ಕರ್ನಾಟಕ

karnataka

By

Published : Jun 18, 2023, 2:30 PM IST

ETV Bharat / state

ಮಂಗಳೂರಿನಲ್ಲಿ ಯುವಕನಿಗೆ ಚೂರಿ ಇರಿದ ನಾಲ್ವರ ಬಂಧನ - ಕಣ್ಣಿಗೆ ಖಾರದ ಪುಡಿ ಎರಚಿ ಸುಲಿಗೆ ಮಾಡಿದವರು ವಶಕ್ಕೆ

ಮಂಗಳೂರು ನಗರದ ಅಲೋಶಿಯಸ್ ಕಾಲೇಜಿನ ಬಳಿ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಎದೆಗೆ ಚೂರಿ ಇರಿದು ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

mangaluru
ಮಂಗಳೂರು

ಮಂಗಳೂರು: ಅಪ್ರಾಪ್ತೆಯ ಕುಮ್ಮಕ್ಕಿನಿಂದ ತಂಡವೊಂದು ಯುವಕನಿಗೆ ಚೂರಿಯಿಂದ ಇರಿದು ಆತನ ಇಬ್ಬರು ಗೆಳೆಯರ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾದ ಕೇವಲ 12 ಗಂಟೆಯಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಕದ್ರಿ ಮಲ್ಲಿಕಟ್ಟೆ ಶಿವಭಾಗ್ ನಿವಾಸಿ ಮಹಮ್ಮದ್ ತುಫೈಲ್ (20), ಬೋಳಾರ ಮುಳಿಹಿತ್ಲು ನಿವಾಸಿ ಅಬ್ದುಲ್ ಸತ್ತಾರ್ (19), ನೀರುಮಾರ್ಗ ಬೈತುರ್ಲಿ ನಿವಾಸಿಗಳಾದ ಮಹಮ್ಮದ್ ಅಫ್ರೀದ್ (19), ಮುಕ್ಷುದ್ ಸಾಗ್ (21) ಬಂಧಿತರು. ಇವರಲ್ಲಿ ಮಹಮ್ಮದ್ ಅಫ್ರೀದ್ ಹಾಗೂ ಮುಕ್ಷುದ್ ಸಾಗ್ ಸೋದರರಾಗಿದ್ದಾರೆ.

ಕಿನ್ನಿಗೋಳಿಯ ಏಳಿಂಜೆ ವಾಸಿಯಾಗಿರುವ ಅಪ್ರಾಪ್ತೆಗೆ ನಿದೀಶ್ ಎಂಬ ಯುವಕ ಇನ್​ಸ್ಟಾಗ್ರಾಮ್​ ಮೂಲಕ ಪರಿಚಿತನಾಗಿದ್ದ. ಆತನೊಂದಿಗೆ ಮಾತನಾಡಲು ಅಪ್ರಾಪ್ತೆಯು ಜೂ.16 ರ ರಾತ್ರಿ 9.45ರ ವೇಳೆಗೆ ನಗರದ ಅಲೋಶಿಯಸ್ ಕಾಲೇಜಿನ ಬಳಿ ಕರೆದಿದ್ದಾಳೆ. ಅದರಂತೆ ನಿದೀಶ್ ತನ್ನಿಬ್ಬರು ಗೆಳೆಯರೊಂದಿಗೆ ಆಕೆ ಹೇಳಿದ ಸ್ಥಳಕ್ಕೆ ಬಂದಿದ್ದಾನೆ‌. ಬಳಿಕ, ಬಾಲಕಿಯು ತನ್ನ ಜೊತೆಗಾರೊಂದಿಗೆ ಸೇರಿ ನಿದೀಶ್ ಜೊತೆ ಜಗಳವಾಡಿದ್ದಾಳೆ. ಈ ವೇಳೆ ಆರೋಪಿಗಳು ನಿದೀಶ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಎದೆಗೆ ಚೂರಿ ಇರಿದಿದ್ದಾರೆ. ಆತನ ಗೆಳೆಯರ ಮೇಲೂ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದರು.

ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕುಡುಪು ಬೈತುರ್ಲಿ ಬಳಿಯ ವಿಶ್ವಾಸ್ ಹೆರಿಟೇಜ್ ಫ್ಲಾಟ್​ ಮೇಲೆ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಹಾಗೆಯೇ, ಬಾಲಕಿಯನ್ನು ಬಾಲ ನ್ಯಾಯ ಮಂಡಳಿ ಮುಂದೆ ಹಾಜರುಪಡಿಸಲಾಗಿದೆ‌.

ಕಣ್ಣಿಗೆ ಮೆಣಸಿನ ಪುಡಿ ಎರಚಿ ಸುಲಿಗೆ: ನಗರದ ಬೈಕಂಪಾಡಿ ರೈಲ್ವೆ ಟ್ರ್ಯಾಕ್​ನಲ್ಲಿ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚಿನ್ನದ ಸರ ಹಾಗೂ ಮೊಬೈಲ್ ಫೋನ್ ಅನ್ನು ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಯಾಂಡ್ ಬೆಂಗ್ರೆ ನಿವಾಸಿಗಳಾದ ನಿಹಾಲ್ ವೈ ಸುವರ್ಣ (19) ಹಾಗೂ ಬಾಲಕ ಈ ಕೃತ್ಯ ಎಸಗಿದ್ದರು.

ಜೂನ್ 16 ರಂದು ತನ್ನ ಪರಿಚಿತ ಯುವಕನಿಗೆ ಆರೋಪಿ ನಿಹಾಲ್ ವೈ ಸುವರ್ಣ ಕರೆ ಮಾಡಿ ಬೈಕಂಪಾಡಿ ಬಳಿಯಿರುವ ರೈಲ್ವೆ ಟ್ರ್ಯಾಕ್ ಬಳಿ ಕರೆಸಿಕೊಂಡಿದ್ದಾನೆ. ಆತ ಬಂದಾಗ ನಿಹಾಲ್ ಹಾಗೂ ಬಾಲಕ ಇಬ್ಬರೂ ಸೇರಿ ಆತನ ಕಣ್ಣಿಗೆ ಮೆಣಸಿನ ಪುಡಿ ಎರಚಿ ಕತ್ತಿನಲ್ಲಿದ್ದ ಸರ ಹಾಗೂ ಮೊಬೈಲ್ ಫೋನ್ ಅನ್ನು ಸುಲಿಗೆ ಮಾಡಿ ಅಲ್ಲಿಂದ ಪರಾರಿಯಾಗಿದ್ದರು. ಈ ಬಗ್ಗೆ ಪಣಂಬೂರು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದನ್ನೂ ಓದಿ :ಅಕ್ರಮ ಮರಳು ದಂಧೆಗೆ ಹೆಡ್‌ಕಾನ್ಸ್‌ಟೇಬಲ್ ಹತ್ಯೆ ಪ್ರಕರಣ: ಆರೋಪಿ ಕಾಲಿಗೆ ಗುಂಡು, CPI, PSI, ಕಾನ್ಸ್‌ಟೇಬಲ್‌ ಅಮಾನತು

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ‌. ಅಲ್ಲದೇ, ಆರೋಪಿಗಳ ಬಳಿ ಇದ್ದ ಚಿನ್ನದ ಸರ ಹಾಗೂ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 45,000 ರೂ. ಎಂದು ಅಂದಾಜಿಸಲಾಗಿದೆ.

ABOUT THE AUTHOR

...view details