ಕರ್ನಾಟಕ

karnataka

By

Published : Feb 16, 2023, 11:03 PM IST

ETV Bharat / state

ಬಲಿಪ ನಾರಾಯಣ ಭಾಗವತ ನಿಧನ: ಮರೆಯಾದ 'ಬಲಿಪ' ಪರಂಪರೆಯ ದೊಡ್ಡ ಕೊಂಡಿ

ಆಟ-ಕೂಟ-ಗಾನ ವೈಭವ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದ ಬಲಿಪ ನಾರಾಯಣ ಭಾಗವತರು‌ (86) ನಿಧನ ಹೊಂದಿದ್ದಾರೆ.

balipa-narayana-bhagwat-passed-away
ಅಗ್ರಮಾನ್ಯ ಭಾಗವತ ಬಲಿಪ ನಾರಾಯಣ ಭಾಗವತ ನಿಧನ: ಮರೆಯಾಯಿತು 'ಬಲಿಪ' ಪರಂಪರೆಯ ದೊಡ್ಡ ಕೊಂಡಿ

ಮಂಗಳೂರು : ತೆಂಕುತಿಟ್ಟಿನ ಅಗ್ರಮಾನ್ಯ ಭಾಗವತ, 'ಬಲಿಪ' ಪರಂಪರೆಯ ಸಮರ್ಥ ಕೊಂಡಿ ಬಲಿಪ ನಾರಾಯಣ ಭಾಗವತರು (86) ಫೆ‌.16ರಂದು ಸಂಜೆ 6.30ವೇಳೆಗೆ ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಬಲಿಪರನ್ನು ಮೂಡುಬಿದಿರೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತಮ್ಮ ತಂದೆ ಮಾಧವ ಭಟ್ಟರಿಂದ ಯಕ್ಷಗಾನ ಭಾಗವತಿಕೆ ಕಲಿತ ಬಲಿಪ ನಾರಾಯಣ ಭಾಗವತರು ಅನಂತರ ತಮ್ಮ ಅಜ್ಜ ಬಲಿಪ ಭಾಗವತರಿಂದ ಭಾಗವತಿಕೆ, ಯಕ್ಷಗಾನ ನಡೆಯ ಪಟ್ಟುಗಳನ್ನು ಕರಗತ ಮಾಡಿಕೊಂಡರು. 1952ರಲ್ಲಿ ಮುಲ್ಕಿ ಮೇಳದಲ್ಲಿ ಸಂಗೀತಗಾರರಾಗಿ ಯಕ್ಷ ಪಯಣ ಆರಂಭಿಸಿದ ಇವರು, ಕೂಡ್ಲು ಮೇಳದಲ್ಲಿ ಸಂಗೀತಗಾರರಾಗಿ ತಿರುಗಾಟ ಮಾಡಿದರು. 1953ರಲ್ಲಿ ಭಗವತಿ ಮೇಳದಲ್ಲಿ ಭಾಗವತರಾಗಿ ಸೇರ್ಪಡೆಗೊಂಡ ಬಲಿಪ ಭಾಗವತರು ಬಳಿಕ ಪೆಡ್ರೆ ಜಟಾಧಾರಿ ಮೇಳ, ಕೂಡ್ಲು, ಇರಾ, ರೆಂಜಾಳ, ಸೌಕೂರು, ಧರ್ಮಸ್ಥಳ, ಸುರತ್ಕಲ್ ಮೇಳಗಳಲ್ಲಿ ಸೇವೆ ಸಲ್ಲಿಸಿದರು. 1972ರಲ್ಲಿ ಕಟೀಲು ಮೇಳ ಸೇರಿ 2003ರವರೆಗೆ ದೀರ್ಘಾವಧಿ ಕಾಲ ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿದ್ದರು.

ಅಗ್ರಮಾನ್ಯ ಭಾಗವತ ಬಲಿಪ ನಾರಾಯಣ ಭಾಗವತ ನಿಧನ

ಆಟ-ಕೂಟ-ಗಾನ ವೈಭವ ಎಲ್ಲದಕ್ಕೂ ಸೈ ಎನಿಸಿಕೊಂಡಿದ್ದ ಬಲಿಪ ನಾರಾಯಣ ಭಾಗವತರು‌, ಕಿರಿಯ ಬಲಿಪರೆಂದೇ ಪ್ರಸಿದ್ಧರಾದವರು‌. ತಮ್ಮ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರು ಹಾಕಿಕೊಟ್ಟ ತೆಂಕುತಿಟ್ಟು ಯಕ್ಷಗಾನದ 'ಬಲಿಪ ಶೈಲಿ'ಯನ್ನು ಸಮರ್ಥವಾಗಿ ಮುನ್ನಡೆಸಿದವರು‌. ಪಾರ್ತಿಸುಬ್ಬನ 'ಪಂಚವಟಿ', ಮುದ್ದಣನ 'ಕುಮಾರ ವಿಜಯ' ಪ್ರಸಂಗಗಳನ್ನು ಇವರ ಹಾಗೆ ಹಾಡುವವರು ಮತ್ತೊಬ್ಬರಿಲ್ಲ ಎಂಬ ಕೀರ್ತಿಯನ್ನು ಪಡೆದಿದ್ದರು. ಹಲವಾರು ಯಕ್ಷಗಾನ ಪ್ರಸಂಗಗಳು ಇವರಿಗೆ ಕಂಠಸ್ಥವಾಗಿತ್ತು. ರಂಗಸ್ಥಳದಲ್ಲಿ ಇವರ ಕಂಚಿನ ಕಂಠವನ್ನು ಆಲಿಸಲೆಂದೇ ಯಕ್ಷ ರಸಿಕರು ಭಾರಿ ಸಂಖ್ಯೆಯಲ್ಲಿ ಸೇರುತ್ತಿದ್ದರು. ಪ್ರಸಂಗಕರ್ತರಾಗಿಯೂ ಪ್ರಸಿದ್ಧರಾಗಿದ್ದ ಬಲಿಪ ಭಾಗವತರು ಹತ್ತಾರು ಪ್ರಸಂಗಗಳನ್ನು ಬರೆದಿದ್ದಾರೆ.

ಕಳೆದ ವರ್ಷ ಇವರ ಪುತ್ರ ಕಟೀಲು ಎರಡನೇ ಮೇಳದ ಪ್ರಧಾನ ಭಾಗವತ ಪ್ರಸಾದ ಬಲಿಪರು ಇಹಲೋಕ ತ್ಯಜಿಸಿದ್ದರು. ಇದೀಗ ಇನ್ನೊಬ್ಬ ಪುತ್ರ ಬಲಿಪ ಶಿವಶಂಕರರು ಪ್ರಸ್ತುತ ಕಟೀಲು ಮೇಳದ ಪ್ರಧಾನ ಭಾಗವತರಾಗಿದ್ದಾರೆ. ಬಲಿಪರು ರಾಜ್ಯೋತ್ಸವ ಪ್ರಶಸ್ತಿ, ಪಾರ್ತಿಸುಬ್ಬ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ‘ಬಲಿಪಯಾನ’ ಅವರಿಗೆ ಸಮರ್ಪಿಸಿದ ಅಭಿನಂದನ ಗ್ರಂಥ. ಬಲಿಪ ಭಾಗವತರು ಮೂವರು ಪುತ್ರರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಇದನ್ನೂ ಓದಿ:ಕನ್ಯಾಕುಮಾರಿಯಲ್ಲಿ ಮಂಗಳೂರು ಬೋಟ್​ಗಳ ಮೇಲೆ ಕಲ್ಲು ತೂರಾಟ ಪ್ರಕರಣ: ಗಾಯಗೊಂಡ ಮೀನುಗಾರರಿಂದ ದೂರು

ABOUT THE AUTHOR

...view details