ಕರ್ನಾಟಕ

karnataka

ದಕ್ಷಿಣ ಕನ್ನಡದ ಕೊಲೆ ಪ್ರಕರಣಗಳು: ದೀಪಕ್ ರಾವ್, ಮಸೂದ್, ಫಾಝಿಲ್, ಜಲೀಲ್ ಕುಟುಂಬಗಳಿಗೆ ಸಿಎಂ ನಿಧಿಯಿಂದ ತಲಾ 25 ಲಕ್ಷ ಪರಿಹಾರ

By

Published : Jun 16, 2023, 11:05 PM IST

Updated : Jun 17, 2023, 10:55 AM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣಗಳ ಸಂಬಂಧ ನಾಲ್ಕು ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಘೋಷಿಸಲಾಗಿದೆ.

25-lakh-compensation-each-from-cm-fund-to-families-of-murdered
ಕೊಲೆ ಪ್ರಕರಣ: ದೀಪಕ್ ರಾವ್, ಮಸೂದ್, ಫಾಝಿಲ್, ಜಲೀಲ್ ಕುಟುಂಬಗಳಿಗೆ ಸಿಎಂ ನಿಧಿಯಿಂದ ತಲಾ 25 ಲಕ್ಷ ಪರಿಹಾರ

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಹತ್ಯೆಗೀಡಾದ ನಾಲ್ವರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಲಾಗಿದೆ. ಸುಳ್ಯದ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್, ಮಂಗಳೂರಿನ ಸುರತ್ಕಲ್​​ನ ಮೊಹಮ್ಮದ್ ಫಾಜಿಲ್, ಅಬ್ದುಲ್ ಜಲೀಲ್ ಮತ್ತು ದೀಪಕ್ ರಾವ್ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ.

ಸಿಎಂ ನಿಧಿಯಿಂದ ತಲಾ 25 ಲಕ್ಷ ಪರಿಹಾರ

ಬೆಳ್ಳಾರೆಯ ಮಸೂದ್ ಎಂಬುವರನ್ನು 2022ರ ಜುಲೈ 19 ರಂದು ಹತ್ಯೆ ಮಾಡಲಾಗಿತ್ತು. ಸುರತ್ಕಲ್​ನ ಮೊಹಮ್ಮದ್ ಫಾಜಿಲ್​ರನ್ನು 2022 ಜುಲೈ 28 ರಂದು ಕೊಲೆ ಮಾಡಲಾಗಿತ್ತು. 2022 ಡಿಸೆಂಬರ್ 24ರಂದು ಸುರತ್ಕಲ್​ನ ಅಬ್ದುಲ್ ಜಲೀಲ್ ಹತ್ಯೆಗೀಡಾಗಿದ್ದರು. ಸುರತ್ಕಲ್​ನ ದೀಪಕ್ ರಾವ್ ಅವರನ್ನು 2018ರ ಜನವರಿ 3ರಂದು ಕೊಲೆ ಮಾಡಲಾಗಿತ್ತು. ಆಗಿನ ವಿಧಾನಸಭೆ ಎಲೆಕ್ಷನ್​​​ಗೂ ಮುನ್ನ ನಡೆದ ಈ ಹತ್ಯೆ ಪ್ರಕರಣ ಕರಾವಳಿಯಲ್ಲಿ ಕೋಮು ಸಂಘರ್ಷಕ್ಕೆ ಕಾರಣವಾಗಿ ಚುನಾವಣಾ ಚರ್ಚಾ ವಿಷಯವಾಗಿ ಮಾರ್ಪಟ್ಟಿತ್ತು.

ಇನ್ನು 2022 ಜುಲೈ 28 ರಂದು ಫಾಜಿಲ್ ಹತ್ಯೆ ನಡೆದಿತ್ತು.‌ ಇದಕ್ಕೂ ಕೆಲದಿನಗಳ ಮುನ್ನ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ನೆಟ್ಟಾರು ಕೊಲೆ ಆಗಿತ್ತು. ಬಳಿಕ ಕೆಲ ದಿನಗಳ ಅಂತರದಲ್ಲಿ ಜಲೀಲ್ ಎಂಬಾತನ ಕೊಲೆ ಮಾಡಲಾಗಿತ್ತು. ಈ ಹತ್ಯೆಗಳಿಂದ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಕದಡಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದರಲ್ಲಿ ಕೆಲವು ಘಟನೆಗಳು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದವು. ಇದರಲ್ಲಿ ಪ್ರವೀಣ್ ನೆಟ್ಟಾರು ಹೊರತುಪಡಿಸಿ ಬೇರೆ ಯಾರಿಗೂ ಸರ್ಕಾರ ಪರಿಹಾರ ವಿತರಣೆ ಮಾಡಿರಲಿಲ್ಲ.

ಇದನ್ನೂ ಓದಿ: ಮಂಗಳೂರು.. ಈ ವರ್ಷ ದ್ವೇಷಕ್ಕಾಗಿ ನಡೆದವಾ ನಾಲ್ಕು ಕೊಲೆ!

ಇತ್ತೀಚಿಗೆ ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮತೀಯ ಪ್ರಕರಣಗಳಲ್ಲಿ ಹತ್ಯೆಯಾದವರ ಕುಟುಂಬಗಳಿಗೆ ಪರಿಹಾರ ನೀಡಲು ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಿದ್ದರು. ಈ ಪ್ರಸ್ತಾವನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ. ಪರಿಹಾರ ಮಂಜೂರು ಮಾಡಲಾಗಿದೆ. ಈ ಬಗ್ಗೆ ಮಂಗಳೂರು ತಾಲೂಕು ಮತ್ತು ಸುಳ್ಯ ತಾಲೂಕು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಪತ್ರ ಬರೆದು ಜಿಲ್ಲಾಧಿಕಾರಿ ಕಚೇರಿಯಿಂದ ನೀಡಲಾದ ಚೆಕ್ಕುಗಳನ್ನು ಹಾಗೂ ಕಡತವನ್ನು ಪಡೆದುಕೊಂಡು ಮೃತ ವ್ಯಕ್ತಿಗಳ ವಾರಸುದಾರರೊಂದಿಗೆ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಜೂನ್ 19 ರಂದು ಬೆಳಗ್ಗೆ 8 ಗಂಟೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಮಸೂದ್ ಅವರ ತಾಯಿ ಸಾರಮ್ಮ, ಮೊಹಮ್ಮದ್ ಫಾಜಿಲ್ ತಾಯಿ ಜೈನಾಬ, ಅಬ್ದುಲ್ ಜಲೀಲ್ ಪತ್ನಿ ದಿಲ್ಶಾದ್, ದೀಪಕ್ ರಾವ್ ತಾಯಿ ಪ್ರೇಮಾ ರಾಮಚಂದ್ರ ಅವರಿಗೆ ಪರಿಹಾರ ಹಣ ಮಂಜೂರು ಮಾಡಲಾಗಿದೆ.

ಇದನ್ನೂ ಓದಿ: ದ.ಕ ಜಿಲ್ಲಾ ಪೊಲೀಸರಿಂದ ವಿನೂತನ ಪ್ರಯೋಗ; ಅಪರಾಧಿಗಳ ಪತ್ತೆಗೆ ಪೋರ್ಟೇಬಲ್ ಸ್ಕ್ಯಾನರ್ ಬಳಕೆ

Last Updated : Jun 17, 2023, 10:55 AM IST

ABOUT THE AUTHOR

...view details