ಕರ್ನಾಟಕ

karnataka

By

Published : Apr 26, 2023, 9:55 PM IST

ETV Bharat / state

ಜೆಡಿಎಸ್ ಅಭ್ಯರ್ಥಿಗೆ ಜೀವಬೆದರಿಕೆಯೊಡ್ಡಿ ನಾಮಪತ್ರ ವಾಪಸ್ : ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಕರಣ ದಾಖಲು

ಜೆಡಿಎಸ್​ ಅಭ್ಯರ್ಥಿಗೆ ಜೀವ ಬೆದರಿಕೆ ಒಡ್ಡಿ ನಾಮಪತ್ರ ಹಿಂಪಡೆಯುವಂತೆ ಮಾಡಿದ ಪ್ರಕರಣ ಸಂಬಂಧ ಕಾಂಗ್ರೆಸ್​ ಬೆಂಬಲಿತ ಇಬ್ಬರು ಕೌನ್ಸಿಲರ್​ ಮತ್ತು ಕಾಂಗ್ರೆಸ್​ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ.

case-filed-against-congress-leader-in-jds-candidate-nomination-withdraw-case
ಜೆಡಿಎಸ್ ಅಭ್ಯರ್ಥಿಗೆ ಜೀವಬೆದರಿಕೆಯೊಡ್ಡಿ ನಾಮಪತ್ರ ವಾಪಸ್ : ಕಾಂಗ್ರೆಸ್ ಮುಖಂಡರ ವಿರುದ್ಧ ಪ್ರಕರಣ ದಾಖಲು

ಉಳ್ಳಾಲ :ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ ಅಭ್ಯರ್ಥಿಯನ್ನು ಜೀವಬೆದರಿಕೆಯೊಡ್ಡಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಬೆಂಬಲಿತ ಇಬ್ಬರು ಮಾಜಿ ಕೌನ್ಸಿಲರ್​ ಸೇರಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಐಪಿಸಿ 1860ರಡಿ ಸೆಕ್ಷನ್ 365, 504, 506, 171ಸಿ, 384, 34ರಡಿ ಪ್ರಕರಣ ದಾಖಲಾಗಿದೆ. ಉಳ್ಳಾಲ ಪುರಸಭೆಯ ಕಾಂಗ್ರೆಸ್ ಬೆಂಬಲಿತ ಮಾಜಿ ಕೌನ್ಸಿಲರ್​​ಗಳಾದ ಮುಸ್ತಾಫ ಯಾನೆ ಖಬುರು ಮುಸ್ತಾಫ, ಉಸ್ಮಾನ್ ಕಲ್ಲಾಪು , ರಿಯಾಝ್ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ.

ಕಳೆದ ಎಪ್ರಿಲ್​​ 21ರಂದು ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಉಳ್ಳಾಲ ನಗರಸಭೆ ಚುನಾವಣಾ ಕಚೇರಿಯಲ್ಲಿ ಅಲ್ತಾಫ್ ಕುಂಪಲ ಎಂಬವರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆಯಲ್ಲಿ ಸಿಂಧುತ್ವಗೊಂಡ ಘೋಷಣೆ ನಂತರ ಅದೇ ದಿನ ಸಂಜೆ 3 ಗಂಟೆಗೆ ಮೇಲಂಗಡಿ ದರ್ಗಾ ಹಿಂಭಾಗದಲ್ಲಿ ಮುಸ್ತಾಫ, ಉಸ್ಮಾನ್, ರಿಯಾಝ್ ಹಾಗೂ ಇತರರು ಸೇರಿ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಅವರನ್ನು ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಜೊತೆಗೆ ನಾಮಪತ್ರ ಹಿಂಪಡೆಯುವಂತೆ ಬೆದರಿಕೆ ಒಡ್ಡಿ ಉಮೇದುವಾರಿಕೆ ವಾಪಸ್ಸು ಪಡೆಯುವ ಪತ್ರಕ್ಕೆ ಬಲವಂತವಾಗಿ ಸಹಿಯನ್ನು ಹಾಕಿಕೊಂಡಿದ್ದಾರೆ. ಬಳಿಕ ಅಲ್ಲಿಂದ ನೇರವಾಗಿ ಚುನಾವಣಾಧಿಕಾರಿಗಳ ಬಳಿ ಬಂದು ಉಮೇದುವಾರಿಕೆ ವಾಪಸ್ಸು ಪಡೆಯುವ ಪತ್ರವನ್ನು ಸಲ್ಲಿಸುವಂತೆ ಮಾಡಿದ್ದಾರೆ ಎಂದು ಅಲ್ತಾಫ್​ ಕುಂಪಲ ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ನಂತರ ಮತ್ತೆ ತಡರಾತ್ರಿ ಮನೆಗೆ ನುಗ್ಗಿ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅಲ್ತಾಫ್​ ಕುಂಪಲ, ನಾನು ಜೆಡಿಎಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದ ದಿನ ಕೆಲ ದುಷ್ಕರ್ಮಿಗಳು ನಮ್ಮ ಮನೆಗೆ ಬಂದು ಮನೆಯವರಿಗೆ ಬೆದರಿಕೆ ಹಾಕಿದ್ದರು. ಅಷ್ಟೇ ಅಲ್ಲದೆ ನನ್ನ ಮೊಬೈಲ್​​ಗೆ ಬೆದರಿಕೆ ಕರೆಗಳು ಬರುತ್ತಿದ್ದು, ಜೊತೆಗೆ ವಾಟ್ಸಾಪ್ ನಂಬರಿಗೂ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಹೇಳಿದ್ದರು.

ಕಳೆದ ಶುಕ್ರವಾರ ನಾನು ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ವಾಪಸ್ಸಾಗುವ ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರಾದ ಮುಸ್ತಾಫ ಮತ್ತು ಉಸ್ಮಾನ್ ಎಂಬವರು ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿ ನಾಮಪತ್ರ ವಾಪಸ್ಸು ಪಡೆಯುವಂತೆ ಪತ್ರಕ್ಕೆ ಸಹಿ ಹಾಕಿಸಿದ್ದಾರೆ. ಬಳಿಕ ಈ ಪತ್ರವನ್ನು ಚುನಾವಣಾಧಿಕಾರಿಗೆ ಕೊಡುವಂತೆ ಮಾಡಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಜೊತೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡುವಂತೆ ಮನವಿ ಮಾಡಿದ್ದೇನೆ. ಅವಕಾಶ ಸಿಕ್ಕಿದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು.

ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ವಿಪಕ್ಷ ಉಪನಾಯಕ ಯು.ಟಿ ಖಾದರ್, ಬಿಜೆಪಿ ಅಭ್ಯರ್ಥಿಯಾಗಿ ಸತೀಶ್ ಕುಂಪಲ, ಎಸ್ ಡಿಪಿಐ ಪಕ್ಷದ ಅಭ್ಯರ್ಥಿಯಾಗಿ ರಿಯಾಜ್ ಫರಂಗಿಪೇಟೆ ಸ್ಪರ್ಧೆ ಮಾಡುತ್ತಿದ್ದಾರೆ.

ಇದನ್ನೂ ಓದಿ :ಮಂಗಳೂರು ಕ್ಷೇತ್ರದಲ್ಲಿ ಬೆದರಿಕೆ ಹಾಕಿ ನಾಮಪತ್ರ ಹಿಂಪಡೆಯುವಂತೆ ಮಾಡಿದ್ರು.. ಅಲ್ತಾಫ್​ ಕುಂಪಲ

ABOUT THE AUTHOR

...view details