ಕರ್ನಾಟಕ

karnataka

By

Published : Oct 22, 2020, 4:09 PM IST

ETV Bharat / state

ಚಿಕ್ಕಮಗಳೂರು ಜಿ.ಪಂ ಅಧ್ಯಕ್ಷೆ ಕಿರಿಕ್ ಆರೋಪ: ಬಿಜೆಪಿ ಕಾರ್ಯಕರ್ತರ ನಡುವೆ ಒಳಜಗಳ

ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಚುನಾವಣೆ ಬಳಿಕ ಅಧ್ಯಕ್ಷರ ಸ್ಥಾನದಲ್ಲಿ ಒಳಜಗಳ ಉಂಟಾಗಿದ್ದು, ಜಾತಿ ರಾಜಕಾರಣ ಕಾಣುತ್ತಿದೆ ಎಂದು ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಆರೋಪಿಸಿದ್ದಾರೆ.

ಅಧ್ಯಕ್ಷೆ ಸುಜಾತ ಕೃಷ್ಣಪ್ಪ
ಅಧ್ಯಕ್ಷೆ ಸುಜಾತ ಕೃಷ್ಣಪ್ಪ

ಚಿಕ್ಕಮಗಳೂರು:ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಸ್ಥಾನ ಸಖತ್ ಸ್ಟ್ರಾಂಗ್ ಅನಿಸುತ್ತದೆ. ಏಕೆಂದರೆ ಅಧಿಕಾರದಲ್ಲಿ ಕುಳಿತ ಮೇಲೆ ನಾನು ರಾಜೀನಾಮೆ ಕೊಡಲ್ಲ ಅನ್ನೋದು ಎಲ್ಲರ ಡೈಲಾಗ್​ ಆಗಿದೆ. ಅಧ್ಯಕ್ಷರಾಗಬೇಕಾದ್ರೆ ನಾನು ಪಕ್ಷದ ಶಿಸ್ತಿನ ಸಿಪಾಯಿ ಅನ್ನುವವರು, ಅಧ್ಯಕ್ಷರಾಗಿ ಅಧಿಕಾರ ನೋಡಿದ ಮೇಲೆ ಏನೋ ಅವರ ವರಸೆಯೇ ಫುಲ್ ಡಿಫರೆಂಟ್. ಅಂದು ಚೈತ್ರ ಮಾಲತೇಶ್ ಮಾಡಿದ್ದು ಇದೇ ರೀತಿ. ಇಂದು ಸುಜಾತ ಕೃಷ್ಣಪ್ಪ ಮಾಡುತ್ತಿರೋದು ಅದೇ.

2016ರ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಚುನಾವಣೆ ಬಳಿಕ ಅಧ್ಯಕ್ಷರ ಸ್ಥಾನ ಕಾಫಿನಾಡಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. 24ನೇ ವಯಸ್ಸಿಗೆ ಚೈತ್ರ ಮಾಲತೇಶ್‍ಗೆ ಅಧ್ಯಕ್ಷರಾಗಿದ್ದರು. ಮೊದಲು ಅಧ್ಯಕ್ಷರಾಗುವವರು 20 ತಿಂಗಳು, ನಂತರ ಆಗುವವರು 40 ತಿಂಗಳು ಎಂದು ಒಪ್ಪಂದ ಮಾಡಿಕೊಂಡಿದ್ದರು. ಆದರೇ ಅಧ್ಯಕ್ಷರಾಗುವಾಗ ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಹೇಳಿದ ಕೂಡಲೇ ರಿಸೈನ್ ಮಾಡ್ತೀನಿ ಅಂತಿದ್ದ ಚೈತ್ರ, 20 ತಿಂಗಳ ಅಧಿಕಾರದ ಬಳಿಕ ರಾಜೀನಾಮೆ ಕೊಡೋದಕ್ಕೆ ಸಿಕ್ಕಾಪಟ್ಟೆ ಸತಾಯಿಸಿದ್ದರು. ಕೊನೆಗೆ ಪಕ್ಷದಿಂದ ಉಚ್ಛಾಟನೆ ಮಾಡಿ ಕೆಳಗಿಳಿಸಬೇಕಾಯಿತು. ಬಳಿಕ ಅಧ್ಯಕ್ಷರಾದ ಸುಜಾತ ಕೃಷ್ಣಪ್ಪ ಕೂಡ ಈಗ ರಾಜೀನಾಮೆ ಕೊಡೋದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಾನಿನ್ನು 28 ತಿಂಗಳು ಅಧಿಕಾರ ಮಾಡಿದ್ದೇನೆ. 40 ತಿಂಗಳು ಅಧಿಕಾರ ನಡೆಸಿಲ್ಲ. ಪಕ್ಷದ ಮೇಲೆ ಗೌರವವಿದೆ. ಆದರೇ ಪಕ್ಷದ ಒಳಗಿನವರ ನಡೆ-ನುಡಿ ಬಗ್ಗೆ ಬೇಸರವಾಗಿದೆ ಎಂದೂ ಹೇಳುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕರೆದಿದ್ದ ಸಾಮಾನ್ಯ ಸಭೆಗೆ ಬಿಜೆಪಿ ಜಿಲ್ಲಾ ಪಂಚಾಯಿತಿ ಸದಸ್ಯರು ಗೈರಾಗಿದ್ದು, ಇಲ್ಲಿ ಜಾತಿ ರಾಜಕಾರಣವೂ ಕೆಲಸ ಮಾಡುತ್ತಿದೆ ಎಂದು ಜಿಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಆರೋಪಿಸಿದ್ದಾರೆ. ಆದರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಈ ಆರೋಪವನ್ನ ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ತಿರಸ್ಕರಿಸಿದ್ದಾರೆ. ಪಕ್ಷದ ರೀತಿ-ನೀತಿ ಚೌಕಟ್ಟಿನೊಳಗೆ ಪಕ್ಷ ಅವರಿಗೆ ಷರತ್ತುಗಳನ್ನ ಹಾಕಿದೆ. ಆದರೆ, ಅವರು ಕಳೆದ ಆರು ತಿಂಗಳಿಂದ ಬಿಜೆಪಿ ಪಕ್ಷಕ್ಕೆ ಚಾಲೆಂಜ್ ಮಾಡುವ ರೀತಿಯಲ್ಲಿದ್ದಾರೆ. ಅಧ್ಯಕ್ಷರಾದ ಮೇಲೆ ನಾನೇ ಎಲ್ಲಾ ಎಂಬಂತೆ ವರ್ತಿಸಿದ್ದಾರೆ. ಅಂತಹ ಭಾವನೆಗಳಿಗೆ ಬಿಜೆಪಿಯಲ್ಲಿ ಯಾವುದೇ ಬೆಲೆ ಇಲ್ಲ. ಹಾಗಾಗಿ, ಜಿಲ್ಲಾ ಪಂಚಾಯಿತಿ ಸದಸ್ಯರು ಈ ನಿರ್ಧಾರಕ್ಕೆ ಬಂದಿದ್ದಾರೆ. ಅವರು ಕುರ್ಚಿಗೆ ಅಂಟಿಕೊಂಡಿರೋ ಪರಿಣಾಮ ಈ ರೀತಿ ಆರೋಪಗಳನ್ನ ಮಾಡುತ್ತಿದ್ದಾರೆ ಎಂದೂ ಹೇಳಿದರು.

ಒಟ್ಟಾರೆಯಾಗಿ ಸಿ.ಟಿ.ರವಿ ರಾಷ್ಟ್ರ ರಾಜಕಾರಣದತ್ತ ದಾಪುಗಾಲಿಟ್ಟಿದ್ದರೇ ಇತ್ತ ಸ್ವಕ್ಷೇತ್ರದಲ್ಲಿ ಬಿಜೆಪಿ ಒಡೆದ ಮನೆಯಾಗುತ್ತಿದೆ. ದಕ್ಷಿಣ ಭಾರತದ ಉಸ್ತುವಾರಿ ವಹಿಸಿಕೊಂಡಿರೋ ಸಿ.ಟಿ.ರವಿ ರಾಷ್ಟ್ರ ರಾಜಕಾರಣದ ಮಧ್ಯೆಯೂ ಮನೆಯೊಂದು ಮೂರು ಬಾಗಿಲು ಆಗುತ್ತಿರುವ ಜಿಲ್ಲೆಯನ್ನ ಹೇಗೆ ಹಿಡಿತದಲ್ಲಿಟ್ಟುಕೊಳ್ಳುತ್ತಾರೆ ಅನ್ನೋದು ಕೂಡ ಈಗ ಯಕ್ಷ ಪ್ರಶ್ನೆಯಾಗಿದೆ.

ABOUT THE AUTHOR

...view details