ಚಿತ್ರದುರ್ಗ: 2ಎ ಗೆ ಅರ್ಹವಲ್ಲದ ಸಮಾಜಗಳು ಬಂದು ನಮ್ಮ ಅನ್ನವನ್ನು ಕಿತ್ತುಕೊಂಡಾಗ ನಾವೆಲ್ಲಿಗೆ ಹೋಗಬೇಕು. ಕಾಶಪ್ಪನವರ ಬಗ್ಗೆ ನನಗೆ ಅಪಾರವಾದ ಗೌರವವಿದೆ, ನಮ್ಮ ಹಕ್ಕನ್ನ ನಾವು, ಅವರ ಹಕ್ಕನ್ನು ಅವರು ಕೇಳಬಹುದು. ಆದ್ರೆ, ಯಾರ್ ಏನೇ ಅಂದ್ರೂ ನನಗೆ ನನ್ನ ಪದವಿಗೆ ಧಕ್ಕೆ ಬರುವುದಿಲ್ಲ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.
ನಮ್ಮ ಅನ್ನವನ್ನು ಕಿತ್ತುಕೊಂಡರೆ ನಾವೆಲ್ಲಿಗೆ ಹೋಗ್ಬೇಕು: ಕಾಶಪ್ಪನವರಿಗೆ ಮುಖ್ಯಮಂತ್ರಿ ಚಂದ್ರು ತಿರುಗೇಟು - ಪಂಚಮಸಾಲಿ ಸಮಾಜದ ಕುರಿತು ಮುಖ್ಯಮಂತ್ರಿ ಚಂದ್ರು ಹೇಳಿಕೆ
ಮಾಜಿ ಶಾಸಕ ಕಾಶಪ್ಪನವರ ದೊಡ್ಡ ವ್ಯಕ್ತಿ, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ಏಕ ವಚನದಲ್ಲಿ ಮಾತನಾಡಿದ್ದನ್ನ ನಾನು ಆಶೀರ್ವಾದ ಎಂದು ತಿಳಿದುಕೊಳ್ಳುತ್ತೇನೆ. ಆದ್ರೆ ನಮ್ಮ ಅನ್ನವನ್ನು ಬೇರೆಯವರು ಕಸಿದುಕೊಳ್ಳಲು ಬಂದಾಗ ನಾವು ಸುಮ್ಮನಿರಬೇಕಾ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಪ್ರಶ್ನಿಸಿದರು.
ಕಾಶಪ್ಪನವರ ಬಗ್ಗೆಯಾಗಲಿ, ಪಂಚಮಸಾಲಿ ಸಮಾಜದ ಬಗ್ಗೆಯಾಗಲಿ ನನಗೆ ಅಪಾರವಾದ ಗೌರವವಿದೆ. ಅವರು ಏಕ ವಚನದಲ್ಲಿ ಮಾತನಾಡಿದ್ದಾರೆ ಎಂದರೆ ನಾನು ಅವರಂತೆ ಮಾತನಾಡಲು ತಯಾರಿಲ್ಲ. ಅವರು ದೊಡ್ಡವರು, ಅವರ ಮಾತುಗಳನ್ನು ನಾನು ಆಶೀರ್ವಾದ ಎಂದು ತಿಳಿಯುತ್ತೇನೆ. ಆದ್ರೆ ಅವರು ತಳ ಸಮುದಾಯಗಳಿಗೆ ಅಗಿರುವ ಅನ್ಯಾಯವನ್ನು ಗಮನಿಸಬೇಕು ಎಂದು ಮಾಜಿ ಶಾಸಕ ಕಾಶಪ್ಪನವರಿಗೆ ನಯವಾಗಿಯೇ ಚಂದ್ರು ತಿರುಗೇಟು ನೀಡಿದರು.
ಪಂಚಮಸಾಲಿ ಸಮಾಜ 2ಎ ಗೆ ಒಳಪಡದ ಸಮಾಜ, ಅದು ದೊಡ್ಡ ಸಮುದಾಯ. ಅದು ಮೀಸಲಾತಿಗೆ ಒಳಪಟ್ಟರೆ ನಮಗೆ ಸಮಸ್ಯೆಯಾಗುತ್ತದೆ. ನಮ್ಮ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ. ಅದೊಂದು ಪ್ರಬಲ ಸಮಾಜ, ಅಲ್ಲಿ ಹತ್ತಾರು ಎಂಪಿಗಳು, ಶಾಸಕರು ಇದ್ದಾರೆ. ಅವರಿಗೆ ಪ್ರಶ್ನಿಸುವ ಸಾಮರ್ಥ್ಯವಿದೆ. ಆದರೆ ತಳ ಸಮುದಾಯಗಳಿಗೆ ಆ ಶಕ್ತಿ ಇಲ್ಲ. ಆದ್ದರಿಂದ ಸರ್ಕಾರ ಈ ಕುರಿತು ಅಧ್ಯಯನ ಮಾಡಬೇಕು ಎಂದರು.