆ ನೀಡಿದರು.