ಸುಳ್ಯ:ತಾಲೂಕಿನಲ್ಲಿ ಒಂದು ದಿನದ ಅಂತರದಲ್ಲಿ ಡೆಂಗ್ಯೂ ಜ್ವರಕ್ಕೆ ಇಬ್ಬರು ಯುವಕರು ಬಲಿಯಾಗಿದ್ದು, ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಆದ್ರೆ ಗ್ರಾಮದಲ್ಲಿ ಕೊರೊನಾ ಮಧ್ಯಯೂ ಡೆಂಗ್ಯೂ ಉಲ್ಬಣಿಸಿರುವುರುದು ಗ್ರಾಮಸ್ಥರಿಗೆ ಚಿಂತೆಯಾಗಿದೆ.
ಗುತ್ತಿಗಾರು ಸಮೀಪದ ದೇವಚಳ್ಳ ಗ್ರಾಮದ ಕನ್ನಡಕಜೆ ಚಿನ್ನಪ್ಪ ಎಂಬವರ ಏಕೈಕ ಪುತ್ರ ಶಶಿಕುಮಾರ್ (27) ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡ ಹಿನ್ನೆಲೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಅಲ್ಲಿ ಜ್ವರ ಉಲ್ಬಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಶಶಿಕುಮಾರ್ ನಿಧನರಾದರೆಂದು ತಿಳಿದುಬಂದಿದೆ.
ಇವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿದ್ದರು. ಸುಳ್ಯ ತಾಲೂಕಿನಲ್ಲಿ ಈಗಾಗಲೇ ಕೊರೊನಾ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು,ಇದೀಗ ಡೆಂಗ್ಯೂ ಜ್ವರದ ಭೀತಿ ಎದುರಾಗಿದೆ. ಆರೋಗ್ಯ ಇಲಾಖೆ ಇತ್ತ ಗಮನ ನೀಡಬೇಕಾಗಿದೆ ಎಂಬುದು ಗ್ರಾಮಸ್ಥರ ಮನವಿಯಾಗಿದೆ.