ಕರ್ನಾಟಕ

karnataka

ETV Bharat / state

ನೂರು ವರ್ಷದ ಮರಗಳಿಗೆ ಮರುಜೀವ ನೀಡಿದ ಚಿಕ್ಕಮಗಳೂರು ಜಿಲ್ಲಾಡಳಿತ - trees replant in chikkamagaluru

ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ರಸ್ತೆ ಅಗಲೀಕರಣದ ವೇಳೆ ಹತ್ತಾರು ಮರಗಳನ್ನು ಕಡಿದು ಹಾಕಿದ್ದರು. ಆದರೆ, ಅಪರೂಪದ ಜಾತಿಯ ಮರಗಳನ್ನು ಉಳಿಸಬೇಕೆಂದು ನಗರಸಭೆ ಆಯುಕ್ತರು ತೀರ್ಮಾನಿಸಿ ಅವುಗಳನ್ನು ಮತ್ತೆ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

chikkamagaluru
ಚಿಕ್ಕಮಗಳೂರು

By

Published : Jan 3, 2022, 6:57 PM IST

ಚಿಕ್ಕಮಗಳೂರು: ಅಭಿವೃದ್ಧಿ ಹಾಗು ರಸ್ತೆ ಅಗಲೀಕರಣ ಹೆಸರಲ್ಲಿ ಮರಗಳ ಮಾರಣ ಹೋಮ ನಡೆಯುತ್ತಿದೆ. ಬದುಕಿಗೆ ಬೆಳಕಾಗಿ ಭವಿಷ್ಯಕ್ಕೆ ನೆರಳಾಗಿದ್ದ ಶತಮಾನದ ಮರಗಳನ್ನು ಮುಲಾಜಿಲ್ಲದೆ ಕ್ಷಣಾರ್ಧದಲ್ಲಿ ಕಡಿದು ನೆಲಕ್ಕುರುಳಿಸುತ್ತಿದ್ದಾರೆ.

ಈ ಮಧ್ಯೆ ಕಾಫಿನಾಡಲ್ಲಿ ನೂರಾರು ವರ್ಷಗಳ ಕಾಲ ಬದುಕಿ-ಬಾಳಿದ್ದ ಮರಗಳನ್ನು ಕಡಿದು ಹಾಕಿದರೂ ಅವುಗಳಿಗೆ ಮರುಜೀವ ಕೊಡುವ ಕೆಲಸ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಈ ರೀತಿ ಮರಕ್ಕೆ ಮರುಜೀವದ ಕಾರ್ಯ ನಡೆಯುತ್ತಿದ್ದು, ಪರಿಸರ ಪ್ರೇಮಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಹೌದು, ಇದೇನಿದು ರಂಬೆ-ಕೊಂಬೆಗಳನ್ನ ಕಡಿದು ಹಾಕಿರೋ ಬೋಳು ಮರವನ್ನು ತೋರಿಸ್ತಿದ್ದಾರೆ, ಪಾರ್ಕ್​ನ ಒಳಗೆ ಮರಗಳನ್ನು ಕಡಿದವರು ಯಾರು? ಅಂತ ಕನ್ಫ್ಯೂಸ್ ಆಗ್ಬೇಡಿ. ಈ ಮರಗಳನ್ನು ಪಾರ್ಕ್​ನಲ್ಲಿ ಕಡಿದದ್ದಲ್ಲ. ಈ ಮರಗಳು ಪಾರ್ಕಿಗೆ ಬಂದಿರೋ ಅತಿಥಿಗಳು. ಚಿಕ್ಕಮಗಳೂರು ನಗರದ ಕಲ್ಯಾಣನಗರದ ಪಾರ್ಕ್​ನಲ್ಲಿ ಈ ಮರಗಳನ್ನು ನೋಡಿ ಜನ ಅಚ್ಚರಿಗೊಂಡಿದ್ದಾರೆ.


ದಿನ ವಾಕ್ ಮಾಡ್ತೀವಿ. ಆವಾಗ ಮರ ಇರಲಿಲ್ಲ. ಈಗ ಎಲ್ಲಿಂದ ಬಂತು? ಅಂತ ಜನ ಗಾಬರಿಯಾಗಿದ್ದಾರೆ. ಅದು ಸಣ್ಣ-ಪುಟ್ಟ ಗಿಡವಲ್ಲ. ಶತಮಾನಗಳಷ್ಟು ಹಳೆಯ ಮರಗಳು ಹೇಗೆ ಬಂದ್ವು ಅಂತ ಜನ ಗಾಬರಿಯಾಗಿದ್ದಾರೆ. ಅಷ್ಟಕ್ಕೂ ಈ ಮರಗಳು ಇಲ್ಲಿ ಬೆಳೆದಿದ್ದಲ್ಲ. ನೂರಾರು ವರ್ಷಗಳಿಂದ ರಸ್ತೆ ಬದಿ ಇದ್ದ ಮರಗಳನ್ನ ರಸ್ತೆ ಅಗಲೀಕರಣಕ್ಕೆ ಕಡಿದ ಬಳಿಕ ತಂದು ಪಾರ್ಕ್‍ನಲ್ಲಿ ಮರುಜನ್ಮ ನೀಡಿದ್ದಾರೆ.

ನಗರಸಭೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ರಸ್ತೆ ಅಗಲೀಕರಣದಲ್ಲಿ ಹತ್ತಾರು ಮರಗಳನ್ನ ಕಡಿದು ಹಾಕಿದ್ರು. ಆದರೆ, ಅಪರೂಪದ ಜಾತಿಯ ಮರಗಳನ್ನ ಉಳಿಸಬೇಕೆಂದು ನಗರಸಭೆ ಆಯುಕ್ತರು ತೀರ್ಮಾನಿಸಿ ಅವುಗಳನ್ನ ಮತ್ತೆ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ನೂರಾರು ವರ್ಷಗಳಿಂದ ಜನರಿಗೆ ನೆರಳಾಗಿದ್ದ ಮರಗಳನ್ನ ಬುಡಸಮೇತ ತೆಗೆದು ಪಾರ್ಕ್​ನಲ್ಲಿ ಮರುಜನ್ಮ ನೀಡಿ ಬೆಳೆಸಲು ಮುಂದಾಗಿದ್ದಾರೆ.

ಚಿಕ್ಕಮಗಳೂರಿನಿಂದ ತರೀಕೆರೆ ಮಾರ್ಗ ಹಾಗು ಚಿಕ್ಕಮಗಳೂರಿನ ಬೈಪಾಸ್ ರಸ್ತೆಯಲ್ಲಿ ರಸ್ತೆ ಅಗಲೀಕರಣದ ಕಾರ್ಯ ನಡೆಯುತ್ತಿದೆ. ಈ ವೇಳೆ 15ಕ್ಕೂ ಹೆಚ್ಚು ನೂರಾರು ವರ್ಷದ ಮರಗಳನ್ನು ಕಡಿಯಲಾಗಿದೆ. ಅವುಗಳನ್ನು ನಗರದ ಕಲ್ಯಾಣನಗರ, ಡಿಎಆರ್ ಗ್ರೌಂಡ್, ರಾಮನಹಳ್ಳಿಯಲ್ಲಿ ಈ ರೀತಿ ಬೃಹತ್ ಮರಗಳನ್ನ ರೀ ಪ್ಲಾಂಟೇಶನ್ ಮಾಡೋದಕ್ಕೆ ನಗರಸಭೆ ಮುಂದಾಗಿದೆ.

ಈಗಾಗಲೇ ಅರ್ಧದಷ್ಟು ಕೆಲಸ ಕೂಡ ಮಾಡಿ ಮುಗಿಸಿದೆ. ಮರಗಳನ್ನು ಮೂಲ ಸ್ಥಳದಿಂದ ಶಿಫ್ಟ್ ಮಾಡುವ ವೇಳೆ ತಮಿಳುನಾಡಿನಿಂದ ಪರಿಣಿತ ತಜ್ಞರನ್ನು ಕರೆಯಿಸಿ ಬುಡಸಮೇತ ಮೇಲೆತ್ತಿದ್ದ ಮರಗಳನ್ನ ನೆಡಲಾಗಿದೆ. ನಗರಸಭೆಯ ಈ ವಿನೂತನ ಕಾರ್ಯಕ್ಕೆ ಜನಸಾಮಾನ್ಯರು, ಪರಿಸರ ಪ್ರೇಮಿಗಳಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಇತ್ತೀಚಿನ ದಿನಗಳಲ್ಲಿ ಒಂದು ಗಿಡಕ್ಕೆ ನೀರು ಹಾಕಿ ಮಳೆ-ಗಾಳಿ-ಬಿಸಿಲಿನಿಂದ ಕಾಪಾಡಿಕೊಂಡು ಬೆಳೆಸುವುದು ನಿಜಕ್ಕೂ ಕೂಡ ದೊಡ್ಡ ಸವಾಲು. ಅಂತದ್ದರಲ್ಲಿ ರಸ್ತೆ ಅಗಲೀಕರಣ ನೆಪದಲ್ಲಿ ನಮಗೆ ನೆರಳು ನೀಡಿ ಆಶ್ರಯ ನೀಡಿದ್ದ ಅದೆಷ್ಟೋ ಮರಗಳನ್ನು ನಾಶಪಡಿಸೋದು ನಿಜಕ್ಕೂ ದುರಂತ.

ಈ ನಡುವೆ ಒಂದಷ್ಟು ಮರಗಳನ್ನು ಉಳಿಸಿ, ಬೆಳೆಸುವ ಕಾರ್ಯಕ್ಕೆ ಕೈ ಹಾಕಿರುವ ಚಿಕ್ಕಮಗಳೂರು ನಗರಸಭೆ ಕಾರ್ಯ ನಿಜಕ್ಕೂ ಶ್ಲಾಘನೀಯ. ಮತ್ತೆ ಮರಗಳನ್ನು ಬೆಳೆಸೋಕೆ ನೂರು ವರ್ಷವೇ ಬೇಕು. ಅದರ ಬದಲು ಇರೋದನ್ನು ಉಳಿಸೋದು ಸುಲಭದ ಕೆಲಸ. ಸರ್ಕಾರ ಆ ನಿಟ್ಟಿನಲ್ಲಿ ಯೋಚಿಸಬೇಕಿದೆ.

ಇದನ್ನೂ ಓದಿ:ಸಂಕ್ರಾಂತಿ ಒಳಗಾಗಿ ಸಚಿವ ಸಂಪುಟ ವಿಸ್ತರಣೆ: ಯತ್ನಾಳ್​ ಪುನರುಚ್ಚಾರ

ABOUT THE AUTHOR

...view details