ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನಲ್ಲಿ ನಡೆದಿರುವ ನೈತಿಕ ಪೊಲೀಸ್ ಗಿರಿಯ ಆರೋಪಿಗಳನ್ನು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಠಾಣೆಯಿಂದ ಕರೆತಂದ ಬಗ್ಗೆ ಕಾಂಗ್ರೆಸ್ ಪಕ್ಷ ಸಿಎಂ ಬೊಮ್ಮಾಯಿ ಅವರಿಗೆ ಟ್ವೀಟ್ ಮಾಡುವ ಮೂಲಕ ಕಿಡಿಕಾರಿದೆ.
ಪತ್ನಿಯೊಂದಿಗೆ ಅನ್ಯಕೋಮಿನ ಯುವತಿಯರಿಬ್ಬರನ್ನು ಕೂರಿಸಿಕೊಂಡು ಹೋಗುತ್ತಿದ್ದ ಕಾರನ್ನು ಹಿಂದೂ ಕಾರ್ಯಕರ್ತರ ತಂಡವೊಂದು ತಡೆದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.
ಬಂಧಿತರು ತಾವು ಯಾವುದೇ ನೈತಿಕ ಪೊಲೀಸ್ ಗಿರಿ ನಡೆಸಿಲ್ಲ. ಯಾರ ಮೇಲೂ ದಾಳಿ ನಡೆಸಿಲ್ಲ. ಕಾರನ್ನು ತಡೆದು ಅನ್ಯಕೋಮಿನ ಯುವತಿಯರನ್ನು ಕಾರಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ ಬಗ್ಗೆ ಪೊಲೀಸ್ಗೆ ದೂರು ನೀಡಿದ್ದೆವು. ಆದರೆ ನೈತಿಕ ಪೊಲೀಸ್ ಗಿರಿ ಎಂದು ತಮ್ಮನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ ಭಾನುವಾರ ರಾತ್ರಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಜಾಮೀನು ನೀಡಿ ಕರೆದುಕೊಂಡು ಬಂದಿದ್ದಾರೆ ಎನ್ನಲಾಗ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ರಾಜ್ಯದಲ್ಲಿ ಅನೈತಿಕ ಪೊಲೀಸ್ ಗಿರಿ ನಿರಾತಂಕವಾಗಿ ಮುಂದಿವರಿದಿದೆ. ಬೆಂಗಳೂರಿನ ಘಟನೆಯ ಸಂದರ್ಭದಲ್ಲಿ ಅನೈತಿಕ ಪೊಲೀಸ್ ಗಿರಿಯನ್ನು ಸಹಿಸುವುದಿಲ್ಲ ಎಂದು ಅಬ್ಬರಿಸಿ ಬೊಬ್ಬಿರಿದಿದ್ದ ಸಿಎಂ ಮತ್ತು ಗೃಹ ಸಚಿವರು ಮೌನಕ್ಕೆ ಜಾರಿದ್ದಾರೆ. ಸಿಎಂ ಬೊಮ್ಮಾಯಿಯವರೇ ನಿಮ್ಮ ಶಾಸಕ ಉಮಾನಾಥ ಕೋಟ್ಯಾನ್ ಆರೋಪಿಗಳ ಪರ ನಿಂತಿದ್ದಾರೆ, ಈಗೇನು ಅಂತಿರಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ: ಇಬ್ಬರು ಆರೋಪಿಗಳು ಅಂದರ್