ಕರ್ನಾಟಕ

karnataka

By

Published : Mar 9, 2023, 10:01 AM IST

Updated : Mar 9, 2023, 4:52 PM IST

ETV Bharat / state

ಆ್ಯಂಬುಲೆನ್ಸ್ ಸಿಗದೆ ತಂದೆ ಸಾವು: ಆ್ಯಂಬುಲೆನ್ಸ್ ಖರೀದಿಸಿ​ ಜನರಿಗೆ ಉಚಿತ ಸೇವೆ ಒದಗಿಸಿದ ವ್ಯಕ್ತಿ!

ಪಟ್ಟಣದಲ್ಲಿ ಸರಿಯಾದ ಆ್ಯಂಬುಲೆನ್ಸ್ ವ್ಯವಸ್ಥೆ ​ಇಲ್ಲದೇ ಜನರು ತೀವ್ರ ತೊಂದರೆಗೊಳಗಾಗುತ್ತಿರುವುದನ್ನು ಮನಗಂಡು ಕ್ಯಾಂಟೀನ್​ ವ್ಯಾಪಾರಿಯೊಬ್ಬರು ಹೊಸ ಆ್ಯಂಬುಲೆನ್ಸ್ ಖರೀದಿಸಿ ಜನರಿಗೆ ಉಚಿತ ಸೇವೆ ಒದಗಿಸುತ್ತಿದ್ದಾರೆ.

ಮಂಜಣ್ಣ
ಮಂಜಣ್ಣ

ಚಿಕ್ಕಮಗಳೂರು:ಜಿಲ್ಲೆಯ ಕಡೂರು ಪಟ್ಟಣದ ನಿವಾಸಿ, ರಸ್ತೆ ಬದಿಯಲ್ಲಿ ಕ್ಯಾಂಟೀನ್ ವ್ಯಾಪಾರ ಮಾಡುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಪಟ್ಟಣದಲ್ಲಿ ಸರಿಯಾದ ಆ್ಯಂಬುಲೆನ್ಸ್ ​ವ್ಯವಸ್ಥೆ ಇಲ್ಲವೆಂದು ತಾವೇ ಸ್ವತಃ ಆ್ಯಂಬುಲೆನ್ಸ್ ವಾಹನ​ ಖರೀದಿಸಿ ಜನರಿಗೆ ಉಚಿತ ಸೇವೆ ನೀಡುತ್ತಿದ್ದಾರೆ. ಮಂಜುನಾಥ್ ಅಲಿಯಾಸ್​ ಕ್ಯಾಂಟೀನ್​ ಮಂಜಣ್ಣ ಅವರ ತಂದೆ ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಸಾಕಷ್ಟು ಆಸ್ಪತ್ರೆಗಳಿಗೆ ಅಲೆದಾಡಿದ್ದರು. ಆದರೆ ಅದೊಂದು ದಿನ ಆರೋಗ್ಯ ಪರಿಸ್ಥಿತಿ ದಿಢೀರ್​ ಹದಗೆಟ್ಟಿತ್ತು.

ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪರಿಸ್ಥಿತಿ ಇತ್ತು. ಪಟ್ಟಣದಲ್ಲಿ ಸರಿಯಾದ ಆ್ಯಂಬುಲೆನ್ಸ್ ​ವ್ಯವಸ್ಥೆ ಇರದ ಕಾರಣ ಸಕಾಲದಲ್ಲಿ ಚಿಕಿತ್ಸೆ ದೊರೆಯದೇ ಅವರು ಪ್ರಾಣ ಕಳೆದುಕೊಂಡಿದ್ದರು. ಇದನ್ನು ಮನಗಂಡ ಮಂಜಣ್ಣ ತಮ್ಮ ಪರಿಸ್ಥಿತಿ ಭವಿಷ್ಯದಲ್ಲಿ ಬೇರೆ ಯಾರಿಗೂ ಬರಕೂಡದು ಎಂದು ತೀರ್ಮಾನಿಸಿ ಜನರ ಸೇವೆಗಾಗಿ ತಮ್ಮ ತಂದೆಯ ಹೆಸರಿನಲ್ಲಿಯೇ 5 ಲಕ್ಷ ರೂಪಾಯಿ ಮೊತ್ತದ ಆ್ಯಂಬುಲೆನ್ಸ್ ಖರೀದಿ ಮಾಡಿದ್ದು ಇದೀಗ ಪಟ್ಟಣದಲ್ಲಿ ಈ ಆಂಬುಲೆನ್ಸ್‌ ​24x7 ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಕ್ಯಾಂಟೀನ್​ ಮಂಜಣ್ಣ ಜನಸಾಮಾನ್ಯರ ಪಾಲಿಗೆ ಆಪತ್ಭಾಂಧವರಾಗಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಕ್ಯಾಂಟೀನ್​ ಮಂಜಣ್ಣ, "ನನ್ನ ತಂದೆ ಐದು ವರ್ಷಗಳ ಹಿಂದೆ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು. ಅದೊಂದು ದಿನ ಅವರ ಆರೋಗ್ಯ ದಿಢೀರ್​ ಏರುಪೇರಾಗಿತ್ತು. ತಕ್ಷಣವೇ ಶಿವಮೊಗ್ಗದ ಮಲೆನಾಡು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಸರ್ಕಾರಿ ಕ್ಯಾಂಟೀನ್​ ಕರೆ ಮಾಡಿದರೆ ಆ ಸಮಯದಲ್ಲಿ ಬೇರೊಂದು ಕಡೆ ಹೋಗಿದ್ದೇವೆ ಎಂದರು. ಇನ್ನು ಖಾಸಗಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರೆ ಹೆಚ್ಚಿನ ಹಣ ಕೇಳಿದರು. ಸಕಾಲದಲ್ಲಿ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದ ಕಾರಣ ಅವರು ಕೊನೆಯುಸಿರೆಳೆದರು. ಅಲ್ಲದೇ ಕೋವಿಡ್ ಸಂದರ್ಭದಲ್ಲಿಯೂ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಸಿಗದೆ ಅದೆಷ್ಟೋ ಜನರು ಸಾವಿಗೀಡಾಗಿದ್ದರು".

"ತಂದೆಯ ಮರಣದ ನಂತರ ನಾನು ಒಂದು ನಿರ್ಧಾರಕ್ಕೆ ಬಂದೆ. ನಾನೇ ಸ್ವತಃ ಒಂದು ಆ್ಯಂಬುಲೆನ್ಸ್ ಖರೀದಿ ಮಾಡಿ ಜನರಿಗೆ ಉಚಿತ ಸೇವೆ ಒದಗಿಸಬೇಕೆಂದು ತೀರ್ಮಾನಿಸಿದೆ. ಪೆಟ್ರೋಲ್​ ಹಾಕಿಸಲೂ ಆಗದ ತೀರ ಬಡವರಿದ್ದರೆ ಅಂಥವರಿಗೆ ಪೆಟ್ರೋಲ್​ಗೂ ಹಣ ನೀಡಿ​ ಸಹಾಯ ಮಾಡುತ್ತಿದ್ದೇನೆ. ಈವರೆಗೂ ಸುಮಾರು 35ಕ್ಕೂ ಹೆಚ್ಚು ಜನರು ಇದರ ಸೇವೆ ಪಡೆದಿದ್ದಾರೆ. ಯಾವುದೇ ಹೊತ್ತಲ್ಲಿ, ಯಾರೇ ಬಂದು ಕೇಳಿದರೂ ಆಂಬುಲೆನ್ಸ್‌​ ಸೇವೆಗೆ ಸಿದ್ದವಿದೆ. ಈ ಕೆಲಸ ನನ್ನ ಮನಸ್ಸಿಗೆ ಖುಷಿ ತಂದಿದೆ" ಎಂದು ಮಂಜುನಾಥ್ ವಿವರಿಸಿದರು.

ಆ್ಯಂಬುಲೆನ್ಸ್​ನಲ್ಲಿ ಆಕ್ಸಿಜನ್ ಸಿಲಿಂಡರ್, ಟ್ರೀಟ್‍ಮೆಂಟ್ ಕಿಟ್ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಮಂಜುನಾಥ್ ನಿವಾಸದ ಅಕ್ಕಪಕ್ಕದಲ್ಲಿ ಸುಮಾರು 30 ಮಂದಿ ಚಾಲಕರಿದ್ದು ಅವರೂ ಕೂಡಾ ಯಾವುದೇ ಸಮಯದಲ್ಲೂ ಸೇವೆಗೆ ತೆರಳುತ್ತಾರೆ. ಜನರು ಕೊಟ್ಟಷ್ಟೇ ಹಣ ಪಡೆಯುತ್ತಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕ್ಯಾಂಟೀನ್ ಜೊತೆ ಮಂಜುನಾಥ್​ ಟ್ರ್ಯಾಕ್ಟರ್ ಹಾಗೂ ಲಾರಿ ಹೊಂದಿದ್ದು ಅದರಿಂದ ಬಂದ ಲಾಭದಲ್ಲಿ ಆಂಬುಲೆನ್ಸ್ ಕೊಂಡುಕೊಂಡು ಜನರಿಗೆ ಸೇವೆ ಕಲ್ಪಿಸುತ್ತಿದ್ದಾರೆ. ಇವರ ಮಾನವೀಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:ಪಶು ಸಂಜೀವಿನಿ ಯೋಜನೆಯಡಿ ದ.ಕ ಜಿಲ್ಲೆಗೆ ಬಂದಿವೆ 7 ಅನಿಮಲ್ ಕ್ಲಿನಿಕ್ ಆ್ಯಂಬುಲೆನ್ಸ್

Last Updated : Mar 9, 2023, 4:52 PM IST

ABOUT THE AUTHOR

...view details