ಕರ್ನಾಟಕ

karnataka

ETV Bharat / state

Mangaluru crime: ಬೀದಿ ನಾಟಕ ಕಲಾವಿದನಿಂದ ವಿದ್ಯಾರ್ಥಿನಿಯ ಅತ್ಯಾಚಾರ, ಬಂಧನ

Mangaluru crime: ಬೀದಿ ನಾಟಕ ಕಲಾವಿದನೊಬ್ಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

By

Published : Aug 10, 2023, 9:44 PM IST

Mangalore Crime
ಬೀದಿ‌ ನಾಟಕ ಕಲಾವಿದನೊಬ್ಬ ಪೊಲೀಸನಂತೆ ನಟಿಸಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ

ಮಂಗಳೂರು:ಬೀದಿ ನಾಟಕ ಕಲಾವಿದನೊಬ್ಬ ಪೊಲೀಸನಂತೆ ನಟಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆಗಸ್ಟ್ 8ರಂದು ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 19 ವರ್ಷದ ಯುವತಿ ಮಂಗಳೂರು ಮಹಿಳಾ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ್ದಾರೆ.

ದೂರಿನ ವಿವರ: "ನನಗೆ ರಾಯಚೂರು ಮೂಲದ ಯಮನೂರ ಎಂಬ ಯುವಕ ಇನ್‌ಸ್ಟಾಗ್ರಾಂ ಮುಖಾಂತರ ಪರಿಚಯವಾಗಿದ್ದ. ತಾನು ವಾಮಂಜೂರು ಸ್ಟೇಷನ್​ನಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿದ್ದ. ನನ್ನ ಮನೆಯವರಿಗೆ ಕೆಲಸ ಕೊಡಿಸುವುದಾಗಿ ದಾಖಲಾತಿಗಳನ್ನು ಪಡೆದುಕೊಂಡಿದ್ದ. 2023ರ ಮೇ ತಿಂಗಳಲ್ಲಿ ನನ್ನನ್ನು ಕದ್ರಿ ದೇವಸ್ಥಾನದಲ್ಲಿ ಕರೆದುಕೊಂಡು ಹೋಗಿ, ಅದೇ ವಾರದಲ್ಲಿ ತಣ್ಣೀರು ಬಾವಿ ಬೀಚ್​ಗೂ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ನನ್ನೊಂದಿಗೆ ಫೋಟೋ ತೆಗೆದುಕೊಂಡ ನಂತರ ಫೋಟೋ ವೈರಲ್ ಮಾಡುವುದಾಗಿ ಹೆದರಿಸಿದ್ದ. ಬಳಿಕ ನನ್ನನ್ನು ಬೆಂಗಳೂರಿಗೆ ಕರೆಯಿಸಿ ರಾತ್ರಿ ನೆಲಮಂಗಲದ ಲಾಡ್ಜ್​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದನು. ಮೂಲ್ಕಿ ಕಿನ್ನಿಗೋಳಿಯ ಲಾಡ್ಜ್​ಗೂ ಕರೆದುಕೊಂಡು ಹೋಗಿ ಅಲ್ಲಿಯೂ ಅತ್ಯಾಚಾರ ಎಸಗಿದ್ದಾನೆ. ನಗ್ನ ಫೋಟೋಗಳನ್ನು ಮನೆಯವರು ಮತ್ತು ಸ್ನೇಹಿತರ ಮೊಬೈಲ್​, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾನೆ. ಈ ಫೋಟೋಗಳನ್ನು ಡಿಲೀಟ್ ಮಾಡಬೇಕಾದರೆ 1.5 ಲಕ್ಷ ರೂ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದಾನೆ" ಎಂದು ನೊಂದ ಯುವತಿ ತಿಳಿಸಿದ್ದಾರೆ. ಯುವತಿ ನೀಡಿದ ದೂರಿನಂತೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗೆ 5 ದಿನ ನ್ಯಾಯಾಂಗ ಬಂಧನ:ಆಗಸ್ಟ್ 9ರಂದು ಬೆಳಿಗ್ಗೆ ಆರೋಪಿ ಯಮನೂರ ಎಂಬಾತನನ್ನು ಮಂಗಳೂರು ನಗರದಲ್ಲಿ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು 5 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈತ ಬೀದಿ ನಾಟಕ‌ ಕಲಾವಿದನಾಗಿದ್ದು, ಪೊಲೀಸರ ಯೂನಿಫಾರ್ಮ್ ಧರಿಸುತ್ತಿದ್ದ. ಇದನ್ನೇ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

''ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಮುಗ್ದ ಹೆಣ್ಣು ಮಕ್ಕಳು, ವಿದ್ಯಾರ್ಥಿನಿಯರನ್ನು ಪರಿಚಯಿಸಿಕೊಂಡು ಪ್ರೀತಿಯ ನಾಟಕ ಮಾಡಿ ಅತ್ಯಾಚಾರವೆಸಗಿ ಮೋಸ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು, ಪೋಷಕರು ಹಾಗೂ ಜನಸಾಮಾನ್ಯರು ಇಂತಹ ಮೋಸದ ಜಾಲಕ್ಕೆ ಹೆಣ್ಣು ಮಕ್ಕಳು ಬೀಳದಂತೆ ಪೋಷಕರು ನಿಗಾ ವಹಿಸಬೇಕಾದ ಅವಶ್ಯಕತೆ ಇದೆ'' ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯ ಇನಸ್ಪೆಕ್ಟರ್ ಲೋಕೇಶ್ ಎ.ಸಿ. ನಡೆಸುತ್ತಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿಯರ ಅಸಭ್ಯ ಫೋಟೋ ಪೋಸ್ಟ್ ಪ್ರಕರಣ: ಆರೋಪಿ ಬಂಧನ

ABOUT THE AUTHOR

...view details