ಚಿಕ್ಕಮಗಳೂರು:ಚಿಕ್ಕಮಗಳೂರು ನಗರದಲ್ಲಿ ನಡೆದ ಕರು ಮಾರಿಯಮ್ಮ ದೇವಿಯ ಜಾತ್ರಾ ಮಹೋತ್ಸವದಲ್ಲಿ ಹರಕೆ ಹೊತ್ತಿದ್ದ ಭಕ್ತರು ಬೆನ್ನಿಗೆ ಕಬ್ಬಿಣದ ಕೊಂಡಿಗಳುಳ್ಳ ಸರಪಳಿಯನ್ನು ಹಾಕಿಕೊಂಡು ಟ್ರ್ಯಾಕ್ಟರ್, ಕಾರು, ಆಟೋವನ್ನು ಎಳೆದು ಭಕ್ತಿ ಸಮರ್ಪಿಸಿ, ಹರಕೆ ತೀರಿಸಿದ್ದಾರೆ.
ದೇವರಿಗೆ ಉಪವಾಸವಿದ್ದು, ಮುಡಿ ನೀಡಿ ಅಥವಾ ವಿಶಿಷ್ಟ ರೀತಿಯ ಅಡುಗೆಯನ್ನು ಮಾಡಿ ದೇವರಿಗೆ ನೈವೇದ್ಯ ಮಾಡಿ ಹರಕೆ ತೀರಿಸುವುದು ಸರ್ವೇ ಸಾಮಾನ್ಯ. ಆದರೆ, ನಗರದ ಕರು ಮಾರಿಯಮ್ಮನ ಭಕ್ತರು ಈ ರೀತಿ ದೇಹವನ್ನು ದಂಡಿಸಿ ದೇವಿಗೆ ಹರಕೆ ತೀರಿಸಿದ್ದಾರೆ. ಈ ಬಾರಿ 26 ಜನರು ವಿಭಿನ್ನವಾಗಿ ತಮ್ಮ ಹರಕೆಯನ್ನು ನೆರವೇರಿಸಿದ್ದಾರೆ.
ಬೆನ್ನಿಗೆ ಕಬ್ಬಿಣದ ಕೊಂಡಿ ಹಾಕಿಕೊಂಡು ಕಾರು, ಆಟೋ ಎಳೆದು ಹರಕೆ ತೀರಿಸಿದ ಭಕ್ತರು! ಜಾತ್ರೆಯ ಹಿನ್ನೆಲೆ ಶನಿವಾರ ಬೆಳಗ್ಗೆ ದಂಟರಮಕ್ಕಿಯ ಕೆರೆ ಕೋಡಿಯಮ್ಮನ ಸನ್ನಿಧಿಯಲ್ಲಿ ಕರಗ ಪೂಜೆ ನೇರವೇರಿಸಿದರು. ಬಳಿಕ ಬೆನ್ನಿನ ಚರ್ಮಕ್ಕೆ ಕಬ್ಬಿಣದ ಮೂರ್ನಾಲ್ಕು ಕೊಂಡಿಗಳನ್ನು ಹಾಕಿಕೊಂಡು ಟ್ರ್ಯಾಕ್ಟರ್, ಆಟೋ, ಕಾರು, ಮಿನಿ ಲಾರಿಯಂತಹ ಬೃಹತ್ ವಾಹನಗಳನ್ನು ಕೆರೆ ಕೋಡಿಯಮ್ಮ ದೇವಸ್ಥಾನದಿಂದ ಕರುಮಾರಿಯಮ್ಮ ದೇವಸ್ಥಾನವರೆಗೆ ಎಳೆದುಕೊಂಡು ಹೋಗುವ ಮೂಲಕ ಭಕ್ತಿ ಪರಾಕಾಷ್ಠೆ ಮೆರೆದರು.
ಈ ವೇಳೆ ಸಂಬಂಧಿಕರು, ಜಾತ್ರೆಯಲ್ಲಿ ಭಾಗವಹಿಸಿದವರು ಗೋವಿಂದ ಗೋವಿಂದ ಎಂದು ಕೂಗುವ ಮೂಲಕ ಅವರಿಗೆ ಧೈರ್ಯ ತುಂಬುತ್ತಿದ್ದರು. ಈ ವಿಭಿನ್ನ ಆಚರಣೆಗೆ 'ಅಳಲು ಹಾಕುವುದು' ಎಂದು ಸ್ಥಳೀಯರು ಕರೆಯುತ್ತಾರೆ. ಇನ್ನೂ ಕೆಲ ಭಕ್ತರು ತಮ್ಮ ಕಾಲು, ಬೆನ್ನಿಗೆ ಕಬ್ಬಿಣದ ಕೊಂಡಿಗಳನ್ನು ಹಾಕಿಕೊಂಡು ದೇವರ ಕಳಸವನ್ನು ಕುತ್ತಿಗೆಗೆ ಹಾಕಿಕೊಂಡು ವಾಹನದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ನೇತು ಬಿದ್ದಿದ್ದರು. ಇದನ್ನ ನೋಡಿದವರ ಮೈ ಜುಮ್ ಎನ್ನುವಂತಿತ್ತು. ಕೆಲವು ಮಕ್ಕಳು ಬಾಯಿಗೆ ಕಬ್ಬಿಣದ ಸರಳುಗಳನ್ನು ಹಾಕಿಕೊಂಡು ಸಾಗಿದ್ದು ನೋಡುಗರನ್ನು ರೋಮಾಂಚನಗೊಳಿಸುತ್ತಿತ್ತು.
ಓದಿ:ರಿವರ್ ರಾಫ್ಟಿಂಗ್ ವೇಳೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಬಾಲಕಿಯರ ರಕ್ಷಿಸಿದ ಯೋಧರು-ವಿಡಿಯೋ