ಚಿತ್ರದುರ್ಗ: ಸಂಕಷ್ಟದಲ್ಲಿರುವ ಬಡ ಕಾರ್ಮಿಕರಿಗೆ ಏಳಿಗೆಗೆ ಸರ್ಕಾರ ಅದೆಷ್ಟೋ ಯೋಜನೆಗಳನ್ನು ರೂಪಿಸಿದೆ. ಅದೇ ತೆರನಾಗಿ ಕಾರ್ಮಿಕ ಇಲಾಖೆಗೆ ನೋಂದಣಿಯಾದ ಬಡ ಕಟ್ಟಡ ಕಾರ್ಮಿಕರಿಗೆ ನಿವೇಶನ ಕೊಟ್ಟು ಆಸರೆ ನೀಡುತ್ತದೆ. ಅದೇ ನಿವೇಶನದ ಹಣವನ್ನು ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿವೆ.
ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ, ನೋಂದಾಯಿತ ಅರ್ಹ ಬಡ ಕಾರ್ಮಿಕರಿಗೆ ಸೂರು ಕಲ್ಪಿಸಲು, 2018-19ನೇ ಸಾಲಿನಲ್ಲಿ 76 ಕೋಟಿ ರೂ. ಬಿಡುಗಡೆ ಆಗಿತ್ತು. ಬಳಿಕ ನಿವೇಶನ ಹಂಚಿಕೆ ಮಾಡಲು, ಕರ್ನಾಟಕ ವಸತಿ ಇಲಾಖೆಯಿಂದ ಕೊಳಗೇರಿ ಅಭಿವೃದ್ಧಿ ಮಂಡಳಿಗೆ 76 ಕೋಟಿ ರೂ. ನಗದು ಜಮಾ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ.
ಆದ್ರೆ, ಬೆಂಗಳೂರಿನ ಕೊಳಗೇರಿ ಅಭಿವೃದ್ಧಿ ಇಲಾಖೆ ಮಂಡಳಿಯ ಮುಖ್ಯ ಕಚೇರಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ₹76 ಕೋಟಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಏನಿದು ಯೋಜನೆ? :ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಬಡ ಜನರಿಗೆ ಸರ್ಕಾರ ಕಾರ್ಮಿಕ ಗೃಹ ಭಾಗ್ಯ ಯೋಜನೆಡಿ ಮನೆ ನಿರ್ಮಿಸಲು ತಲಾ ಒಂದು ಮನೆಗೆ 2 ಲಕ್ಷಕ್ಕಿಂತಲೂ ಅಧಿಕ ಆರ್ಥಿಕ ಸೌಲಭ್ಯ ಒದಗಿಸುತ್ತೆ. 2018-19ನೇ ಸಾಲಿನಲ್ಲಿ ಸರ್ಕಾರ 5129 ಮನೆಗಳ ಹಂಚಿಕೆಗಾಗಿ 76 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತಂತೆ.
ಕಟ್ಟಡ ಕಾರ್ಮಿಕರ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ಆರೋಪ ಯೋಜನೆಯ ಲಾಭ ಪಡೆಯಲು, ಕಟ್ಟಡ ಕಾರ್ಮಿಕರಿಗೆ ಹಾಗೂ ಇತರ ಕಾರ್ಮಿಕರಿಗೆ ಕೆಲ ಮಾನದಂಡಗಳಿವೆ. ಕನಿಷ್ಟ 15 ವರ್ಷ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡಿರಬೇಕು, ಕನಿಷ್ಟ 5 ವರ್ಷಗಳ ಹಿಂದೆಯೇ ಕಾರ್ಮಿಕ ಇಲಾಖೆಗೆ ನೋಂದಣಿಯಾಗಿ ಗುರುತಿನ ಚೀಟಿ ಪಡೆಯಬೇಕು ಹಾಗೂ 45 ವರ್ಷ ವಯೋಮಿತಿ ಗುರುತಿಸಿದೆ. ಅಂದಾಗ ಮಾತ್ರವೇ ಕಟ್ಟಡ ಕಾರ್ಮಿಕರು ಕಾರ್ಮಿಕ ಗೃಹ ಭಾಗ್ಯ ಯೋಜನೆ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಸದ್ಯದ ಆರೋಪವೇನು?:ರಾಜ್ಯಾದ್ಯಂತ ನೋಂದಾಯಿತ ಬಡ ಕಟ್ಟಡ ಕಾರ್ಮಿಕರಿಗೆ 5129 ವಸತಿ ಹಂಚಿಕೆಗೆ, ಸರ್ಕಾರ 76 ಕೋಟಿ ರೂ.ಬಿಡುಗಡೆ ಮಾಡಲಾಗಿತ್ತು. ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು 2019-20 ಸಾಲಿನ ಕಾರ್ಮಿಕ ಇಲಾಖೆಗೆ ನೋಂದಾಯಿತ ಜನರ ಗುರುತಿನ ಚೀಟಿ ಪಡೆದು ಯೋಜನೆಯ ಹಣ ನುಂಗಿ ಹಾಕಿದ್ದಾರೆ ಎಂಬ ಆರೋಪ ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರದ್ದಾಗಿದೆ.
ಗುರುತಿನ ಚೀಟಿ ನೀಡಿದ ಜನರಿಗೂ ಮಾಹಿತಿ ನೀಡದೆ ಹಣ ಡ್ರಾ ಮಾಡಿಕೊಂಡಿದ್ದಾರೆ ಎಂದು ಕಾರ್ಮಿಕ ಸಂಘಟನೆ ಮುಖಂಡರು ದೂರುತ್ತಿದ್ದಾರೆ. ಕೊಳಗೇರಿ ಅಭಿವೃದ್ಧಿ ಮಂಡಳಿ ಇಲಾಖೆ ಅಧಿಕಾರಿಗಳು ಈಗಾಗಲೇ 5129 ಮನೆಗಳನ್ನ ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾರಂತೆ.
ಹೀಗೆ ₹76 ಕೋಟಿ ಹಣವನ್ನ ಅಧಿಕಾರಿಗಳು ವ್ಯವಸ್ಥಿತವಾಗಿ ಭ್ರಷ್ಟಾಚಾರ ನಡೆಸಿದ್ದಾರೆಂ ಎಂಬ ಬಲವಾದ ಆರೋಪಗಳು ಕೇಳಿ ಬರುತ್ತಿವೆ. ಇಲಾಖೆಯ ಎಲ್ಲ ನಿಯಮಗಳನ್ನ ಗಾಳಿಗೆ ತೂರಿದೆ. ನೊಂದು ಫಲಾನುಭವಿಗಳ ಹೆಸರಿನಲ್ಲಿ 2019-20ನೇ ಸಾಲಿನ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪವನ್ನ ಕಟ್ಟಡ ಕಾರ್ಮಿಕ ಸಂಘಟನೆ ಮಖಂಡರು ಮಾಡುತ್ತಿದ್ದಾರೆ.
ಓದಿ : ಈಗೀಗ ನಮ್ಮ ಬಿಜೆಪಿಯಲ್ಲಿರುವ ಕೆಲವರಿಗೆ ಹುಚ್ಚು ಹಿಡಿದಿದೆ.. ನಳೀನ್ ಕುಮಾರ್ ಕಟೀಲ್
ಭ್ರಷ್ಟಾಚಾರ ನಡೆದಿದ್ದು ಗೊತ್ತಾಗಿದ್ದು ಹೇಗೆ? :ಜಿಲ್ಲೆಯಲ್ಲಿ ವಸತಿ ನೀಡುವಂತೆ ಅರ್ಹ ಫಲಾನುಭವಿಗಳು ಕಳೆದ ಹಲವು ತಿಂಗಳಿಂದ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರಂತೆ. ಹೀಗೆ ಅರ್ಜಿ ಸಲ್ಲಿಸಿದ ಯಾವೊಬ್ಬ ಫಲಾನುಭವಿಗಳಿಗೆ ನಿವೇಶನ ಮಂಜೂರು ಆಗದಿರೋದು ಕಟ್ಟಡ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘಟನೆ ಮುಖಂಡರು, ಬೆಂಗಳೂರಿನ ಕೊಳಗೇರಿ ಅಭಿವೃದ್ಧಿ ಮಂಡಳಿ ಇಲಾಖೆಯಿಂದ ಆರ್ಟಿಐ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆ.
ಬಳಿಕ 76 ಕೋಟಿ ರೂಪಾಯಿಯನ್ನ 2019 ಅಕ್ಟೋಬರ್ 16ರಂದು ಕೋಳಗೇರಿ ಅಭಿವೃದ್ಧಿ ಮಂಡಳಿ ಇಲಾಖೆಯ ಅಧಿಕಾರಿಗಳು ಪಡೆದಿರೋದು ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ. ಅಧಿಕಾರಿಗಳು ಅವ್ಯವಹಾರ ನಡೆಸಿ ರಾಜ್ಯದ ಜನತೆ ಕಣ್ಣಿಗೆ ಮಣ್ಣೆರಚಿ, ನಕಲಿ ದಾಖಲೆ ಸೃಷ್ಟಿಸಿದ್ದಾರೆಂದು ಕಾರ್ಮಿಕ ಸಂಘಟನೆ ಮುಖಂಡರು ಆರೋಪಿಸಿದ್ದಾರೆ.
ಆರೋಪಕ್ಕೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹೇಳೋದೇನು?:ಕಾರ್ಮಿಕ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಕುರಿತು ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಎಲ್ಲಾ ನಿವೇಶನಗಳನ್ನ ಕೊಳಗೇರಿ ಅಭಿವೃದ್ದಿ ಮಂಡಳಿ ಹಂಚಿಕೆ ಮಾಡಿದೆ. ಮನೆಗಳ ಹಂಚಿಕೆಯಲ್ಲಿ ಭ್ರಷ್ಟಚಾರ ನಡೆದಿರುವ ಬಗ್ಗೆ ಮಾಹಿತಿಯಿಲ್ಲ.
ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘಟನೆ ಮುಖಂಡರು ಮಂಡಳಿಯಿಂದ ಆರ್ಟಿಐ ಮೂಲಕ ಮಾಹಿತಿ ಪಡೆದಿದ್ದಾರೆ. ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಮೇಲಾಧಿಕಾರಿಗಳು ತನಿಖೆ ನಡೆಸಿ ಜಿಲ್ಲಾ ಮಟ್ಟದ ವರದಿ ಸಲ್ಲಿಸುವಂತೆ ಹೇಳಿದ್ರೆ, ಪರಿಶೀಲಿಸಿ ಮಾಹಿತಿ ನೀಡುತ್ತೇವೆ ಎನ್ನುತ್ತಾರೆ. ಜಿಲ್ಲೆಯಲ್ಲಿ ಇವರಿಗೂ ಒಟ್ಟು 63 ಸಾವಿರ ಕಾರ್ಮಿಕ ನೋಂದಾಯಿತರಾಗಿದ್ದಾರೆ.
2020ನೇ ಸಾಲಿನ ಏಪ್ರಿಲ್ ತಿಂಗಳಿಂದ ಈವರೆಗೂ 26 ಸಾವಿರ ಕಾರ್ಮಿಕರು ನೋಂದಣಿಯಾಗಿ ಗುರುತಿನ ಚೀಟಿ ಪಡೆದುಕೊಂಡಿದ್ದಾರೆ. ಈ ಪೈಕಿ 5 ಜನ ಕಾರ್ಮಿಕರು ವಸತಿ ಸೌಕರ್ಯ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಡಿಎಂ ವಿನುತಾ ಮಾಹಿತಿ ನೀಡಿದರು.