ಚಿಕ್ಕಮಗಳೂರು:ಶೃಂಗೇರಿಯಲ್ಲಿ ನಡೆಯಲಿರುವ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಗೊಂದಲಕ್ಕೆ ಕಾರಣವಾಗಿದ್ದು, ಕಾರ್ಯಕ್ರಮದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಸಾಹಿತಿಗಳು ಆರೋಪಿಸಿದ್ದಾರೆ. ಇನ್ನೊಂದೆಡೆ ಸಮ್ಮೇಳನಾಧ್ಯಕ್ಷರನ್ನು ಬದಲಾಯಿಸಲು ವಿವಿಧ ಸಂಘಟನೆಗಳು ಶೃಂಗೇರಿ ಬಂದ್ಗೆ ಕರೆ ಕೊಟ್ಟಿವೆ.
ಗೊಂದಲದ ಗೂಡಾದ ಶೃಂಗೇರಿಯ ಅಕ್ಷರ ಜಾತ್ರೆ... ಸಚಿವರಿಗೆ ಸಿದ್ದು ಕೊಟ್ಟ ಟಾಂಗ್ ಏನು? - Sringeri Kannada Literary Conference which caused confusion
ನಾಳೆಯಿಂದ ಎರಡು ದಿನಗಳ ಕಾಲ ಶೃಂಗೇರಿಯಲ್ಲಿ ನಡೆಯಲಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಗೊಂದಲದ ಗೂಡಾಗಿದೆ. ಒಂದೆಡೆ ಕಾರ್ಯಕ್ರಮದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿದ್ದೆ ಎಂದು ಸಾಹಿತಿಗಳು ಆರೋಪಿಸಿದ್ದರೆ, ಇನ್ನೊಂದೆಡೆ ಸಮ್ಮೇಳನಾಧ್ಯಕ್ಷರನ್ನು ಬದಲಾಯಿಸಲು ವಿವಿಧ ಸಂಘಟನೆಗಳು ಶೃಂಗೇರಿ ಬಂದ್ಗೆ ಕರೆ ಕೊಟ್ಟಿವೆ.
ನಾಳೆಯಿಂದ ಎರಡು ದಿನಗಳ ಕಾಲ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಸಮ್ಮೇಳನದ ಅಧ್ಯಕ್ಷರಾಗಿರುವ ಕಲ್ಕುಳಿ ವಿಠ್ಠಲ ಹೆಗಡೆ ನಕ್ಸಲರ ಜೊತೆ ನಂಟು ಹೊಂದಿದ್ದು, ಆದ್ದರಿಂದ ಅವರನ್ನು ಬದಲಾಯಿಸುವಂತೆ ನಕ್ಸಲ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಇನ್ನೊಂದೆಡೆ ಸಮ್ಮೇಳನಕ್ಕೆ ಭದ್ರತೆ ನೀಡಲು ಚಿಕ್ಕಮಗಳೂರು ಎಸ್ಪಿ ನಿರಾಕರಣೆ ಮಾಡಿದ್ದಾರೆ ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರ್ ಅಶೋಕ್ ಆರೋಪಿಸಿದ್ದಾರೆ. ಇವೆಲ್ಲದರ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಒಂದನ್ನು ಮಾಡುವ ಮೂಲಕ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, "ತಮ್ಮ ಪಕ್ಷದ ರಾಜಕೀಯ ಸಿದ್ಧಾಂತ ಒಪ್ಪದಿರುವವರು ಅಧ್ಯಕ್ಷರಾಗಿರುವ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನಿರಾಕರಿಸಿರುವ ಸಚಿವ ಸಿ.ಟಿ.ರವಿ ನಿರ್ಧಾರ ಕನ್ನಡ ನಾಡು - ನುಡಿಗೆ ಬಗೆದ ದ್ರೋಹವಾಗಿದೆ. ಕನ್ನಡ ಸಾಹಿತ್ಯ ಪರಿಷತ್ನ ಸ್ವಾಯತ್ತತೆಯನ್ನು ಗೌರವಿಸುವುದು ಸರ್ಕಾರದ ಕರ್ತವ್ಯ" ಎಂದು ಕುಟುಕಿದ್ದಾರೆ.
ಇನ್ನು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ ಮಾಡಿ ಪೊಲೀಸ್ ಇಲಾಖೆ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ದೇಶಾದ್ಯಂತ ಪೌರತ್ವ ಕಾಯ್ದೆಯ ಪ್ರಕ್ಷುಬ್ಧ ವಾತಾವರಣ ಇರೋದರಿಂದ ಇಂತಹ ಹೊತ್ತಿನಲ್ಲಿ ಮೆರವಣಿಗೆ, ಸಮ್ಮೇಳನ ಮಾಡುವುದರಿಂದ ತೊಂದರೆ ಆಗಲಿದ್ದು, ಸಮ್ಮೇಳನ ಮುಂದೂಡುವಂತೆ ತಿಳಿಸಿದೆ. ಇದರಿಂದಾಗಿ ಶೃಂಗೇರಿಯ ಅಕ್ಷರ ಜಾತ್ರೆ ಗೊಂದಲದ ಗೂಡಾಗಿ ಮಾರ್ಪಟ್ಟಿದೆ.