ಚಿಕ್ಕಮಗಳೂರು :ಜಿಲ್ಲೆಯ ಬಯಲು ಸೀಮೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಳೆ ಕೊರತೆಯಿಂದ ಈರುಳ್ಳಿ ಬೆಳೆ ನಾಶ ಹಾಗು ಸಾಲಬಾಧೆಯಿಂದ ನೊಂದು ರೈತ ಸತೀಶ್ (48) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಹುಣಸೇಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಸಹಕಾರ ಸಂಘದಲ್ಲಿ 1 ಲಕ್ಷದ 30 ಸಾವಿರ ರೂ, ತಾಯಿ ಹೆಸರಲ್ಲಿ 1 ಲಕ್ಷ ರೂ ಸಾಲವನ್ನು ಇವರು ಮಾಡಿಕೊಂಡಿದ್ದರು. ಈರುಳ್ಳಿ ಬೆಳೆಗಾಗಿ ಕೈ ಸಾಲವನ್ನೂ ಮಾಡಿಕೊಂಡಿದ್ದರು. ಆದರೆ ಈಗ ಮಳೆಯೂ ಬಾರದಿರುವುದರಿಂದ ಬೆಳೆ ಸಂಪೂರ್ಣ ಒಣಗಿಹೋಗಿದೆ. ಕಡೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದೇ ರೀತಿ ಮಳೆ ಬಾರದೆ ಬರಕ್ಕೆ ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪರಮೇಶ್ವರಪ್ಪ (52) ಸಾವನ್ನಪ್ಪಿದವರು. ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. 3 ಎಕರೆ ಜಮೀನಿನಲ್ಲಿ ಹಾಕಿದ್ದ ಈರುಳ್ಳಿ ಸಂಪೂರ್ಣ ನಾಶವಾಗಿದ್ದರಿಂದ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರು ಬ್ಯಾಂಕ್, ಬಡ್ಡಿ ಹಾಗೂ ಕೈಸಾಲ ಸೇರಿ 5 ಲಕ್ಷ ರೂ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಜ್ಜಂಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೈತರು ಆತ್ಮಹತ್ಯೆ ಗೆ ಶರಣಾದ ಬಗ್ಗೆ ರೈತ ಆನಂದಪ್ಪ ಮಾಹಿತಿ ನೀಡಿದ್ದಾರೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಈ ಬಾರಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಒಂದೇ ವಾರದಲ್ಲಿ ಇಬ್ಬರು ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಬಡ ರೈತರ ಕುಟುಂಬಗಳಿಗೆ ದಿಕ್ಕು ತೋಚದಂತಾಗಿದೆ. ದಾವಣಗೆರೆ ತಾಲೂಕಿನ ಚಟ್ಟೋಬನ ಹಳ್ಳಿಯ ರೈತರಿಗೆ ಸಾಲ ಕಟ್ಟಿ ಎಂದು ಬ್ಯಾಂಕ್ ಸಿಬ್ಬಂದಿ ನೊಟೀಸ್ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿಯೂ ಬರ ಆವರಿಸಿದೆ. ಮಳೆ, ಬೆಳೆ ಇಲ್ಲದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇತ್ತ ಸಾಲ ಕಟ್ಟಿ ಎಂದು ರೈತರಿಗೆ ಬ್ಯಾಂಕ್ ಸಿಬ್ಬಂದಿ ನೊಟೀಸ್ ನೀಡುತ್ತಿರುವುದರಿಂದ ರೈತಾಪಿ ವರ್ಗ ಹೈರಾಣಾಗಿದೆ. ಸಾಲಬಾಧೆ ತಾಳಲಾರದೆ ಜಗಳೂರು ತಾಲೂಕಿನಲ್ಲಿ ಒಂದೇ ವಾರದಲ್ಲಿ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ:ಸಾಲಾಬಾಧೆಯಿಂದ ಹಾವೇರಿಯಲ್ಲಿ ಇಬ್ಬರು ರೈತರು ಆತ್ಮಹತ್ಯೆ.. ಮತ್ತೊಂದೆಡೆ ಮಳೆಯಿಲ್ಲದೆ, ಒಣಗಿದ್ದ 4 ಎಕರೆಯಲ್ಲಿನ ಬೆಳೆ ನಾಶ ಮಾಡಿದ ಅನ್ನದಾತ