ಚಿಕ್ಕಮಗಳೂರು:ಕಾಫಿನಾಡಿನಲ್ಲೂ ಜಾತ್ರೆಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಿರ್ಬಂಧಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಜಿಲ್ಲೆಯಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಲ್ಲಿ ಹಿಂದೂಯೇತರ ವ್ಯಾಪಾರಿಗಳನ್ನು ನಿಷೇಧ ಮಾಡಬೇಕು ಎಂಬ ಕೂಗು ಜೋರಾಗಿ ಕೇಳಿ ಬರುತ್ತಿದೆ. ಶೃಂಗೇರಿ ತಾಲೂಕಿನ ಕಿಗ್ಗಾ, ಚಿತ್ರವಳ್ಳಿ, ಅಡ್ಡಗದ್ದೆ ಜಾತ್ರೆಯಲ್ಲಿ ಅನ್ಯಮತೀಯರು ವ್ಯಾಪಾರ ಮಾಡುವುದನ್ನು ನಿಷೇಧಿಸುವಂತೆ ಗ್ರಾಮಸ್ಥರಿಂದ ಮನವಿ ಮಾಡಲಾಗಿದೆ.
ಮುಂದೆ ನಡೆಯುವ ಋಷ್ಯಶೃಂಗ ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಹಿಂದೂಗಳ ಹೊರತಾಗಿ ಅನ್ಯ ಧರ್ಮೀಯರು ವ್ಯಾಪಾರ ನಡೆಸದಂತೆ ನಿರ್ಬಂಧ ಹೇರಬೇಕು. ಜಾತ್ರೆಯಲ್ಲಿ ಅಂಗಡಿ, ಮಳಿಗೆ ತೆರೆಯಲು ಅವಕಾಶ ನೀಡದಂತೆ ಮರ್ಕಲ್ ಗ್ರಾಮ ಪಂಚಾಯಿತಿಗೆ ಅಲ್ಲಿನ ಮನವಿ ಮಾಡಿದ್ದಾರೆ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ನಿಯಮದಂತೆ ಕ್ರಮಕೈಗೊಳ್ಳಲು ಮನವಿಯಲ್ಲಿ ವಿವಿಧ ಗ್ರಾಮಗಲ ಜನರು ಒತ್ತಾಯಿಸಿದ್ದಾರೆ.