ಕರ್ನಾಟಕ

karnataka

ETV Bharat / state

ಚತುಷ್ಪಥ ರಸ್ತೆ ನಿರ್ಮಾಣ: ಪರಿಸರ ಸಂರಕ್ಷಣೆಗೆ ಸಮಾನ ಮನಸ್ಕ ಸಂಘಟನೆಗಳಿಂದ ಆಗ್ರಹ - ಉಪ್ಪಿನಂಗಡಿ-ಪುತ್ತೂರು ಚತುಷ್ಪಥ ರಸ್ತೆ

ಉಪ್ಪಿನಂಗಡಿ-ಪುತ್ತೂರು ನಡುವಣ ರಸ್ತೆಯನ್ನು ಚತುಷ್ಪಥಗೊಳಿಸುವ ಕಾಮಗಾರಿ ನಡೆದಿದ್ದು, ಈ ಸಂದರ್ಭದಲ್ಲಿ ಪುರಾತನ ಕಾಲದ ಮರಗಳನ್ನು ಉಳಿಸಿಕೊಂಡು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕೆಂದು ಪ್ರಜಾ ಸೇವಾ ವೇದಿಕೆ, ಕರ್ನಾಟಕ ರಾಜ್ಯ ರೈತಸಂಘ-ಹಸಿರುಸೇನೆ, ಪ್ರಗತಿಪರ ಕೃಷಿಕರು ಹಾಗೂ ಪರಿಸರ ಚಿಂತಕರು ಆಗ್ರಹಿಸಿದ್ದಾರೆ.

press meet
ಸುದ್ದಿಗೋಷ್ಠಿ

By

Published : Dec 6, 2019, 7:23 PM IST

ಪುತ್ತೂರು:ಉಪ್ಪಿನಂಗಡಿ-ಪುತ್ತೂರು ನಡುವಣ ರಸ್ತೆಯನ್ನು ಚತುಷ್ಪಥಗೊಳಿಸುವ ಕಾಮಗಾರಿ ನಡೆದಿದ್ದು, ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಮನುಷ್ಯನ ಸಹಜೀವಿಯಾಗಿರುವ ಪುರಾತನ ಕಾಲದ ಮರಗಳನ್ನು ಉಳಿಸಿಕೊಂಡು ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಪ್ರಜಾ ಸೇವಾ ವೇದಿಕೆ, ಕರ್ನಾಟಕ ರಾಜ್ಯ ರೈತಸಂಘ-ಹಸಿರುಸೇನೆ, ಪ್ರಗತಿಪರ ಕೃಷಿಕರು ಹಾಗೂ ಪರಿಸರ ಚಿಂತಕರು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮುರಳೀಧರ್ ರೈ ಮಠಂತಬೆಟ್ಟು

ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪುತ್ತೂರು ಪ್ರಜಾ ಸೇವಾ ವೇದಿಕೆಯ ಅಧ್ಯಕ್ಷ ಮುರಳೀಧರ್ ರೈ ಮಠಂತಬೆಟ್ಟು, ಪುತ್ತೂರು-ಉಪ್ಪಿನಂಗಡಿ ರಸ್ತೆಯ ಹಾರಾಡಿಯಿಂದ ಕೇಪುಳು ತನಕ ರಸ್ತೆಯನ್ನು ಎರಡು ವರ್ಷಗಳ ಹಿಂದೆ ಚತುಷ್ಪಥಗೊಳಿಸಲಾಗಿತ್ತು. ಇದೀಗ ಕೇಪುಳು ಎಂಬಲ್ಲಿಂದ ಸೇಡಿಯಾಪು ತನಕದ ರಸ್ತೆಯನ್ನು ಚತುಷ್ಪಥಗೊಳಿಸುವ ಕೆಲಸ ಆರಂಭವಾಗಿದೆ. ಈ ಭಾಗದಲ್ಲಿ ನೂರಾರು ಮರಗಳು ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ನಾಶವಾಗಲಿದೆ. ಆದರೆ ಪರ್ಯಾಯವಾಗಿ ಮರಗಳನ್ನು ನಡೆಸಲು ಯಾರೂ ಮುಂದಾಗುತ್ತಿಲ್ಲ ಎಂದು ದೂರಿದರು.

ಪುತ್ತೂರು ಉಪ್ಪಿನಂಗಡಿ ರಸ್ತೆಯ ಇಕ್ಕೆಲಗಳಲ್ಲಿಯೂ ಫಲವತ್ತಾದ ಹಣ್ಣಿನ ಮರಗಳಾದ ಹಲಸು, ಮಾವು, ಆಲ ಮುಂತಾದ ಪುರಾತನ ಮರಗಳಿದ್ದವು. ಈ ಮರಗಳನ್ನು ಕಡಿದು ಪ್ರಕೃತಿ ವಿನಾಶಕ್ಕೆ ಮುನ್ನುಡಿ ಬರೆಯಲಾಗಿದೆ. ಮರಗಳ ನಾಶದಿಂದಲೇ ಪ್ರಕೃತಿ ಅವಘಡಗಳು ನಡೆಯುತ್ತಿರುವುದು ಎರಡು ವರ್ಷಗಳಿಂದ ಕಂಡುಬರುತ್ತಿದೆ. ಇದಕ್ಕೆ ಪರಿಹಾರವಾಗಿರುವ ಪರಿಸರ ಸಂರಕ್ಷಣೆಯತ್ತ ಯಾವುದೇ ಜನಪ್ರತಿನಿಧಿಗಳಾಗಲೀ, ಇಲಾಖೆಗಳಾಗಲೀ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಒಂದೇ ಒಂದು ಮರ ನೆಟ್ಟಿಲ್ಲ:

ಹಾರಾಡಿಯಿಂದ ಕೇಪುಳು ತನಕ ಚತುಷ್ಪಥ ರಸ್ತೆಯಾಗಿ ಎರಡು ವರ್ಷವಾಗಿದೆ. ಈ ರಸ್ತೆಯ ವಿಭಾಗಕವಾಗಿ 3 ಅಡಿ ಸ್ಥಳ ಬಿಡಲಾಗಿದೆ. ಈ ರಸ್ತೆಯ ಬದಿಯಲ್ಲಿ ಸರ್ಕಾರಿ ಸ್ಥಳವಿದೆ. ಆದರೆ ಅರಣ್ಯ ಇಲಾಖೆಯಾಗಲೀ, ಲೋಕೋಪಯೋಗಿ ಇಲಾಖೆಯಾಗಲೀ ಈ ಭಾಗದಲ್ಲಿ ಯಾವುದೇ ಒಂದು ಗಿಡ ನೆಡುವ ಕಾರ್ಯ ಮಾಡಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ಮರ ಕಡಿಯುವುದು ತಪ್ಪಲ್ಲ. ಆದರೆ ಇದಕ್ಕೆ ಪರ್ಯಾಯವಾಗಿ ಗಿಡ ನೆಡುವ ಕಾರ್ಯ ನಡೆಸುವ ಜವಾಬ್ದಾರಿ ಇಲಾಖೆಗಳಲ್ಲಿ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಹೊಸ ಚಿಂತನೆ ಯಾಕಿಲ್ಲ :

ರಸ್ತೆ ಅಗಲೀಕರಣ ಸಂದರ್ಭದಲ್ಲಿಯೂ ಅನಗತ್ಯವಾಗಿ ಮರಗಳನ್ನು ನಾಶ ಮಾಡುವ ಬದಲು ಅನಿವಾರ್ಯವಾದ ಮರಗಳನ್ನು ಮಾತ್ರ ಕಡಿಯಬೇಕು. ರಸ್ತೆ ವಿಭಾಜಕಕ್ಕೆ ಕೇವಲ ಮೂರು ಅಡಿ ಸ್ಥಳಕ್ಕೆ ಬದಲು 5 ಅಡಿ ಸ್ಥಳ ಬಿಟ್ಟು ಅಲ್ಲಿ ಅಶೋಕ ಮರಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಚತುಷ್ಪಥ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವಂತೆ ರಾಜ್ಯದ ಮುಖ್ಯಮಂತ್ರಿ, ಪುತ್ತೂರು ಶಾಸಕರು, ಜಿಲ್ಲಾಧಿಕಾರಿ, ವಿಭಾಗೀಯ ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು, ಪುತ್ತೂರು ಉಪವಿಭಾಗಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪುತ್ತೂರು, ಸಹಾಯಕ ಕಾರ್ಯಕಾರಿ ಅಭಿಯಂತರ ಲೋಕೋಪಯೋಗಿ ಇಲಾಖೆ ಪುತ್ತೂರು ಮತ್ತು ವಲಯ ಅರಣ್ಯಾಧಿಕಾರಿ ಪುತ್ತೂರು ಇವರಿಗೆ ಮನವಿ ಸಲ್ಲಿಸಲಾಯಿತು.

ABOUT THE AUTHOR

...view details