ಮಂಗಳೂರು: ಪ್ರಸಿದ್ಧ ಮಂಗಳೂರು ದಸರಾ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀ ಶಾರದಾಮಾತೆ, ನವದುರ್ಗೆಯರು ಹಾಗೂ ಶ್ರೀ ಮಹಾಗಣಪತಿ ದೇವರ ಆರಾಧನೆ ಸಂಪನ್ನಗೊಂಡು ಇದೀಗ ವೈಭವದ ಮೆರವಣಿಗೆ ಆರಂಭಗೊಂಡಿದೆ. ಕಳೆದ 9 ದಿನಗಳಿಂದ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ಶ್ರೀ ದೇವರ ಆರಾಧನೆ ಅದ್ಧೂರಿಯಾಗಿ ನಡೆದುಕೊಂಡು ಬಂದಿತ್ತು. ಮೊಗ್ಗು ಮಲ್ಲಿಗೆಯ ಶಾರದಾ ಜಲ್ಲಿ, ವಿಶೇಷ ಪಟ್ಟೆ ಸೀರೆ, ವಿವಿಧ ಆಭರಣಗಳೊಂದಿಗೆ ಅಲಂಕೃತಳಾದ ಶಾರದಾ ಮಾತೆಗೆ ಮಧ್ಯಾಹ್ನದ ಬಳಿಕ ನಿಮಜ್ಜನಾ ಪೂಜೆ ನೆರವೇರಿತು.
ಸಂಜೆಯಾಗುತ್ತಿದ್ದಂತೆ ಶೋಭಾಯಾತ್ರೆಗೆ ಸಿದ್ಧತೆ ಮಾಡಿ ಮೊದಲಿಗೆ ಶ್ರೀ ಮಹಾಗಣಪತಿ ದೇವರನ್ನು, ನವದುರ್ಗೆಯರನ್ನು ಅಲಂಕೃತ ತೆರೆದ ವಾಹನದಲ್ಲಿ ಇಡಲಾಯಿತು. ಬಳಿಕ ತಾಯಿ ಶಾರದೆಯನ್ನು ವಿಶೇಷ ವಾಹನದಲ್ಲಿ ಇರಿಸಿ ಆಕರ್ಷಕ ಶೋಭಾಯಾತ್ರೆಗೆ ನಾಂದಿ ಹಾಡಲಾಯಿತು. ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೊ ಮುಂದೆ ಇದ್ದು, ಬಳಿಕ ಶ್ರೀ ಮಹಾಗಣಪತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ವಾಹನ ಅನುಸರಿಸಿತು. ಆಕರ್ಷಕ ಟ್ಯಾಬ್ಲೋಗಳು, ಸ್ತಬ್ಧಚಿತ್ರಗಳು ಶೋಭಾಯಾತ್ರೆಯ ಮೆರುಗು ಹೆಚ್ಚಿಸಿತು. ಈ ಶೋಭಾಯಾತ್ರೆಯು ಸಂಜೆ ವೇಳೆಗೆ ಮಂಗಳೂರಿನಿಂದ ಹೊರಟು ರಾತ್ರಿಯಿಡೀ ನಗರದ ಪ್ರಮುಖ ಬೀದಿಗಳಲ್ಲಿ ಸುಮಾರು 9 ಕಿ.ಮೀ. ದೂರ ಸಂಚರಿಸಿ ಬುಧವಾರ ಮುಂಜಾನೆ ವೇಳೆಗೆ ಮರಳಿ ಶ್ರೀಕ್ಷೇತ್ರಕ್ಕೆ ಮರಳಲಿದೆ. ಬಳಿಕ ಮೃಣ್ಮಯ ಮೂರ್ತಿಗಳು ದೇವಾಲಯದ ಕಲ್ಯಾಣಿಯಲ್ಲಿ ಜಲಸ್ತಂಭನಗೊಂಡು ಮಂಗಳೂರು ದಸರಾ ಸಂಪನ್ನಗೊಳ್ಳಲಿದೆ.