ಕರ್ನಾಟಕ

karnataka

ಕೃಷ್ಣ ಮಠ ಜಾಗದ ಮೂಲದ ಬಗ್ಗೆ ನೀಡಿದ ಹೇಳಿಕೆ ವಿವಾದ: ಸ್ಪಷ್ಟೀಕರಣ ನೀಡಿದ ಮಿಥುನ್ ರೈ

By

Published : Mar 9, 2023, 9:00 PM IST

ಕರಾವಳಿ ಜಿಲ್ಲೆ ಸೌಹಾರ್ದತೆಯ ಇತಿಹಾಸವನ್ನು ಹೊಂದಿದೆ ಎಂದು ಕಾಂಗ್ರೆಸ್​ ಮುಖಂಡ ಮಿಥುನ್ ರೈ ಅವರು ತಿಳಿಸಿದ್ದಾರೆ.

ಕಾಂಗ್ರೆಸ್​ ಮುಖಂಡ ಮಿಥುನ್ ರೈ
ಕಾಂಗ್ರೆಸ್​ ಮುಖಂಡ ಮಿಥುನ್ ರೈ

ಕಾಂಗ್ರೆಸ್​ ಮುಖಂಡ ಮಿಥುನ್ ರೈ

ಮಂಗಳೂರು : ಉಡುಪಿ ಶ್ರೀಕೃಷ್ಣ ಮಠದ ಜಾಗದ ವಿಚಾರದಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದ್ದು, ಈ ಹೇಳಿಕೆಗೆ ಅವರು ಇದೀಗ ಸ್ಪಷ್ಟೀಕರಣ ನೀಡಿದ್ದಾರೆ. ಮಿಥುನ್ ರೈ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅವರು ಮೂಡಬಿದಿರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ. ಅವರು ಇತ್ತೀಚೆಗೆ ಮೂಡಬಿದಿರೆಯ ಪುತ್ತಿಗೆಯಲ್ಲಿ ನೂರಾನಿ ಮಸೀದಿಯಲ್ಲಿ ‘ನಮ್ಮೂರ ಮಸೀದಿ ನೋಡಬನ್ನಿ‘ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಅವರು ಸೌಹಾರ್ದತೆಯ ಬಗ್ಗೆ ಮಾತನಾಡಿದ್ದರು. ಕರಾವಳಿಯ ಜಿಲ್ಲೆ ಸೌಹಾರ್ದತೆಯ ಇತಿಹಾಸ ಹೊಂದಿದೆ. ಬಪ್ಪನಾಡು ದೇವಿ ಒಲಿದದ್ದು ಬಪ್ಪ ಬ್ಯಾರಿಗೆ, ಕವತಾರಿನಲ್ಲಿ ಮುಸ್ಲಿಂ ಅರ್ಚಕನಿಂದ ಕೊರಗಜ್ಜನ ಕಟ್ಟೆಗೆ ಪೂಜೆ ನಡೆಯುತ್ತಿದೆ. ಉಡುಪಿ ಶ್ರೀಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು. ಅತ್ತೂರು ಚರ್ಚ್, ಸುಬ್ರಹ್ಮಣ್ಯ ದೇವಸ್ಥಾನ, ಉಳ್ಳಾಲ ದರ್ಗಾದಲ್ಲಿ ಸರ್ವಧರ್ಮದವವರು ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ ಎಂದು ಅವರು ಹೇಳಿದ್ದರು. ಅವರು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಉಡುಪಿ ಶ್ರೀಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು ಎಂಬ ಹೇಳಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ :ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಸೌಲಭ್ಯಗಳು ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಲ್ಲ, ಇದಕ್ಕೆ ಯಾರು ಹೊಣೆ: ಸಿಎಂ ಬೊಮ್ಮಾಯಿ

ಈ ಹೇಳಿಕೆ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಮಿಥುನ್ ರೈ ಸ್ಪಷ್ಟೀಕರಣ ನೀಡಿದ್ದಾರೆ. ನಾನು ಮಾತನಾಡಿದ್ದು ಪುತ್ತಿಗೆ ನೂರಾನಿ ಮಸೀದಿಯಲ್ಲಿ ನಮ್ಮೂರ ಮಸೀದಿ ನೋಡಬನ್ನಿ ಕಾರ್ಯಕ್ರಮದಲ್ಲಿ. ಈ ಜಿಲ್ಲೆಯ ಸೌಹಾರ್ದತೆಗೆ ಇತಿಹಾಸ ಇದೆ. ಈ ಸೌಹಾರ್ದತೆಗೆ ಒಡಕು ಮಾಡುವ ಕೆಲಸ ಯಾರೂ ಮಾಡಬಾರದು. ಈ ಜಿಲ್ಲೆಯಲ್ಲಿ ಸೌಹಾರ್ದತೆಗೆ ಬೇಕಾದಷ್ಟು ಉದಾಹರಣೆಗಳಿವೆ ಎಂದರು.

ಇದನ್ನೂ ಓದಿ :ಸಂಸದೆ ಸುಮಲತಾ ಬಿಜೆಪಿ ಸೇರುವ ಮಾತುಕತೆ ನಡೆದಿದೆ: ಸಿಎಂ ಬೊಮ್ಮಾಯಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜನೆಂಬ ಹೇಳಿಕೆಯೂ ಒಂದು. ನಾನು ಇತಿಹಾಸಕಾರನಲ್ಲ. ನನ್ನ ಉದ್ದೇಶ ಈ ಜಿಲ್ಲೆಯ ಸೌಹಾರ್ದತೆಗೆ ಒಡಕು ತರಬಾರದು. ಜಿಲ್ಲೆಯ ಸೌಹಾರ್ದತೆ ಹಾಳು ಮಾಡಬಾರದು. ಜಾತಿಯ ವಿಷಬೀಜ ಬಿತ್ತಬಾರದು ಎಂದು ಹತ್ತು ಉದಾಹರಣೆ ಕೊಟ್ಟಿದ್ದೇನೆ. ಈ ಉದಾಹರಣೆಗೆ ಪ್ರೇರಣೆ ಪೇಜಾವರ ಶ್ರೀಗಳು ನೀಡಿದ ಹೇಳಿಕೆ. ಅದು ಮಾಧ್ಯಮದಲ್ಲಿ ಬಂದಿತ್ತು ಎಂದು ತಿಳಿಸಿದರು.

ನನ್ನ ಉದ್ದೇಶ ಸೌಹಾರ್ದತೆ ಕಾಪಾಡುವುದು ಆಗಿತ್ತು-ಮಿಥುನ್ ರೈ: ಅದೇ ಮಾಧ್ಯಮದಲ್ಲಿ ಬಂದ ಹೇಳಿಕೆಯನ್ನು ನೋಡಿ ಹೇಳಿದ್ದೇನೆ. ನಾನು ಯಾರ ಮನಸ್ಸಿಗೆ ನೋವು ಮಾಡಲು ಹೇಳಿದ್ದಲ್ಲ. ಪರಮಪೂಜ್ಯ ಶ್ರೀಗಳ ಬಳಿ ಕ್ಷಮೆಯನ್ನು ಯಾಚಿಸುತ್ತೇನೆ. ನನ್ನ ಉದ್ದೇಶ ಇದ್ದದ್ದು ಸೌಹಾರ್ದತೆ ಕಾಪಾಡುವ ಪ್ರಾಮಾಣಿಕ ಪ್ರಯತ್ನ. ಅದಕ್ಕೆ ನೂರು ಉದಾಹರಣೆಗಳಲ್ಲಿ ಈ ಉದಾಹರಣೆ ಕೊಟ್ಟದ್ದು ಎಂದು ಹೇಳಿದ್ದಾರೆ.

ಇದನ್ನೂ ಓದಿ :ಬಿಜೆಪಿ- ಕಾಂಗ್ರೆಸ್ ಎರಡೂ ಪಕ್ಷಗಳು ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ: ಹೆಚ್​ಡಿಕೆ

ABOUT THE AUTHOR

...view details