ಕರ್ನಾಟಕ

karnataka

ETV Bharat / state

9 ಭಾಷೆ ಮಾತನಾಡುವ ಚತುರ.. ಬೆಳ್ತಂಗಡಿಯಲ್ಲಿ ಸಿಕ್ಕಿಬಿದ್ದ ಈ ಕುಖ್ಯಾತ ಅಂತಾರಾಜ್ಯ ಕಳ್ಳ - ಅಂತಾರಾಜ್ಯ ಕಳ್ಳ

ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

belthangadi-theft-case-dot-accused-arrested
ಬೆಳ್ತಂಗಡಿ : ಕುಖ್ಯಾತ ಅಂತಾರಾಜ್ಯ ಕಳ್ಳನನ್ನು ಬಂಧಿಸಿದ ಪೊಲೀಸರು

By ETV Bharat Karnataka Team

Published : Sep 28, 2023, 10:57 PM IST

ಬೆಳ್ತಂಗಡಿ (ದಕ್ಷಿಣಕನ್ನಡ): ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳನನ್ನು ಬೆಳ್ತಂಗಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಆಂಧ್ರಪ್ರದೇಶ ಮೂಲದ ಸದ್ಯ ತಮಿಳುನಾಡಿನ ಕನ್ಯಾಕುಮಾರಿ ನಿವಾಸಿ ಉಮೇಶ್​ ಬಳೆಗಾರ ಎಂದು ಗುರುತಿಸಲಾಗಿದೆ. ಕಳೆದ ಆಗಸ್ಟ್ 12ರಂದು ಉಜಿರೆ ಗ್ರಾಮದ ಕಲ್ಲೆ ನಿವಾಸಿ ಫೆಲಿಕ್ಸ್ ಎಂಬವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಒಳಗೆ ನುಗ್ಗಿದ ಆರೋಪಿ 15 ಪವನ್ ಚಿನ್ನಾಭರಣ ಮತ್ತು 20 ಸಾವಿರ ನಗದು ಎಗರಿಸಿ ಪರಾರಿಯಾಗಿದ್ದನು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆರೋಪಿ ಉಮೇಶ್​ ಬಳೆಗಾರನನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

ಸೆ.26 ರಂದು ಉಮೇಶ್​ನನ್ನು ಮೈಸೂರು ಜಿಲ್ಲೆಯ ಝೂ ಪಾರ್ಕ್​ನಲ್ಲಿ ವಶಕ್ಕೆ ಪಡೆದ ಪೊಲೀಸರು ಬೆಳ್ತಂಗಡಿ ಕೋರ್ಟ್​ಗೆ ಹಾಜರುಪಡಿಸಿ ಎರಡು ದಿನ ಕಸ್ಟಡಿಗೆ ಪಡೆದಿದ್ದರು. ಆರೋಪಿಯಿಂದ ಕದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಉಮೇಶ್ ಬಳೆಗಾರ ಮೂಲತಃ ಆಂದ್ರಪ್ರದೇಶದವನಾಗಿದ್ದು, ಮೊದಲ ಪತ್ನಿಗೆ ಮೂವರು ಮಕ್ಕಳಿದ್ದಾರೆ. ಮಕ್ಕಳು ಕೂಡ ಕಳ್ಳತನದಲ್ಲಿ ತೊಡಗಿಕೊಂಡಿದ್ದರು ಎಂದು ತಿಳಿದುಬಂದಿದೆ.

ಮೊದಲ ಪತ್ನಿ ಸಾವನ್ನಪ್ಪಿದ ನಂತರ ಆರೋಪಿ ತಮಿಳುನಾಡಿನ ಕನ್ಯಾಕುಮಾರಿಯ ಮಹಿಳೆಯನ್ನು ಮದುವೆಯಾಗಿದ್ದ. ಈ ದಂಪತಿಗೂ ಎರಡು ಮಕ್ಕಳಾಗಿತ್ತು. ಅಂದಿನಿಂದ ಆರೋಪಿ ಉಮೇಶ್​ ಎರಡನೇ ಪತ್ನಿಯ ಊರಿನಲ್ಲಿ ನೆಲೆಸಿದ್ದ. ಈತನಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಆರೋಪಿಯು 14 ನೇ ವಯಸ್ಸಿನಲ್ಲಿ ಅಂದರೆ 1994ರಿಂದ ಕಳ್ಳತನ ನಡೆಸುತ್ತಿದ್ದು, 9 ಭಾಷೆ ಮಾತನಾಡುತ್ತಾನೆ. ಆರೋಪಿಯು ಕಳ್ಳತನ ನಡೆಸಲು ಹೋಗುವಾಗ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ. ಬಳಿಕ ಸ್ಥಳೀಯ ವಸತಿ ಗೃಹದಲ್ಲಿ ರೂಮ್​ ಬಾಡಿಗೆ ಪಡೆದು ಅಲ್ಲೇ ಉಳಿದುಕೊಳ್ಳುತ್ತಿದ್ದ. ಕಳ್ಳತನ ಮಾಡಿದ ಬಳಿಕ ಬೇರೆಡೆ ತೆರಳುತ್ತಿದ್ದ.

ವಿವಿಧ ರಾಜ್ಯದಲ್ಲಿ ಕಳ್ಳತನ :ತಮಿಳುನಾಡು, ಕೇರಳ, ಆಂಧ್ರ ಪ್ರದೇಶ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ‌ ಈಗಾಗಲೇ ಹಲವು ಕಳ್ಳತನ ಪ್ರಕರಣದಲ್ಲಿ ಆರೋಪಿ ಭಾಗಿಯಾಗಿ ಜೈಲು ಪಾಲಾಗಿದ್ದ. ಬಳಿಕ ಜಾಮೀನು ಪಡೆದು ಹೊರಬಂದ ಬಳಿಕ ಆರೋಪಿ ನ್ಯಾಯಾಲಯಕ್ಕೆ ಹಾಜರಾಗುತ್ತಿರಲಿಲ್ಲ. ಹೀಗಾಗಿ ಈ ವಿರುದ್ಧ ನಾಲ್ಕು ರಾಜ್ಯದ ನ್ಯಾಯಾಲಯಗಳಿಂದ ವಾರೆಂಟ್ ಜಾರಿಯಾಗಿತ್ತು. ನಾಲ್ಕು ರಾಜ್ಯದ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು‌.

ಕಾರ್ಯಾಚರಣೆಯಲ್ಲಿ ಪಿಎಸ್ಐ ಧನರಾಜ್ ಟಿ.ಎಮ್ ಹಾಗೂ ಚಂದ್ರ ಶೇಖರ್ ಎ.ಎಮ್, ಪಿಎಸ್ಐ ಕೆ.ಜೆ. ತಿಲಕ್ , ಶಿವರಾಮ ನಾಯ್ಕ ಹೆಡ್​ ಕಾನ್ಸ್​ಸ್ಟೇಬಲ್​ಗಳಾದ ಬೆನ್ನಿಚ್ಚನ್, ಸುಂದರ ಶೆಟ್ಟಿ, ಪಳನಿವೇಲು, ಪ್ರಮೋದ್, ಇಬ್ರಾಹಿಂ, ಪೇದೆಗಳಾದ ಚರಣ್ ರಾಜ್, ಆನಂದ ಮುಂತಾದವರು ಪಾಲ್ಗೊಂಡಿದ್ದರು.

ಇದನ್ನೂ ಓದಿ :Bangaluru crime: ಹಳೆ ವೈಷಮ್ಯಕ್ಕೆ ಸಹವರ್ತಿ ಕೊಲೆಗೈದಿದ್ದ ನಾಲ್ವರು ಆರೋಪಿಗಳು ಅಂದರ್​

ABOUT THE AUTHOR

...view details