ಚಿಕ್ಕಮಗಳೂರು: ಪಟಾಕಿ ಇಲ್ಲದೆ ಶಾಂತಿಯುತ ದೀಪಾವಳಿ ಆಚರಿಸೋಣ ಎಂಬ ಸರ್ಕಾರದ ನಿಲುವನ್ನು ಟೀಕಿಸಿರುವ ಜಿಲ್ಲೆಯ ಕಾಳಿಮಠದ ಋಷಿಕುಮಾರ ಸ್ವಾಮೀಜಿ, ಪಟಾಕಿಯೇ ದೀಪಾವಳಿಯ ವಿಶೇಷ, ಪಟಾಕಿಯೇ ಇಲ್ಲದೆ ದೀಪಾವಳಿ ಹೇಗೆ ಆಚರಿಸೋದು. ಅದ್ಯಾವುದು ಹಸಿರು ಪಟಾಕಿ. ಪಟಾಕಿಗೆ ಎಲೆ ಸುತ್ತಿ ಹೊಡೆಯಬೇಕೇ ಎಂದು ವ್ಯಂಗ್ಯವಾಡಿದ್ದಾರೆ.
ಹಸಿರು ಪಟಾಕಿಯಂತೆ, ಪಟಾಕಿಗೆ ಎಲೆ ಸುತ್ತಿ ಸಿಡಿಸಬೇಕಾ?: ಋಷಿಕುಮಾರ ಸ್ವಾಮೀಜಿ ಪ್ರಶ್ನೆ - Sri Rama Sena Organization
ಶ್ರೀ ರಾಮ ಸೇನೆ ಸಂಘಟನೆ ಆಚರಣೆ ಮಾಡಲು ಹೊರಟಿರುವ ಈ ಬಾರಿಯ ದತ್ತಮಾಲಾ ಅಭಿಯಾನಕ್ಕೆ ಕಡಿಮೆ ಜನ ಸೇರಿಸಿ ಎಂದು ಹೇಳಿರುವ ಜಿಲ್ಲಾಡಳಿತದ ವಿರುದ್ಧ ಕಾಳಿಮಠ ಋಷಿಕುಮಾರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ, ಅವರು ಸಚಿವ ಸಿ. ಟಿ. ರವಿ ಹಾಗೂ ಬಿಎಸ್ವೈ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
![ಹಸಿರು ಪಟಾಕಿಯಂತೆ, ಪಟಾಕಿಗೆ ಎಲೆ ಸುತ್ತಿ ಸಿಡಿಸಬೇಕಾ?: ಋಷಿಕುಮಾರ ಸ್ವಾಮೀಜಿ ಪ್ರಶ್ನೆ Rishikumara Swamiji of Kalimutt shouts on CT Ravi, BSY](https://etvbharatimages.akamaized.net/etvbharat/prod-images/768-512-9519858-225-9519858-1605160703997.jpg)
ಇದೇ ತಿಂಗಳ 26 ರಂದು ಶ್ರೀ ರಾಮ ಸೇನೆ ಸಂಘಟನೆ ಆಚರಣೆ ಮಾಡಲು ಹೊರಟಿರುವ ದತ್ತಮಾಲಾ ಅಭಿಯಾನಕ್ಕೆ ಕಡಿಮೆ ಜನ ಸೇರಿಸಿ ಎಂದು ಹೇಳಿರುವ ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅವರು, ಉಪಚುನಾವಣೆಗಳ ಪ್ರಚಾರದ ವೇಳೆ ಗುಂಪು ಗುಂಪಾಗಿ ಸೇರುತ್ತಿದ್ದ ನಮ್ಮ ನಾಯಕರಿಗೆ ಈಗ ಸಾಮಾಜಿಕ ಅಂತರದ ಅರಿವಾಯಿತೇ?. ನಾನು ಯಾವಾಗಲೂ ಹೇಳುತ್ತಿರುತ್ತೇನೆ ಬಿಎಸ್ವೈ ಪೂರ್ಣಾವಧಿ ಸರ್ಕಾರ ಮಾಡುತ್ತಾರೆ ಎಂದು ಆದರೆ, ಹಿಂದೂಗಳಿಗೆ ಹೀಗೆ ಅನ್ಯಾಯ ಮಾಡಿದರೆ ಮೂರು ತಿಂಗಳ ಕಾಲವೂ ಅವರ ಆಡಳಿತ ಇರುವುದಿಲ್ಲ. ಉಂಡುಂಡು ಮಲಗೋದು. ದಿನಕ್ಕೊಂದು ಕಾನೂನು ತರೋದಷ್ಟೆ ನಮ್ಮ ಸರ್ಕಾರದ ಸಾಧನೆಯಾಗಿದೆ. 6 ಲಕ್ಷ ದೀಪ ಹಚ್ಚಿ ದೀಪಾವಳಿ ಆಚರಿಸುತ್ತಿರುವ ಯೋಗಿ ಸರ್ಕಾರವನ್ನು ನೋಡಿ ಕಲಿಯಬೇಕು ನಮ್ಮವರು ಎಂದು ಬಿಎಸ್ವೈ ವಿರುದ್ಧ ಕಿಡಿಕಾರಿದರು.
ಈವರೆಗೂ ನಾವು ಸಿ. ಟಿ. ರವಿ ನಮ್ಮವರು ಎಂದು ಹೇಳುತ್ತಾ ಬಂದೆವು. ಕಳೆದ ವರ್ಷ ಅವರು ವಿಗ್ರಹವನ್ನು ಬೀದಿಯಲ್ಲಿ ಇಡುವಂತಹ ಕೆಲಸ ಮಾಡಿದ್ದರು. ನಾವು ಅದನ್ನು ದೇವಾಸ್ಥಾನದಲ್ಲಿಟ್ಟು ತ್ರಿಕಾಲ ಪೂಜೆ ಮಾಡುತ್ತಿದ್ದೇವೆ. ನಾವು ದತ್ತಮಾಲಾ ಅಭಿಯಾನಕ್ಕೆ ಇಡೀ ರಾಜ್ಯಕ್ಕೆ ಕರೆ ಕೊಟ್ಟಿದ್ದೇವೆ. ಸರ್ಕಾರ ದತ್ತಮಾಲಾ ಅಭಿಯಾನಕ್ಕೆ ಪೂರ್ಣ ಬೆಂಬಲ ನೀಡಬೇಕೆಂದು ಒತ್ತಾಯಿಸಿದರು.