ಕರ್ನಾಟಕ

karnataka

ETV Bharat / state

ಚಿತ್ರದುರ್ಗ: ಕುಡಿದು ತೇಲಾಡಿ ಕರ್ತವ್ಯ ಮರೆತ ಪಿಡಿಒ ಅಮಾನತು

ಮದ್ಯ ಸೇವಿಸಿ ಬಸ್​ ನಿಲ್ದಾಣದಲ್ಲಿ ಮಲಗಿ ಬೇಜವಾಬ್ದಾರಿ ಪ್ರದರ್ಶಿಸಿದ್ದ ಗ್ರಾಮಾಭಿವೃದ್ದಿ ಅಧಿಕಾರಿಯನ್ನು ಅಮಾನತುಗೊಳಿಸಿ ಚಿತ್ರದುರ್ಗ ಜಿಲ್ಲಾ ಪಂಚಾಯತ್​​ ಸಿಇಒ ಆದೇಶ ಹೊರಡಿಸಿದ್ದಾರೆ.

By

Published : Jan 18, 2023, 9:29 AM IST

Suspension of Gram Panchayat PDO
ಗ್ರಾಮ ಪಂಚಾಯಿತಿ ಪಿಡಿಒ ಅಮಾನತು

ಚಳ್ಳಕೆರೆ (ಚಿತ್ರದುರ್ಗ) : ಮದ್ಯಪಾನ ಮಾಡಿ ಪದೇ ಪದೇ ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತ್‌ ಪಿಡಿಒ ಎಸ್.ಹನುಮಂತಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಜನವರಿ 7 ರ ಬೆಳಗ್ಗೆ 11:15ರ ಸುಮಾರಿಗೆ ಅಧಿಕಾರಿಯು ಮದ್ಯ ಸೇವಿಸಿ ಚಳ್ಳಕೆರೆ ನಗರದ ಬಸ್ ನಿಲ್ದಾಣದಲ್ಲಿ ಮಲಗಿದ್ದರು. ಈ ಹಿಂದೆ ಘನತ್ಯಾಜ್ಯ ನಿರ್ವಹಣೆ, ಕಸ ಸಂಗ್ರಹಣೆಯ ವಾಹನ ಬಳಕೆ ಮಾಡದೇ, ಜನ ಸಂಜೀವಿನಿ ಕ್ರಿಯಾ ಯೋಜನೆ ತಯಾರಿಸದೇ, ಕರ್ತವ್ಯಕ್ಕೆ ಗೈರು ಸೇರಿದಂತೆ ವಿವಿಧ ಕಾರಣಕ್ಕೆ ಇವರಿಗೆ ಸೆಪ್ಟಂಬರ್‌ 17, 2022ರಂದು ತಾಲೂಕು ಪಂಚಾಯತ್​ ಕಾರ್ಯಾಲಯದಿಂದ ನೋಟಿಸ್​ ಜಾರಿ ಮಾಡಲಾಗಿತ್ತು. ಈ ನೋಟಿಸ್​ಗೂ ಇವರು ಯಾವುದೇ ಉತ್ತರ ನೀಡಿರಲಿಲ್ಲ.

ಅಂದಿನ ಜಿಲ್ಲಾ ಪಂಚಾಯತ್​ನ ಸಿಇಒ ಡಾ.ಕೆ.ನಂದಿನಿದೇವಿ ಅವರು (23-9-2022) ಎಸ್​.ಹನುಮಂತ್​ ಕುಮಾರ್​ ಅವರನ್ನು ಅಮಾನತು ಮಾಡಿದ್ದರು. 1 ತಿಂಗಳ ಕಾಲವಧಿಯ ನಂತರ ಗ್ರಾಮ ಪಂಚಾಯತಿಗೆ ಪುನರ್ ನೇಮಕ ಮಾಡಲಾಗಿತ್ತು. ಆದರೆ ಇದೀಗ ಮದ್ಯ ಸೇವನೆ ಮಾಡಿ ಮತ್ತೆ ಸಿಕ್ಕಿಬಿದ್ದಿದ್ದಾರೆ. ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿಯ ಹಾಜರಾತಿ ಪರಿಶೀಲಿಸಿದಾಗ ಈ ಅಧಿಕಾರಿ ದಿನಾಂಕ 06.01.2023 ರಿಂದ ಯಾವುದೇ ಪೂರ್ವಾನುಮತಿ ಪಡೆಯದೇ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುವುದು ಕಂಡುಬಂದಿದೆ.

ಕಾರ್ಯಾವಧಿಯಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರ ಸೇವೆಗಳಿಗೆ ಸ್ಪಂದಿಸದೇ ಇರುವುದು, ಕಚೇರಿಗೂ ಹಾಜರಾಗದೇ ನಾಗರಿಕರಿಗೆ ಇ-ಸ್ವತ್ತು ಸೌಲಭ್ಯ ನೀಡದೇ ಇರುವುದು, ಗ್ರಾಮದಲ್ಲಿನ ಕುಡಿಯುವ ನೀರಿನ ಸೌಕರ್ಯ ನೀಡದೇ ಸಾರ್ವಜನಿಕರಿಗೆ ತೊಂದರೆ ನೀಡಿದ ಗುರುತರ ಆರೋಪ ಪಿಡಿಒ ಎಸ್.ಹನುಮಂತಕುಮಾರ್ ಮೇಲಿದೆ. ಹೀಗಾಗಿ ಇದೀಗ ಮತ್ತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ವೈ.ಇ.ನವೀನ್, ಪ್ರಶಾಂತ್ ಮತ್ತು ಬೇಡರೆಡ್ಡಿಹಳ್ಳಿ ಗ್ರಾಮಸ್ಥರು, ತಾಲ್ಲೂಕು ಪಂಚಾಯತಿ ಕಚೇರಿಗೆ ಈ ಕುರಿತು ದೂರು ಸಲ್ಲಿಸಿದ್ದರು. ಇದರ ಮೇರೆಗೆ ಚಳ್ಳಕೆರೆ ತಾಲ್ಲೂಕು ಪಂಚಾಯತ್​ ಸಹಾಯಕ ನಿರ್ದೇಶಕರು, ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರ ಸಮಕ್ಷಮದಲ್ಲಿ ನೌಕರ ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಬಗ್ಗೆ ಮತ್ತು ಪದೇ ಪದೇ ಗೈರುಹಾಜರಾಗುತ್ತಿರುವ ಬಗ್ಗೆ ಸ್ಥಳ ಮಹಜರು ನಡೆಸಿ ವರದಿ ಸಲ್ಲಿಸಿದ್ದರು. ಈ ಮೂಲಕ ಎಸ್.ಹನುಮಂತಕುಮಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಉಲ್ಲೇಖಿತ ಪತ್ರದಲ್ಲಿ ಚಳ್ಳಕೆರೆ ತಾಲ್ಲೂಕು ಪಂಚಾಯತ್ ಕಾರ್ಯಾಲಯಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಪ್ರಸ್ತಾವನೆ ಸಲ್ಲಿಸಿದ್ದರು.

ಸದರಿ ಅಮಾನತು ಅವಧಿಯಲ್ಲಿ ಪ್ರಾಧಿಕಾರದ ಅನುಮತಿ ಪಡೆಯದೇ ಅಧಿಕಾರಿ ಕೇಂದ್ರಸ್ಥಾನ ಬಿಡುವಂತಿಲ್ಲ. ಅನ್ಯ ಉದ್ಯೋಗದಲ್ಲಿಯೂ ತೊಡಗುವಂತಿಲ್ಲ. ನಿಯಮಾನುಸಾರ ಜೀವನಾಧಾರ ಭತ್ಯೆಗೆ ಅರ್ಹರಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿವಾಕರ್ ತಿಳಿಸಿದ್ದಾರೆ.

ಇದನ್ನೂ ಓದಿ :ಕುಡಿದು ತೇಲಾಡಿದ ಪಿಡಿಒ, ಕಚೇರಿಗೆ ಇಚ್ಚೆ ಬಂದಂತೆ ರಜೆ: ಗ್ರಾಮಸ್ಥರಿಂದಲೇ ತಾಲೂಕು ಪಂಚಾಯತ್​ಗೆ ದೂರು

ABOUT THE AUTHOR

...view details