ಕರ್ನಾಟಕ

karnataka

ETV Bharat / state

ಮಂಗಳೂರಿನಲ್ಲೊಂದು ಅಪರೂಪದ ತಾರಸಿ ತೋಟ: ಕಡಲನಗರಿಯಲ್ಲಿ ಕಾಬೂಲ್ ದ್ರಾಕ್ಷಿ ಬೆಳೆ

ಇವರ ಬಳಿ ಮಾವಿನ 30 ತಳಿಗಳಿವೆ, ಹಲಸಿನ ವಿಶೇಷ ತಳಿಗಳಿವೆ. ಆಶ್ಚರ್ಯಕರ ಸಂಗತಿಯೆಂದರೆ ದೊಡ್ಡ ಮರಗಳಾಗುವ ಮಾವು, ಗೇರು, ಹಲಸು, ಆ್ಯಪಲ್, ಪೇರಳೆ, ಲಿಂಬೆ, ಅಮಟೆಕಾಯಿ ಮುಂತಾದವುಗಳು ಕುಬ್ಜ ರೂಪ ತಳೆದು ಗ್ರೋ ಬ್ಯಾಗ್​ನಲ್ಲಿ ಬೆಳೆದು ಫಲ ನೀಡುತ್ತಿದೆ‌.

By

Published : Jan 14, 2021, 10:18 PM IST

Updated : Jan 15, 2021, 6:35 AM IST

blani-dsouza-terrace-garden-in-mangalore
ತಾರಸಿ ತೋಟ

ಮಂಗಳೂರು:ಏನಾದರು ಮಾಡಬೇಕೆಂಬ ಮನಸ್ಸು, ಛಲವಿದ್ದಲ್ಲಿ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಂಗಳೂರಿನ ಮಾರ್ನಮಿಕಟ್ಟೆ ನಿವಾಸಿ ಬ್ಲ್ಯಾನಿ ಡಿಸೋಜ ಅವರೇ ಸಾಕ್ಷಿ.

ಇವರ ಸಾಧನೆ ಏನೆಂದು ಕೇಳಿದರೆ ಯಾರನ್ನಾದರೂ ಹುಬ್ಬೇರಿಸುವಂತೆ ಮಾಡುತ್ತದೆ. ಮಂಗಳೂರಿನಲ್ಲಿ ದ್ರಾಕ್ಷಿ ಬೆಳೆಸಿ ಸೈ ಎನಿಸಿಕೊಂಡವರು ಡಿಸೋಜ. ಇದು ಮರುಭೂಮಿಯಲ್ಲಿ ತೆಂಗು-ಕಂಗು ಬೆಳೆಸಿದಷ್ಟೇ ಅಪರೂಪವೆಂದರೆ ತಪ್ಪಲ್ಲ. ದ್ರಾಕ್ಷಿಯಲ್ಲದೆ ಮಂಗಳೂರಿನಲ್ಲಿ ಅಪರೂಪದ ಗಿಡ, ಮರಗಳನ್ನು ನೆಟ್ಟು ಎಲ್ಲರು ಹುಬ್ಬೇರಿಸಿ ನೋಡುವಂತೆ ಮಾಡಿದ್ದಾರೆ.

ಬ್ಲ್ಯಾನಿ ಡಿಸೋಜ ಅವರು ಗಿಡ, ಮರಗಳ ಬಗ್ಗೆ ಅತೀವ ಆಸಕ್ತಿ, ಪ್ರೀತಿ ಉಳ್ಳವರು. ಹಾಗಾಗಿಯೇ‌ ಮಂಗಳೂರಿನಲ್ಲಿ ಕಾಣಸಿಗುವ ಅಪರೂಪದಲ್ಲಿ ಅಪರೂಪವಾದ ಆ್ಯಪಲ್ ಗಿಡ, ಕಿತ್ತಳೆ , ಡ್ರ್ಯಾಗನ್ ಫ್ರೂಟ್, ಬಳ್ಳಿ ಆಲೂಗೆಡ್ಡೆ ಇವರ ತಾರಸಿ ತೋಟದಲ್ಲಿ ರಾರಾಜಿಸುತ್ತಿವೆ. ಉಳಿದಂತೆ ಎಲ್ಲಾ ವಿಧದ ತರಕಾರಿ ಬೆಳೆಗಳನ್ನು ಕಾಣಬಹುದು.

ಮಂಗಳೂರಿನಲ್ಲೊಂದು ಅಪರೂಪದ ತಾರಸಿ ತೋಟ

ಇದನ್ನೂ ಓದಿ: 'ಸಿಎಂ ಆಗಿ ಏನು ಕಿಸಿಯುವುದಿದೆ?': ಪರೋಕ್ಷವಾಗಿ ಟಾಂಗ್ ನೀಡಿದ್ರ ಯತ್ನಾಳ?

ಅದರಲ್ಲೂ ಮಾವಿನ 30 ತಳಿಗಳಿವೆ, ಹಲಸಿನ ವಿಶೇಷ ತಳಿಗಳಿವೆ. ಆಶ್ಚರ್ಯಕರ ಸಂಗತಿಯೆಂದರೆ ದೊಡ್ಡ ಮರಗಳಾಗುವ ಮಾವು, ಗೇರು, ಹಲಸು, ಆ್ಯಪಲ್, ಪೇರಳೆ, ಲಿಂಬೆ, ಅಮಟೆಕಾಯಿ ಮುಂತಾದವುಗಳು ಕುಬ್ಜ ರೂಪ ತಳೆದು ಗ್ರೋ ಬ್ಯಾಗ್​ನಲ್ಲಿ ಬೆಳೆದು ಫಲ ನೀಡುತ್ತಿದೆ‌. 2014 ರಿಂದ ದ್ರಾಕ್ಷಿ‌ ಬಳ್ಳಿ ಹಬ್ಬಿಸಿದ ಬ್ಲ್ಯಾನಿ ಡಿಸೋಜ ಅವರ ಮನೆಯಲ್ಲಿ ಸುಮಾರು 50 ಕೆಜಿಯಷ್ಟು ಕಾಬೂಲ್ ದ್ರಾಕ್ಷಿ ಲಭ್ಯವಾಗಿದೆಯಂತೆ. ರುಚಿಯೂ ಅಷ್ಟೇ ಚೆನ್ನಾಗಿದೆ ಎಂದು ಅವರು ಹೇಳುತ್ತಾರೆ.

ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದ ಡಿಸೋಜ ಅವರು ಮರಳಿ ತಾಯ್ನಾಡಿಗೆ ಬಂದ ಬಳಿಕ ಸ್ವಂತ ಆಸಕ್ತಿಯಿಂದ ತಮ್ಮ ಮನೆಯ 22 ಸೆಂಟ್ಸ್ ಜಾಗದಲ್ಲಿ ಹವ್ಯಾಸಿ ತೋಟಗಾರಿಕೆಯಲ್ಲಿ ತೊಡಗಿದರು. ಬಳಿಕ ತಾರಸಿ ತೋಟಕಾರಿಕೆಯನ್ನು ಮಾಡಿದರು. ಕ್ರಮೇಣ ಪೂರ್ಣಕಾಲ ತೋಟಗಾರಿಕೆಯಲ್ಲಿಯೇ ತೊಡಗಿದ ಇವರ ತೋಟವನ್ನು ವೀಕ್ಷಿಸಲು ಶಾಲಾ ಮಕ್ಕಳು ಸೇರಿದಂತೆ 30 ಸಾವಿರಕ್ಕೂ ಅಧಿಕ ಮಂದಿ ಆಸಕ್ತರು ಭೇಟಿ ನೀಡಿದ್ದಾರಂತೆ.

ಕಸಿ ಕಟ್ಟುವುದರಲ್ಲಿ ನಿಷ್ಣಾತರಾದ ಬ್ಲ್ಯಾನಿ ಡಿಸೋಜ ಅವರು ಅಗತ್ಯವಿರುವವರಿಗೆ ಗಿಡಗಳನ್ನು ಉಚಿತವಾಗಿಯೂ, ಹಣಕ್ಕೂ ಮಾರುತ್ತಾರೆ. ಅಲ್ಲದೆ ಆಸಕ್ತರ ಮನೆಗೇ ಬಂದು ಕೈತೋಟ, ತಾರಸಿ ತೋಟವನ್ನು ಮಾಡಿಕೊಡುತ್ತಾರಂತೆ.‌ ಅಲ್ಲದೆ ಅವರ ತೋಟ ವೀಕ್ಷಣೆಗೆ ಶಾಲಾ ಮಕ್ಕಳಿಗೆ ಸದಾ ಅವಕಾಶ ನೀಡುತ್ತಾರಂತೆ. ಈ ಮೂಲಕ ಮಕ್ಕಳಿರುವಾಗಲೇ ಗಿಡಗಳ ಪ್ರೀತಿ ಬೆಳೆಸಿ ಪರಿಸರ ಉಳಿಸುವ ಅಗತ್ಯವಿದೆ ಎಂದು ಹೇಳುತ್ತಾರೆ.

ಬ್ಲ್ಯಾನಿ ಡಿಸೋಜ ಅವರ ಪ್ರಕಾರ ಗಿಡಗಳು ಚೆನ್ನಾಗಿ ಬೆಳೆಯಲು ಗೊಬ್ಬರಕ್ಕಿಂತ ಸರಿಯಾಗಿ ಸೂರ್ಯನ ಬಿಸಿಲು ಹಾಗೂ ನೀರು ಇದ್ದರೆ ಸಾಕು. ಜೊತೆಗೆ ಒಂದಷ್ಟು ಪ್ರೀತಿ ಅಗತ್ಯವಿದೆ. ನಗರದಲ್ಲಿ ಒಳ್ಳೆಯ ಪರಿಸರ, ಹಸಿರು ವಾತಾವರಣ ನಿರ್ಮಾಣವಾಗಲು‌ ಗಿಡ-ಮರಗಳ ಅಗತ್ಯವಿದೆ. ಅದಕ್ಕಾಗಿ ನಾನು ಈ ಕಾರ್ಯದಲ್ಲಿ ತೊಡಿಗಿದ್ದೇನೆ. ಆದರೆ ನನ್ನೊಬ್ಬನಿಂದ ಇದು ಅಸಾಧ್ಯ. ಆದ್ದರಿಂದ ಎಲ್ಲರೂ ಗಿಡಮರಗಳನ್ನು ಬೆಳೆಸಲು ಆಸಕ್ತರಾಗಬೇಕು ಎಂದು ಬ್ಲ್ಯಾನಿ ಡಿಸೋಜ‌ ಹೇಳುತ್ತಾರೆ‌.

Last Updated : Jan 15, 2021, 6:35 AM IST

ABOUT THE AUTHOR

...view details