ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ಲಾಕ್ಡೌನ್ನಿಂದ ನಿರಾಶ್ರಿತರ ಕೇಂದ್ರ ಹಾಗೂ ಇತರ ಸ್ಥಳಗಳಲ್ಲಿ ಉಳಿದುಕೊಂಡಿದ್ದ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಊರಿಗೆ ಜಿಲ್ಲಾಡಳಿತದ ವತಿಯಿಂದ ಕಳುಹಿಸಿಕೊಡಲಾಗುತ್ತಿದೆ.
ಲಾಕ್ಡೌನ್ನಿಂದ ಮುಕ್ತಿ: 11 ಸರ್ಕಾರಿ ಬಸ್ಗಳಲ್ಲಿ ತಾಯ್ನಾಡಿಗೆ ಹೊರಟ ಕಾರ್ಮಿಕರು
ಲಾಕ್ಡೌನ್ ಜಾರಿಯಾದ ಬಳಿಕ ವಲಸೆ ಕಾರ್ಮಿಕರು ತಮ್ಮ ತಾಯ್ನಾಡಿಗೆ ವಾಪಸ್ ಆಗಲಾರದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ರಾಜ್ಯದಲ್ಲಿ ಲಾಕ್ಡೌನ್ ನಿಯಮದಲ್ಲಿ ಕೊಂಚ ಸಡಿಲಿಕೆ ಮಾಡಿದ್ದು, ಚಿಕ್ಕಮಗಳೂರಿನಲ್ಲಿ ಸಿಲುಕಿದ್ದ ರಾಜ್ಯದ ನಾನಾ ಭಾಗದ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ಕಳುಹಿಸುವ ಕಾರ್ಯ ನಡೆಯುತ್ತಿದೆ. ಸರ್ಕಾರಿ ಬಸ್ಗಳ ವ್ಯವಸ್ಥೆಯ ಮೂಲಕ ಅವರನ್ನು ಅವರ ಊರಿಗೆ ಕಳುಹಿಸಿಕೊಡಲಾಗುತ್ತಿದೆ.
ಲಾಕ್ಡೌನ್ ಹಿನ್ನೆಲೆ ಕಳೆದ ಒಂದು ತಿಂಗಳಿಂದ ಕಾಫಿ ತೋಟದ ಲೈನ್ ಮನೆಗಳಲ್ಲಿ ವಾಸವಾಗಿದ್ದ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ಕಳುಹಿಸಲಾಗುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಇಲ್ಲಿನ ಕಾಫಿ ತೋಟಗಳಿಗೆ ದುಡಿಯಲು ಬಂದಿದ್ದ ಎ್ಲಲ ಕಾರ್ಮಿಕರನ್ನು ಊರಿಗೆ ಕಳುಹಿಸಿಕೊಡಲಾಗುತ್ತಿದೆ ಎಂದು ಮೂಡಿಗೆರೆ ತಹಶೀಲ್ದಾರ್ ರಮೇಶ್ ಮಾಹಿತಿ ನೀಡಿದ್ದಾರೆ.
ಪ್ರಮುಖವಾಗಿ ಕಾಫಿ ಹಾಗೂ ಮೆಣಸು ಕೊಯ್ಯಲು ಬಂದಿದ್ದ ಕಾರ್ಮಿಕರನ್ನು ಮೂಡಿಗೆರೆಯಿಂದ 11 ಸರ್ಕಾರಿ ಬಸ್ಗಳಲ್ಲಿ ತಮ್ಮ ಊರಿಗೆ ಕಳುಹಿಸಿಕೊಡಲಾಗುತ್ತಿದ್ದು, ರಾಯಚೂರು, ಬಳ್ಳಾರಿ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಕಾರ್ಮಿಕರು ತಮ್ಮ ಊರಿಗೆ ತೆರಳಲಿದ್ದಾರೆ. 11 ಬಸ್ಗಳಲ್ಲಿ 200ಕ್ಕೂ ಅಧಿಕ ಕಾರ್ಮಿಕರನ್ನು ತಮ್ಮ ಊರಿಗೆ ಸೇರಿಸುವ ಪ್ರಯತ್ನ ಜಿಲ್ಲಾಡಳಿತ ಮಾಡಿದೆ.