ಚಿಕ್ಕಮಗಳೂರು:ಹಲವಾರು ದಿನಗಳಿಂದ ಜನರಲ್ಲಿ ಆತಂಕ ಸೃಷ್ಟಿ ಮಾಡಿದ್ದ ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಸ್ನೇಕ್ ಹರೀಂದ್ರ ಯಶಸ್ವಿಯಾಗಿದ್ದಾರೆ.
ಕೊಪ್ಪ: ತೋಟದಲ್ಲಿ ಜನರನ್ನು ಬೆಚ್ಚಿಬೀಳಿಸಿದ್ದ ಬೃಹತ್ ಕಾಳಿಂಗ!
ತೋಟದಲ್ಲಿ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿ ಮಾಡಿದ್ದ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯುವಲ್ಲಿ ಸ್ನೇಕ್ ಹರೀಂದ್ರ ಯಶಸ್ವಿಯಾಗಿದ್ದು, ಅರಣ್ಯಾಧಿಕಾರಿಗಳ ಸಮ್ಮುಖದಲ್ಲೇ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.
ಜಿಲ್ಲೆಯ ಕೊಪ್ಪ ತಾಲೂಕಿನ ಗಡಿಕಲ್ಲು ಗ್ರಾಮದ ಗಣೇಶ್ ಎಂಬುವರ ತೋಟದಲ್ಲಿ ಹಲವಾರು ದಿನಗಳಿಂದ ಕಾಳಿಂಗ ಸರ್ಪ ಕಾಣಿಸಿಕೊಳ್ಳುತ್ತಿತ್ತು. ಇದನ್ನು ಕಂಡ ಮಾಲೀಕರು ಹಾಗೂ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಹಾವನ್ನು ನೋಡಿ ಬೆಚ್ಚಿದ್ದರು. ಇದರಿಂದಾಗಿ ತೋಟದಲ್ಲಿ ಓಡಾಡುವುದಕ್ಕೂ ಜನರು ಭಯಭೀತರಾಗಿದ್ದರು.
ಇಂದು ಮತ್ತೆ ತೋಟದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡ ಕೂಡಲೇ ಗಣೇಶ್, ಕುದುರೆಗುಂಡಿಯ ಸ್ನೇಕ್ ಹರೀಂದ್ರ ಅವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಹರೀಂದ್ರ ಅರ್ಧ ಗಂಟೆಯಲ್ಲೇ 13 ಅಡಿ ಉದ್ದವಿದ್ದ ಸರ್ಪ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಸ್ನೇಕ್ ಹರೀಂದ್ರ ಅರಣ್ಯಾಧಿಕಾರಿಗಳ ಸಮ್ಮುಖದಲ್ಲೇ ಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು. ಹಾವು ಸೆರೆಯಿಂದ ತೋಟದ ಮಾಲೀಕರು, ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.