ಕರ್ನಾಟಕ

karnataka

By

Published : Feb 16, 2021, 5:23 PM IST

Updated : Feb 16, 2021, 10:31 PM IST

ETV Bharat / state

ಬೆವರು ಸುರಿಸಿ ಬೆಳೆದಿದ್ದ ಅಡಿಕೆ ಗಿಡಗಳ ನೆಲಸಮ: ಚಿತ್ರದುರ್ಗದಲ್ಲಿ ಕಿಡಿಗೇಡಿಗಳ ವಿಕೃತಿ..!

ಇಬ್ಬರು ರೈತರು ಹಗಲು - ರಾತ್ರಿ ಎನ್ನದೇ ಬೆವರು ಸುರಿಸಿ ಬೆಳೆಸಿದ್ದ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದು ನೆಲಕ್ಕುರುಳಿಸಿರುವ ಘಟನೆ ನಡೆದಿದೆ. ಹಳೆ ವೈಷಮ್ಯ ಹಿನ್ನೆಲೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಕೆಲ ವರ್ಷದಲ್ಲಿ ಫಸಲು ನೀಡುತ್ತಿದ್ದ ಅಡಿಕೆ ಬೆಳೆ ಕಳೆದುಕೊಂಡ ರೈತರು ಕಣ್ಣೀರಿಡುವಂತಾಗಿದೆ.

arecanut-trees-cut-down-by-unknown-peoples-in-chitradurga
ಬೆವರು ಸುರಿಸಿ ಬೆಳೆದಿದ್ದ ಅಡಿಕೆ ಗಿಡಗಳ ನೆಲಸಮಗೊಳಿಸಿದ ಕಿಡಿಗೇಡಿಗಳು

ಚಿತ್ರದುರ್ಗ:ಬಿಸಿಲು ಲೆಕ್ಕಿಸದೇ ಬೆವರು ಸುರಿಸಿ ಕಾಪಾಡಿಕೊಂಡು ಬಂದಿದ್ದ ನೂರಾರು ಅಡಿಕೆ ಸಸಿಗಳನ್ನು ಕಿಡಿಗೇಡಿಗಳು ಕಡಿದು ನೆಲಸಮಮಾಡಿ ವಿಕೃತಿ ಮೆರೆದಿದ್ದಾರೆ. ಎರಡ್ಮೂರು ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ ಅಡಿಕೆ ಗಿಡಗಳು ನೆಲಸಮವಾಗಿರುವುದು ಕಂಡು ರೈತ ಕಣ್ಣೀರಿಟ್ಟಿದ್ದಾನೆ.

ಬೆವರು ಸುರಿಸಿ ಬೆಳೆದಿದ್ದ ಅಡಿಕೆ ಗಿಡಗಳ ನೆಲಸಮಗೊಳಿಸಿದ ಕಿಡಿಗೇಡಿಗಳು

ಚಿತ್ರದುರ್ಗ ತಾಲೂಕಿನ ಕಳ್ಳಿಹಟ್ಟಿ ಗ್ರಾಮದ ಕುಬೇರಪ್ಪ ಹಾಗೂ ಬಸವರಾಜಪ್ಪ ಎಂಬುವರಿಗೆ ಸೇರಿದ್ದ ಅಡಿಕೆ ಗಿಡಗಳಿಗೆ ಕೊಡಲಿ ಹಾಕಿದ್ದು, ಸುಮಾರು 70ಕ್ಕೂ ಹೆಚ್ಚು ಗಿಡಗಳನ್ನು ಕಡಿದು ಹಾಕಲಾಗಿದೆ.

ಏನಿದು ಘಟನೆ?

ತಡರಾತ್ರಿ ಕಳ್ಳಿಹಟ್ಟಿ ಗ್ರಾಮದ ಎರಡು ಅಡಿಕೆ ತೋಟಗಳಿಗೆ ನುಗ್ಗಿದ ಖದೀಮರು ಕೊಡಲಿ ಮೂಲಕ ಅಡಿಕೆ ಗಿಡಗಳ ಕಡಿದು ಹಾಕಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ತೋಟಕ್ಕೆ ನುಗ್ಗಿ ಅಡಿಕೆ ಮರ ನಾಶಮಾಡಲು ಯಾವುದೋ ಹಳೆ ವೈಷಮ್ಯ ಇರಬಹುದು ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ‌. ಕಳ್ಳಿಹಟ್ಟಿ ಗ್ರಾಮದ ರೈತ ಬಸವರಾಜಪ್ಪ ಎಂಬುವರ ಸುಮಾರು 50ಕ್ಕೂ ಅಧಿಕ ಅಡಿಕೆ ಮರಗಳನ್ನು ಕಿಡಿಗೇಡಿಗಳು ಕತ್ತರಿಸಿದ್ದಾರೆ.

ಇದಲ್ಲದೆ ಕುಬೇರಪ್ಪ ಎಂಬುವರ ಜಮೀನಿಗೆ ನುಗ್ಗಿದ ಖದೀಮರು 30ಕ್ಕೂ ಅಧಿಕ ಅಡಿಕೆ ಮರಗಳನ್ನು ನೆಲಸಮಗೊಳಿಸುವುದಲ್ಲದೇ, ಹಲವು ಮರಗಳನ್ನು ಅರ್ಧ ಕೊಡಲಿ ಏಟು ಹಾಕಿ ಪರಾರಿಯಾಗಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇಬ್ಬರು ರೈತರಿಗೆ ಸೇರಿ ಸುಮಾರು 2 ಲಕ್ಷಕ್ಕೂ ಅಧಿಕ ನಷ್ಟವಾಗಿದೆ ಎಂದು ಹಾನಿಗೊಳಗಾದ ರೈತರು ಕಳವಳ ವ್ಯಕ್ತಪಡಿಸಿದ್ದಾರೆ.

ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಗ್ರಾಮಸ್ಥರ ಒತ್ತಾಯ

ಗ್ರಾಮದಲ್ಲಿ ರೈತರ ಬೆಳೆಗಳನ್ನು ನಾಶ ಮಾಡುತ್ತಿರುವ ಪ್ರಕರಣಗಳು ಪದೇ ಪದೆ ಸಂಭವಿಸುತ್ತಿದ್ದು, ಅಪಾರ ಪ್ರಮಾಣದ ಬೆಳೆಗಳು ನಾಶವಾಗುತ್ತಿವೆ ಎಂದು ಕಳ್ಳಿಹಟ್ಟಿ ರೈತರು ಹೇಳುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಜಿಲ್ಲಾಡಳಿತ ತಕ್ಷಣವೇ ಸೂಕ್ತ ಕ್ರಮವಹಿಸಿ ಕಿಡಿಗೇಡಿಗಳ ಹೆಡೆಮುರಿಕಟ್ಟಿವಂತೆ ಆಗ್ರಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಶ್ವಾನದಳ ಪರಿಶೀಲನೆ

ಘಟನೆ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ, ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮೀಣ ಪೊಲೀಸ್​​ ಠಾಣೆ ಅಧಿಕಾರಿಗಳು ಹಾಗೂ ಶ್ವಾನದಳ ಪರಿಶೀಲನೆ ನಡೆಸಿದ್ದು ಕಿಡಿಗೇಡಿಗಳಿಗಾಗಿ ಬಲೆ ಬೀಸಿದ್ದಾರೆ.

ಒಟ್ಟಿನಲ್ಲಿ ಮೈಸುಡುವ ಬಿಸಿಲಿನಲ್ಲೂ ಟ್ಯಾಂಕರ್ ಮೂಲಕ ನೀರು ಹಾಕಿ ಅಡಿಕೆ ತೋಟ ಉತ್ತಮವಾಗಿ ಬೆಳೆಸೋಣ ಎಂದುಕೊಂಡ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ‌. ತಕ್ಷಣವೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರೈತರ ಬೆಳೆಗಳನ್ನು ನಾಶ ಪಡಿಸುತ್ತಿರುವ ಕಿಡಿಗೇಡಿಗಳ ಬಂಧಿಸಿ ಕ್ರಮಕ್ಕೆ ಮುಂದಾಗಿ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕಿದೆ.

ಇದನ್ನೂ ಓದಿ:ಫೆ.20ರಂದು 227 ಕಡೆ 'ಹಳ್ಳಿ ಕಡೆ ಜಿಲ್ಲಾಧಿಕಾರಿಗಳ ನಡಿಗೆ': ಸಾರ್ವಜನಿಕರೇ ಸಮಸ್ಯೆ ಬಗೆಹರಿಸಿಕೊಳ್ಳಿ..!

Last Updated : Feb 16, 2021, 10:31 PM IST

ABOUT THE AUTHOR

...view details