ಚಿತ್ರದುರ್ಗ: ಮೊಳಕಾಲ್ಮೂರು, ಹಿರಿಯೂರು ಸೇರಿದಂತೆ ಚಳ್ಳಕೆರೆ ಭಾಗಗಳಿಗೆ ವಾಣಿ ವಿಲಾಸ ಸಾಗರದಿಂದ ನೀರು ಹರಿಸಿ ಎಂದು ಹೊಸದುರ್ಗ ಶಾಸಕ ಗೂಳಿಹಟ್ಟಿ ಡಿ. ಶೇಖರ್ ಕೂಡ ನೀರಿಗಾಗಿ ಧ್ವನಿ ಎತ್ತಿದ್ದಾರೆ.
ವಿವಿ ಸಾಗರ ನೀರಿನಲ್ಲಿ ನಮ್ಮ ತಾಲೂಕಿನ ಜನರ ಪಾಲೂ ಇದೆ: ಗೂಳಿಹಟ್ಟಿ ಶೇಖರ್ - Hosadhurga Taluk
ಚಿತ್ರದುರ್ಗದ ವಿವಿ ಸಾಗರ ನೀರು ಹರಿಸುವಿಕೆ ಕುರಿತು ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಮೂರು ತಾಲೂಕಿನ ರಾಜಕೀಯ ನಾಯಕರು ಕುಡಿಯುವ ನೀರಿಗಾಗಿ ಪೈಪೋಟಿಗೆ ಬಿದ್ದಿದ್ದಾರೆ. ಈ ನಡುವೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ವಿವಿ ಸಾಗರ ನೀರಿನಲ್ಲಿ ನಮ್ಮ ತಾಲೂಕಿನ ಜರ ಪಾಲೂ ಇದೆ. ನಮಗೂ ನೀರು ಹರಿಸಿ ಅಂತ ಆಗ್ರಹಿಸಿದ್ದಾರೆ.

ಇದಕ್ಕೂ ಮೊದಲು ಆಯಾ ಭಾಗದ ಶಾಸಕರು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿಯವರಿಗೆ ಬೇಡಿಕೆ ಇಟ್ಟಿದ್ದರು. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ ಬಳಿ ಮಾತನಾಡಿದ ಗೂಳಿಹಟ್ಟಿ ಶೇಖರ್, ವಿವಿ ಸಾಗರದಲ್ಲಿರುವ ನೀರಿನ ಮೇಲೆ ನಮಗೂ ಹಕ್ಕಿದೆ. ಅದ್ರಿಂದ ಬೇರೆ ಬೇರೆ ತಾಲೂಕುಗಳಿಗೆ ಇಂತಿಷ್ಟು ನೀರು ಹರಿಸಿದ್ದೀರಿ. ಇದೀಗ ನಮ್ಮ ತಾಲೂಕಿಗೂ ಸ್ವಲ್ಪ ನೀರು ಹರಿಸಿ ಎಂದರು.
ಈಗಾಗಲೇ ಅಲ್ಪಸ್ವಲ್ಪ ಎಂಬಂತೆ ಬಿಡುಗಡೆಗೊಳಿಸಿರುವ ನೀರು ಎಲ್ಲಿಗೂ ಸಾಕಾಗುತ್ತಿಲ್ಲ. ಇತಂಹ ಪರಿಸ್ಥಿತಿಯಲ್ಲಿ ಬೇರೆ ಬೇರೆ ತಾಲೂಕಿನವರು ನೀರಿಗಾಗಿ ಕಿತ್ತಾಡುತ್ತಿದ್ದು, ಡ್ಯಾಂನಲ್ಲಿ ನಮ್ಮ ಭಾಗದ ಜನರ ಪಾಲು ಇದೆ. ನಮಗೂ ಸ್ವಲ್ಪ ನೀರು ಕೊಡಿ ಎಂದು ಶಾಸಕ ಗೂಳಿಹಟ್ಟಿ ಡಿ. ಶೇಖರ್ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬಳಿ ಬೇಡಿಕೆ ಇಟ್ಟಿದ್ದಾರೆ.