ಕರ್ನಾಟಕ

karnataka

By

Published : Sep 8, 2022, 8:38 PM IST

ETV Bharat / state

ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲೆಯ ಮಳೆ.. ವಿಡಿಯೋ ನೋಡಿ!

ಚಿಕ್ಕಮಗಳೂರಿನಲ್ಲಿ ನಿನ್ನೆ 200 ಮಿಮೀ ನಷ್ಟು ಭಾರೀ ಮಳೆಯಾಗಿದ್ದು ಜಿಲ್ಲೆಯ ಕೆಲ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ.

Kn_ckm_01
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ಮಳೆ ಸುರಿದಿದೆ. ಚಿಕ್ಕಮಗಳೂರು ತಾಲೂಕಿನ ಸಾರಗೋಡು ಹಾಗೂ ಕಳಸಾಪುರ ಗ್ರಾಮಗಳಲ್ಲಿ ಕಳೆದ ರಾತ್ರಿ ಏಕಾಏಕಿ ಸುರಿದ ಭಾರಿ ಮಳೆಗೆ ಜನತೆ ತತ್ತರಿಸಿದ್ದು, ಹಲವು ವರ್ಷಗಳ ನಂತರದ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲೆಯ ಮಳೆ ಸುರಿದಿದೆ.

ಸಾರಗೋಡು ಗ್ರಾಮದಲ್ಲಿ ಕಳೆದ ರಾತ್ರಿ ಕೇವಲ ಒಂದು ಗಂಟೆ ಅವಧಿಯಲ್ಲಿ ಸುಮಾರು 200 ಮಿ.ಮೀ.ನಷ್ಟು ಭಾರಿ ಮಳೆಯಾಗಿದ್ದು, ಇದು ಇತಿಹಾಸದಲ್ಲೇ ದಾಖಲೆ ಎಂದು ಹೇಳಲಾಗುತ್ತಿದೆ. ಏಕಾಏಕಿ ಗುಡುಗು, ಮಿಂಚಿನೊಂದಿಗೆ ಆರಂಭವಾದ ಮಳೆ ಧಾರಾಕಾರವಾಗಿ ಸುರಿಯಲಾರಂಭಿಸಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ

ಸಾರಗೋಡು, ಹುಯಿಗೆರೆ ಸುತ್ತಮುತ್ತಲ ಗ್ರಾಮಗಳು ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆ ಮೇಲೆ ನದಿಯಂತೆ ಮಳೆ ನೀರು ಹರಿದಿದ್ದು, ಹಲವೆಡೆ ಮನೆಗಳಿಗೂ ನೀರು ನುಗ್ಗಿದೆ. ಮನೆಗಳ ಕಾಂಪೌಂಡ್​​ಗಳು ಕುಸಿತಗೊಂಡಿವೆ. ಸದಾ ಮಳೆಯ ಕೊರತೆ ಅನುಭವಿಸುವ ಅರೆಮಲೆನಾಡು ಪ್ರದೇಶವಾದ ಕಳಸಾಪುರ ಗ್ರಾಮದಲ್ಲೂ ಮಳೆ ಸುರಿದಿದೆ.

ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಚಿಕ್ಕಮಗಳೂರು ತಾಲೂಕಿನ ಈಶ್ವರಹಳ್ಳಿ ಕೆರೆ ಕೋಡಿ ಬಿದ್ದು ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ಕೋಡಿ ನೀರಿನಿಂದ ರಾಜ್ಯ ಹೆದ್ಧಾರಿ ಚಿಕ್ಕಮಗಳೂರು ಜಾವಗಲ್ ರಸ್ತೆ ಜಲಾವೃತವಾಗಿದೆ. ಈಶ್ವರಹಳ್ಳಿ ಬಸ್ ನಿಲ್ದಾಣದ ಬಳಿ ರಾಜ್ಯ ಹೆದ್ಧಾರಿ ಜಲಾವೃತವಾಗಿದ್ದು ವಾಹನ ಸವಾರರು ಪರದಾಟ ನಡೆಸಿದ್ದು ಜೀವ ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಇದೇ ಕೋಡಿ ನೀರಿನಿಂದ ಈಶ್ವರಹಳ್ಳಿ ಗ್ರಾಮದೇವತೆಗೆ ಜಲದಿಗ್ಬಂಧನವಾಗಿದ್ದು, ಭಕ್ತರು ದೇವಿ ದರ್ಶನ ಪಡೆಯುಲು ಹರ ಸಾಹಸವನ್ನೇ ಮಾಡಿದ್ದಾರೆ. ಈಶ್ವರಹಳ್ಳಿ ಗ್ರಾಮದ ದೇವತೆ ಹೊಟಗಟ್ಟಮ್ಮ ದೇವಸ್ಥಾನಕ್ಕೆ ಕೆರೆ ನೀರು ನುಗ್ಗಿದೆ. ಇದರ ಪರಿಣಾಮ ದೇವಾಲಯದ ಒಳಭಾಗದಲ್ಲಿ ಮೂರು ರಿಂದ ನಾಲ್ಕು ಅಡಿಗಳಷ್ಟು ನೀರು ನಿಂತಿದೆ. ದೇವಾಲಯ ಜಲಾವೃತದ ನಡುವೆಯೂ ದೇವರಿಗೆ ವಿಶೇಷ ಪೂಜೆಯನ್ನು ಗ್ರಾಮಸ್ಥರು ಸಲ್ಲಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ಪರಿಯ ನೆರೆ ಕಂಡು ಜನತೆ ಭಯಬೀತರಾಗಿದ್ದಾರೆ.

ಇದನ್ನೂ ಓದಿ:ಮಳೆ ಅವಾಂತರ.. ಬಡಾವಣೆಗೆ ಜಲ ದಿಗ್ಬಂಧನ

ABOUT THE AUTHOR

...view details