ಉಳ್ಳಾಲ: ನೇತ್ರಾವತಿ ಸೇತುವೆಯಲ್ಲಿ ಕಸ ಬಿಸಾಡುವವರ ವಿರುದ್ಧ ವೃಕ್ಷ ಎನ್ಜಿಒನ ಬಾಸ್ಕಿಯಾರ್ಬ್ಸ್ ಯುವ ತಂಡದ ವತಿಯಿಂದ ಜಾಗೃತಿ ಜಾಥಾ ಎರಡನೇ ದಿನ ನಡೆಯಿತು. ಸುಮಾರು 100 ಜನ ಕಾರ್ಯಕರ್ತರು ನೇತ್ರಾವತಿ ಸೇತುವೆ ಉದ್ದಕ್ಕೂ ಸಾಲಾಗಿ ನಿಂತು ಮೊಬೈಲ್ ಟಾರ್ಚ್ ಹಿಡಿದು ಕಸ ಬಿಸಾಡದಂತೆ ಜಾಗೃತಿ ಮೂಡಿಸಿದರು.
ಪರಿಸರ ಮಾಲಿನ್ಯದ ವಿರುದ್ಧ ಸಂಸ್ಥೆ ಪರಿಣಾಮಕಾರಿಯಾಗಿ ಜಾಗೃತಿ ಜಾಥಾಗಳನ್ನು ನಡೆಸುತ್ತಾ ಬಂದಿದೆ. ಇತ್ತೀಚೆಗೆ ಬೆಂಗ್ರೆ ಸಮುದ್ರ ತೀರದಲ್ಲಿ ತ್ಯಾಜ್ಯದ ರಾಶಿ ವಿರುದ್ಧ ಜಾಗೃತಿಗೆ ಮುಂದಾದಾಗ, ಅಲ್ಲಿ ಶೇಖರಣೆಯಾಗುವ ತ್ಯಾಜ್ಯವೆಲ್ಲ ನೇತ್ರಾವತಿ ಸೇತುವೆಯಿಂದ ಎಸೆದದ್ದಾಗಿದೆ ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ನೇತ್ರಾವತಿ ಸೇತುವೆಯಲ್ಲೇ ಜಾಥಾ ಕೈಗೊಳ್ಳಲು ತೀರ್ಮಾನಿಸಿ, ಇಂದು ಎರಡನೇ ದಿನ ನಸುಕಿನಿಂದ ಕಾರ್ಯಕ್ರಮ ನಡೆಸಿದರು.