ಚಿಕ್ಕಮಗಳೂರು: ಕೋವಿಡ್-19 ವೈರಸ್ ಭೀತಿಯಿಂದ ರಾಜ್ಯ ಸರ್ಕಾರ ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಕೇಂದ್ರಗಳನ್ನು ತೆರೆಯದಂತೆ ಸೂಚನೆ ನೀಡಿತ್ತು. ಕೆಲವು ದಿನಗಳಿಂದ ಕೆಲವು ಷರತ್ತುಗಳನ್ನು ವಿಧಿಸಿ, ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಆದರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಾಗಿಲು ಈವರೆಗೂ ತೆರೆದಿರಲಿಲ್ಲ.
ಜುಲೈ 1ರಿಂದ ದೇವಸ್ಥಾನದ ಬಾಗಿಲು ತೆರೆದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಭಕ್ತರು, ಕೆಲವು ನಿಬಂಧನೆಗಳನ್ನು ಪಾಲಿಸಿದರೆ ಮಾತ್ರ ದೇವರ ದರ್ಶನ ಪಡೆಯಬಹುದಾಗಿದೆ.
ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ದೇವಸ್ಥಾನ ಆಡಳಿತ ಮಂಡಳಿ ವಿಧಿಸಿದ ಮಾರ್ಗಸೂಚಿಗಳು:
1. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಭಕ್ತ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಂಡು ಬರಬೇಕು.
2. ಶ್ರೀಕ್ಷೇತ್ರಕ್ಕೆ ಬರುವ ಭಕ್ತರು, ದೇವಸ್ಥಾನದ ವೆಬ್ಸೈಟ್ ಮುಖಾಂತರ ದೇವರ ದರ್ಶನದ ಟಿಕೆಟ್ ಪಡೆದುಕೊಂಡು ಬರಬೇಕು.
3. ದರ್ಶನದ ಟಿಕೆಟ್ಗೆ ಯಾವುದೇ ದರ ಇರುವುದಿಲ್ಲ
4. ಆನ್ಲೈನ್ ದರ್ಶನದ ಟಿಕೆಟ್ ಪಡೆಯದೆ ಬಂದ ಭಕ್ತರಿಗೆ ಪ್ರವೇಶ ನಿಷೇಧ
5. ದೇವರ ದರ್ಶನದ ಟಿಕೆಟ್ ಪ್ರಿಂಟ್ ಔಟ್ ಕಡ್ಡಾಯವಾಗಿ ತರಲೇಬೇಕು
6. ದರ್ಶನಕ್ಕೆ ನಿಗದಿಯಾದ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು
7. ದೇವರ ದರ್ಶನದ ಸಮಯ ಮೀರಿ ಬಂದವರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನಿರಾಕರಣೆ
8.ಮತ್ತೊಮ್ಮೆ ಶ್ರೀಕ್ಷೇತ್ರದ ವೆಬ್ಸೈಟ್ನಲ್ಲಿ ಟಿಕೆಟ್ ಪಡೆದು ದೇವರ ದರ್ಶನ ಪಡೆಯಬಹುದಾಗಿದೆ
9. ದೇವರ ದರ್ಶನಕ್ಕೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಭಕ್ತರಿಗೆ ಅವಕಾಶ
10. ಹತ್ತು ವರ್ಷದ ಒಳಗಿನ ಮಕ್ಕಳಿಗೆ, 65 ವರ್ಷ ಮೇಲ್ಪಟ್ಟ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಅವಕಾಶವಿಲ್ಲ