ಚಿಕ್ಕಮಗಳೂರು:ಇತ್ತೀಚೆಗೆ ಮಂಡಿಸಲಾಗಿರುವ ನಗರಸಭೆ ಆಯವ್ಯಯದಲ್ಲಿ ಹೊಸ ಘೋಷಣೆಯೊಂದು ಸೇರ್ಪಡೆಯಾಗಿದ್ದು, ಈ ಘೋಷಣೆ ವಿವಾದಕ್ಕೆ ದಾರಿ ಮಾಡಿಕೊಟ್ಟಂತಿದೆ. ಆಯವ್ಯಯದಲ್ಲಿ ಉಲ್ಲೇಖ ಮಾಡಲಾಗಿರುವ ಈ ಘೋಷಣೆಯನ್ನು ನಗರಸಭೆ ಅಧ್ಯಕ್ಷರು ಜಾರಿ ಮಾಡಲು ಸಹ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ವಿಚಾರ ಕಾರ್ಯಗತಗೊಳಿಸಿದರೆ ವಿವಾದ ಸೃಷ್ಟಿಯಾಗುವ ಸಾಧ್ಯತೆ ಹೆಚ್ಚಿದ್ದು ನಗರಸಭೆಯಲ್ಲಿ ಮಂಡಿಸಿದ ಆಯವ್ಯಯ ವಿವಾದದ ಸುಳಿಯಲ್ಲಿ ಸಿಲುಕುವಂತೆ ಕಾಣಿಸುತ್ತಿದೆ. ಧ್ವನಿವರ್ಧಕಗಳ ಬಳಕೆಯ ಬಗೆಗಿನ ಹೊಸ ಘೋಷಣೆಯೊಂದನ್ನು ಸೇರ್ಪಡೆ ಮಾಡಿಕೊಂಡು ನಗರಸಭೆ ಅಧ್ಯಕ್ಷ ವರಸಿದ್ದ ವೇಣುಗೋಪಾಲ್ ಅವರು ಇತ್ತೀಚೆಗೆ ಬಜೆಟ್ ಮಂಡಿಸಿದ್ದಾರೆ.
ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ತಲೆ ಎತ್ತುತ್ತಿರುವ ಚರ್ಚ್, ಮಸೀದಿ, ಪ್ರಾರ್ಥನಾ ಮಂದಿಗಳಲ್ಲಿ ಬಳಕೆ ಮಾಡುತ್ತಿರುವ ಮೈಕ್ ವಿರುದ್ಧ ಕ್ರಮಕ್ಕೆ ಮುಂದಾಗಿರುವ ನಗರಸಭೆ, ಧಾರ್ಮಿಕ ಕೇಂದ್ರಗಳಲ್ಲಿ ಅನುಮತಿ ಇಲ್ಲದ ಹಾಗೂ ಅತೀ ಹೆಚ್ಚಿನ ಸೌಂಡ್ಗಳುಳ್ಳ ಧ್ವನಿವರ್ಧಕಗಳ ನಿಷೇಧಕ್ಕೆ ಚಿಂತನೆ ಮಾಡಲಾಗಿದೆ.
ಬಜೆಟ್ನಲ್ಲಿ ನಗರಸಭಾ ಅಧ್ಯಕ್ಷರು ಈ ವಿಚಾರದ ಬಗ್ಗೆ ಘೋಷಣೆ ಮಾಡಿದ್ದು, ದೇವಸ್ಥಾನ, ಮಸೀದಿ ಮತ್ತು ಚರ್ಚೇ ಸೇರಿದಂತೆ ಎಲ್ಲ ಧಾರ್ಮಿಕ ಕೇಂದ್ರಗಳಿಗೂ ಇದು ಅನ್ವಯವಾಗಲಿದೆ. ನಗರದ ಜನರ ಆರೋಗ್ಯದ ದೃಷ್ಟಿಯಿಂದ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅಧ್ಯಕ್ಷ ಹೇಳಿದ್ದಾರೆ. ಕಾಂಗ್ರೆಸ್ ನಗರಸಭಾ ಸದಸ್ಯರಿಂದ ತೀವ್ರ ವಿರೋಧ ಮತ್ತು ಆಕ್ಷೇಪ ವ್ಯಕ್ತವಾಗಿದೆ.