ಮಂಗಳೂರು (ದಕ್ಷಿಣ ಕನ್ನಡ): ಸೌದಿ ಅರೇಬಿಯಾದ ರಿಯಾದ್ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಈ ಘಟನೆ ರಿಯಾದ್ನ ಖುರೈಸ್ ರಸ್ತೆಯ ಬಳಿ ನಿನ್ನೆ ನಡೆದಿದೆ. ಹಳೆಯಂಗಡಿ ಕದಿಕೆ ನಿವಾಸಿ ರಿಜ್ವಾನ್, ಸುರತ್ಕಲ್ ಕೃಷ್ಣಾಪುರದ ಅಕೀಲ್, ಮಂಗಳೂರಿನ ನಾಸಿರ್ ಮೃತಪಟ್ಟಿದ್ದು, ಇವರ ಜೊತೆಗೆ ಪ್ರಯಾಣಿಸುತ್ತಿದ್ದ ಬಾಂಗ್ಲಾ ಪ್ರಜೆ ಶಿಹಾಬ್ ಎಂಬಾತನು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ನಾಲ್ವರು ನಾಲ್ಕು ತಿಂಗಳ ಹಿಂದೆಯಷ್ಟೆ ರಿಯಾದ್ಗೆ ತೆರಳಿದ್ದರು. ರಿಯಾದ್ನಲ್ಲಿ ಇಕಾಮ್ (ರೆಸಿಡೆನ್ಸಿಯಲ್ ಪ್ರಮಾಣ ಪತ್ರ) ಪಡೆಯುವ ಪ್ರಕ್ರಿಯೆಗಾಗಿ ಕಾರಿನಲ್ಲಿ ತೆರಳುತ್ತಿದ್ದರು. ನಾಲ್ವರು ಕಾರಿನಲ್ಲಿ ಹೋಗುತ್ತಿದ್ದಾಗ ಖುರೈಸ್ ರಸ್ತೆಯ ಬಳಿ ಒಂಟೆಗೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದವರು SAQCO ಎಂಬ ಕಂಪನಿಯಲ್ಲಿ ಕಾರ್ಮಿಕರಾಗಿದ್ದರು. ಅಕೀಲ್ ಅವರು ಮಂಗಳೂರಿನ ಸುರತ್ಕಲ್ ಕೃಷ್ಣಾಪುರ ನಿವಾಸಿಯಾಗಿದ್ದು, ರಿಝ್ವಾನ್ ಹಳೆಯಂಗಡಿ ಕದಿಕೆ ನಿವಾಸಿ ಮತ್ತು ನಾಸಿರ್ ಮಂಗಳೂರಿನ ನಿವಾಸಿಯಾಗಿದ್ದಾರೆ. ಮೃತದೇಹಗಳನ್ನು ಅಲ್ ಹಸ್ಸಾ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಂತ್ರಸ್ತ ಕುಟುಂಬವನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ.
ಹಳೆಯಂಗಡಿ ಕದಿಕೆ ಕೇಂದ್ರ ಜುಮಾ ಮಸೀದಿ ಬಳಿಯ ನಿವಾಸಿ ರಿಝ್ವಾನ್ ಅವರು, 4 ತಿಂಗಳ ಹಿಂದಷ್ಟೇ ಉದ್ಯೋಗ ನಿಮಿತ್ತ ಸೌದಿ ಅರೆಬಿಯಾಕ್ಕೆ ತೆರಳಿದ್ದರು. ಇವರು ಬದ್ರುದ್ದೀನ್ ಮತ್ತು ಅಲೀಮಾ ದಂಪತಿಯ ನಾಲ್ಕು ಮಂದಿ ಮಕ್ಕಳ ಪೈಕಿ ಓರ್ವನಾಗಿದ್ದಾರೆ. ಇವರ ಬಾವ ಅಬ್ದುಲ್ ರಝಾಕ್ ಪ್ರತಿಕ್ರಿಯಿಸಿ, ಘಟನೆಯ ಬಳಿಕ ಅಲ್ಲಿ ನೆಲೆಸಿರುವ ಸ್ಥಳೀಯರೊಂದಿಗೆ ಸಂಪರ್ಕದಲ್ಲಿದ್ದೇವೆ. ಮೃತದೇಹವನ್ನು ಇಲ್ಲಿಗೆ ತರುವ ಬಗ್ಗೆ ಇನ್ನೂ ತೀರ್ಮಾನ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ.