ಚಿತ್ರದುರ್ಗ: ಕೊಟ್ಟ ಮಾತಿಗೆ ತಪ್ಪಿದ ಸಿಎಂ ಯಡಿಯೂರಪ್ಪ ಅವರಿಂದ ಸಮಾಜಕ್ಕೆ ಅನ್ಯಾಯವಾಗಿದೆ. ಆರ್ಯ ಈಡಿಗ ಸಮಾಜವನ್ನು ಸರ್ಕಾರ ಕಡೆಗಣಿಸಿದೆ ಎಂದು ಆರ್ಯ ಈಡಿಗ ಸಮಾಜದ ಡಾ. ಪ್ರಣವಾನಂದ ಸ್ವಾಮೀಜಿ ಆಕ್ರೋಶ ಹೊರಹಾಕಿದರು.
ಮಾತಿಗೆ ತಪ್ಪಿದ ಸಿಎಂ ಯಡಿಯೂರಪ್ಪರಿಂದ ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ: ಪ್ರಣವಾನಂದ ಸ್ವಾಮೀಜಿ - ಚಿತ್ರದುರ್ಗ ಲೇಟೆಸ್ಟ್ ನ್ಯೂಸ್
ಮಾಲೀಕಯ್ಯ ಗುತ್ತೇದಾರರಿಗೆ ಸಚಿವ ಸ್ಥಾನ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಇಬ್ಬರು ನಮ್ಮ ಸಮಾಜವನ್ನು ಮರೆತು ಅನ್ಯಾಯ ಮಾಡಿದ್ದಾರೆ ಎಂದು ಆರ್ಯ ಈಡಿಗ ಸಮಾಜದ ಡಾ. ಪ್ರಣವಾನಂದ ಸ್ವಾಮೀಜಿ ಆಕ್ರೋಶ ಹೊರಹಾಕಿದರು.

ನಗರದಲ್ಲಿ ಮಾತನಾಡಿದ ಅವರು, ಮಾಲೀಕಯ್ಯ ಗುತ್ತೇದಾರರಿಗೆ ಸಚಿವ ಸ್ಥಾನ ಕೊಡುತ್ತೇನೆ ಎಂದು ಮಾತು ಕೊಟ್ಟಿದ್ದರು. ಆದರೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಇಬ್ಬರು ನಮ್ಮ ಸಮಾಜವನ್ನು ಮರೆತು ಬಿಟ್ಟು ಅನ್ಯಾಯ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈ ಅನ್ಯಾಯವನ್ನು ನಾವು ಸಹಿಸುವುದಿಲ್ಲ. ಇದೇ ತಿಂಗಳ 25 ರೊಳಗೆ ತೀರ್ಮಾನ ತೆಗೆದುಕೊಂಡು ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡಬೇಕು. ರಾಜ್ಯದಲ್ಲಿ 7 ಜನ ಶಾಸಕರಿದ್ದರೂ ನಮ್ಮ ಸಮಾಜಕ್ಕೆ ಯಾವುದೇ ನಿಗಮ ಮಂಡಳಿಯನ್ನು ನೀಡಿಲ್ಲ. ಮಸ್ಕಿ ಚುನಾವಣೆ ಸಮಯದಲ್ಲಿ ಕೊಟ್ಟ ಮಾತಿಗೆ ಬದ್ಧರಾಗಬೇಕು. ಚುನಾವಣೆಯ ನಂತರ ತೀರ್ಮಾನ ತೆಗೆದುಕೊಂಡು ಘೋಷಣೆ ಮಾಡುವುದಾಗಿ ಮಾತು ಕೊಟ್ಟಿದ್ದ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ಈಗ ಮಾತು ತಪ್ಪುತ್ತಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ.