ಕರ್ನಾಟಕ

karnataka

By

Published : Mar 12, 2021, 2:10 PM IST

ETV Bharat / state

ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಅಕ್ರಮ ಮರಳು ಗಣಿಗಾರಿಕೆ.. ಜನತೆ ಆರೋಪ

ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದಲ್ಲಿ ಹಾಡುಹಗಲೇ ಹರಿಯುವ ನೀರಿನಲ್ಲಿ ಜೆಸಿಬಿ ಮೂಲಕ ಅಪಾರ ಪ್ರಮಾಣದ ಮರಳನ್ನು ಉಳ್ಳವರು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ.

Illegal sand mining
ಅಕ್ರಮ ಮರುಳುಗಾರಿಕೆ

ಚಿತ್ರದುರ್ಗ:ರಾಜ್ಯ ಸರ್ಕಾರ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿದೆ. ಆದ್ರೂ ಕೆಲವು ಭಾಗಗಳಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಮರಳು ದಂಧೆ ಎಗ್ಗಿಲ್ಲದೆ ಸಾಗುತ್ತಿದೆ. ಈ ಮಧ್ಯೆ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಅಪಾರ ಪ್ರಮಾಣದ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಹೌದು, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಹಾಗೂ ಚಳ್ಳಕೆರೆ ಸೇರಿದಂತೆ ಹಲವು ಭಾಗಗಳಲ್ಲಿ ಹಾಡುಹಗಲೇ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ಸಾಗುತ್ತಿದೆ ಎನ್ನಲಾಗಿದೆ. ಕಡಿವಾಣ ಹಾಕಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಕ್ರಮ ಮರುಳುಗಾರಿಕೆ

ಹೊಸದುರ್ಗ ತಾಲೂಕಿನ ಕೆಲ್ಲೋಡು ಗ್ರಾಮದಲ್ಲಿ ಹಾಡುಹಗಲೇ ಹರಿಯುವ ನೀರಿನಲ್ಲಿ ಜೆಸಿಬಿ ಮೂಲಕ ಅಪಾರ ಪ್ರಮಾಣದ ಮರಳನ್ನು ಉಳ್ಳವರು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ. ಇನ್ನು ಮರಳು ದಂಧೆಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಇತ್ತ ಹರಿವ ನೀರಿನಲ್ಲಿ ಮರಳು ಎತ್ತಬಾರದು ಎಂಬ ಸರ್ಕಾರದ ನಿಯಮವಿದ್ದರೂ ಕೆಲ್ಲೋಡು ಗ್ರಾಮದಲ್ಲಿ ಮಾತ್ರ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಮೊಳಕಾಲ್ಮೂರು, ಚಳ್ಳಕೆರೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ರೈತರು ಚಕ್ಕಡಿ ಬಂಡಿ ಮೂಲಕ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಹಲವು ದಿನಗಳಿಂದ ಕೇಳಿಬರುತ್ತಿದೆ.

ಮರಳು ದಂಧೆ ಸ್ಥಳಕ್ಕೆ ಶಾಸಕ ಭೇಟಿ ನೀಡಿ ಪರಿಶೀಲನೆ

ಮರಳು ದಂಧೆಗೆ ಕಡಿವಾಣ ಹಾಕುವಂತೆ ಸಾರ್ವಜನಿಕರ ಒತ್ತಾಯದ ಮೇರೆಗೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಗೋರ್ಲತ್ತು, ಕರಮರಹಳ್ಳಿ ಹಾಗೂ ನಾರಾಯಣಪುರ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಮರಳು ದಂಧೆಗೆ ಕಡಿವಾಣ ಹಾಕುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಅಕ್ರಮ ಮರಳು ಸಾಗಾಣಿಕೆಗೆ ಕಡಿವಾಣ ಹಾಕಬೇಕಾದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವುದು ಪರಿಸರ ಪ್ರೇಮಿಗಳ ಕಳವಳಕ್ಕೆ ಕಾರಣವಾಗಿದೆ.

ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಗ್ರಾಮದಲ್ಲಿ ಹರಿವ ನೀರಿನಲ್ಲಿ ಜೆಸಿಬಿ ಮೂಲಕ ಮರಳು ಹೆಕ್ಕುತ್ತಿರುವುದನ್ನು ಗ್ರಾಮಸ್ಥರು ತಡೆದಿರುವ ಘಟನೆ ನಡೆದಿದೆ. ಗ್ರಾಮಸ್ಥರ ಒತ್ತಾಯದ ಮೇರೆಗೆ ತಾತ್ಕಾಲಿಕವಾಗಿ ಮಾತ್ರ ಮರಳುಗಾರಿಕೆಯನ್ನು ಸ್ಥಗಿತಗೊಳಿಸಿದ ಅಧಿಕಾರಿಗಳು, ಈ ಅಕ್ರಮದಲ್ಲಿ ಸ್ವತಃ ಶಾಮೀಲಾಗಿದ್ದಾರೆ ಎಂಬ ಶಂಕೆ ಗ್ರಾಮಸ್ಥರಲ್ಲಿ ಮೂಡಿದೆ.

ನೈಸರ್ಗಿಕ ಸಂಪತ್ತು ದೋಚುತ್ತಿರುವುದಕ್ಕೆ ರೈತ ಮುಖಂಡರ ಆಕ್ರೋಶ

ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆಗೆ ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ದಿನದ 24 ಗಂಟೆಗಳ ಕಾಲ ಮರಳು ಸಾಗಾಣಿಕೆ ನಡೆಸಲಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದ್ದು, ಅಕ್ರಮ ಗಣಿಗಾರಿಕೆ ತಡೆಯಲು ಆಗ್ರಹಿಸಿದ್ದಾರೆ.

ಅಕ್ರಮ ಮರಳು ದಂಧೆಗೆ ಜಿಲ್ಲಾಧಿಕಾರಿಗಳ ಮಾತೇನು?

ಅಕ್ರಮ ಮರಳುಗಾರಿಕೆ ಸಂಬಂಧಿತವಾಗಿ ಹಲವು ಕಡೆ ಗ್ರಾಮಸ್ಥರಿಂದ ಆರೋಪ ಕೇಳಿಬಂದಿದೆ. ಮರಳುಗಾರಿಕೆ ನಡೆಸುತ್ತಿರುವ ಸ್ಥಳಕ್ಕೆ ತಾಲೂಕು ಆಡಳಿತ ಅಧಿಕಾರಿಗಳನ್ನು ಕಳಿಸಿ ವರದಿ ತರಿಸಿಕೊಂಡ ಬಳಿಕ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಿ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಮರಳು ದಂಧೆ ನಡೆಯುತ್ತಿದ್ದು, ಜಿಲ್ಲಾಡಳಿತ ಸೂಕ್ತ ಕ್ರಮಕ್ಕೆ ಮುಂದಾಗುವಂತೆ ಜಿಲ್ಲೆಯ ಜನತೆ ಒತ್ತಾಯಿಸುತ್ತಿದ್ದಾರೆ.

ABOUT THE AUTHOR

...view details