ಮಂಗಳೂರು (ದಕ್ಷಿಣಕನ್ನಡ) : ಹಿರಿಯ ದಲಿತ ಮುಖಂಡ ಪಿ ಡೀಕಯ್ಯ ಅವರ ಅಸಹಜ ಸಾವಿನ ಪ್ರಕರಣವನ್ನು ಸಮಗ್ರ ತನಿಖೆ ನಡೆಸುವಂತೆ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಮಾತನಾಡಿರುವ ಪಿ ಡೀಕಯ್ಯ ಅವರ ಭಾವ ಲೋಲಾಕ್ಷ, ಜುಲೈ 6 ರಂದು ಬಿಪಿ ಹೆಚ್ಚಾಗಿ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಮನೆಯಲ್ಲಿ ಕುಸಿದು ಬಿದ್ದ ತಕ್ಷಣ ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದು ಅವರ ಪತ್ನಿ ಅಮೃತಾ ಶೆಟ್ಟಿ ತಿಳಿಸಿದ್ದರು. ಆದರೆ, ಅವರ ತಲೆಯ ಭಾಗದಲ್ಲಿ ಬಲವಾಗಿ ಬಿದ್ದಿರುವ ಏಟಿನ ಬಗ್ಗೆ ಎಲ್ಲೂ ತಿಳಿಸಿರಲಿಲ್ಲ.
ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅಂಗಾಂಗ ದಾನ ಮಾಡಲಾಗಿದೆ. ಮೃತದೇಹವನ್ನು ಸ್ನಾನ ಮಾಡಿಸಬಾರದು, ಮೂರು ಗಂಟೆಯೊಳಗೆ ದಫನ ಕಾರ್ಯ ಮಾಡಬೇಕೆಂದು ಡೀಕಯ್ಯ ಅವರ ಪತ್ನಿ ಅಮೃತಾ ಶೆಟ್ಟಿ ಮತ್ತು ಅವರ ತಂಗಿ ವನಿತಾ ಶೆಟ್ಟಿ ಒತ್ತಾಯಿಸಿ ಅವಸರವಸರವಾಗಿ ಮೃತದೇಹದ ದಫನ ಮಾಡಿಸಿದ್ದರು.
ಆದರೆ ಅವರ ಕಣ್ಣುಗಳ ಹೊರತಾಗಿ ಬೇರೆ ಯಾವ ಅಂಗಾಂಗ ದಾನ ಮಾಡಲಾಗಿಲ್ಲ ಎಂಬುದು ಮೃತದೇಹವನ್ನು ಧಪನ್ ಮಾಡಿದ ಬಳಿಕ ತೆಗೆದು ಎರಡನೇ ಬಾರಿ ಮಾಡಿದ ಪೋಸ್ಟ್ ಮಾರ್ಟಂನಲ್ಲಿ ತಿಳಿದುಬಂದಿದೆ ಎಂದು ಹೇಳಿದರು.
ದಲಿತ ಮುಖಂಡ ಪಿ ಡೀಕಯ್ಯ ಅಸಹಜ ಸಾವು ಪ್ರಕರಣ : ಸಮಗ್ರ ತನಿಖೆಗೆ ಒತ್ತಾಯ ಡೀಕಯ್ಯ ಅವರ ಸಾವಿನ ಬಗ್ಗೆ ತನಿಖೆಗೆ ಒತ್ತಾಯ :ಡೀಕಯ್ಯ ಅವರ ಅಂತ್ಯಕ್ರಿಯೆ ಬಳಿಕ ಅವರ ತಲೆಗೆ ಗಾಯವಾದ ಬಗ್ಗೆ ದೂರು ನೀಡಲು ನಿರ್ಧರಿಸಿದಾಗ ಅಮೃತಾ ಶೆಟ್ಟಿ ಅವರು ವಿರೋಧಿಸಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಆಸ್ಪತ್ರೆಯಲ್ಲಿ ಮಾಡಿಲ್ಲ ಎಂಬುದು ಬಳಿಕ ತಿಳಿದುಬಂತು. ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅಂತ್ಯ ಸಂಸ್ಕಾರ ಮಾಡಲಾದ ಮೃತದೇಹವನ್ನು ಮತ್ತೆ ಮೇಲಕ್ಕೆತ್ತಿ ಪೋಸ್ಟ್ ಮಾರ್ಟಂ ಮಾಡಲಾಗಿದೆ. ಈ ಸಂದರ್ಭದಲ್ಲಿ ಡೀಕಯ್ಯ ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವ ಬಗ್ಗೆ ತಿಳಿದುಬಂದಿದೆ. ಈ ಪ್ರಕರಣದ ಬಗ್ಗೆ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬೃಹತ್ ಪ್ರತಿಭಟನೆ ಎಚ್ಚರಿಕೆ :ಡೀಕಯ್ಯ ಅವರ ನ್ಯಾಯಕ್ಕಾಗಿ ಹೋರಾಟ ಸಮಿತಿ ಮುಖಂಡ ರಘುಧರ್ಮಸೇನ ಮಾತನಾಡಿ ಡೀಕಯ್ಯ ಅವರ ಸಾವಿನ ಬಗ್ಗೆ ಅನುಮಾನಗಳಿದ್ದು, ಇಷ್ಟು ದಿನಗಳಾದರೂ ಸರಿಯಾದ ತನಿಖೆಗಳು ನಡೆಯುತ್ತಿಲ್ಲ. ಪೊಲೀಸರು ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಬೆಳ್ತಂಗಡಿ ಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ :ಮಂಗಳೂರು: ಸಮಾಜಸೇವೆ ಹೆಸರಿನಲ್ಲಿ ಅಪರಾಧ ಕೃತ್ಯ; ಆರೋಪಿಯ ಬಂಧನ!