ಕರ್ನಾಟಕ

karnataka

ETV Bharat / state

ಫೇಸ್​​​ಬುಕ್​​ ಜ್ಯೋತಿಷಿಯಿಂದ ಮಹಿಳೆಗೆ ಲಕ್ಷಾಂತರ ರೂ ವಂಚನೆ: ಆರೋಪಿ ಬಂಧನ

ಫೇಸ್​​​ಬುಕ್​ ಜ್ಯೋತಿಷಿಯೊಬ್ಬ ಮಹಿಳೆಗೆ ಲಕ್ಷಾಂತರ ರೂ. ವಂಚನೆ ಮಾಡಿರುವ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

By

Published : Oct 14, 2022, 5:31 PM IST

Updated : Oct 14, 2022, 5:37 PM IST

Facebook astrologer cheats Chikkamagaluru woman
ಫೇಸ್‌ಬುಕ್ ಜ್ಯೋತಿಷಿಯಿಂದ ಮಹಿಳೆಗೆ ಲಕ್ಷಾಂತರ ರೂ.ವಂಚನೆ

ಚಿಕ್ಕಮಗಳೂರು: ಕೌಟುಂಬಿಕ ಕಲಹವನ್ನು ಮುಖ ನೋಡದ, ಕುಲ-ಗೋತ್ರ ಗೊತ್ತಿಲ್ಲದ ವ್ಯಕ್ತಿ ಎಲ್ಲೋ ಕುಳಿತುಕೊಂಡು ಹೇಗೆ? ಬಗೆಹರಿಸುತ್ತಾನೆ. ಅದು ಸಾಧ್ಯನಾ?. ನಮ್ಮ ಸಮಸ್ಯೆಗೆ ನಾವೇ ಪರಿಹಾರ. ಆದರೆ ಇಲ್ಲೋರ್ವ ಮಹಿಳೆ ನಮ್ಮ ಮನೆ ಸಮಸ್ಯೆಯನ್ನ ಬಗೆಹರಿಸಿ ಅಂತಾ ಫೇಸ್​​​​​ಬುಕ್​ ಜ್ಯೋತಿಷಿ ಮೊರೆ ಹೋಗಿ ಎರಡೇ ತಿಂಗಳಲ್ಲಿ 1 ಲಕ್ಷದ 10 ಸಾವಿರ ಹಣ ಕಳೆದು ಕೊಂಡಿದ್ದಾಳೆ.

ಮಹಿಳೆಗೆ ಲಕ್ಷಾಂತರ ರೂ.ವಂಚನೆ: ಆರೋಪಿ ಬಂಧನ

ಈಕೆಯ ಮನೆ ಸಮಸ್ಯೆಗಾಗಿ ಆತ ಮತ್ತೆಲ್ಲಿಗೋ ಹೋಗಿ ದೊಡ್ಡ ಪೂಜೆ ಮಾಡಿಸುತ್ತಾನಂತೆ. 3, 7, 13, 22 ಸಾವಿರ ಹೀಗೆ ಆತ ಹೇಳಿದಂತೆಲ್ಲ ಹಣ ನೀಡಿದ ಮಹಿಳೆ ಈಗ ಪೊಲೀಸ್​​ ಠಾಣೆಗೆ ಬಂದು ಕಣ್ಣೀರು ಹಾಕಿದ್ದಾಳೆ.

ಏನಿದು ಪ್ರಕರಣ: ಬೆಂಗಳೂರು ಮೂಲದ ಪಂಡಿತ್ ಮೋದಿ ಬೆಟ್ಟಪ್ಪ ಅಸ್ಟ್ರಾಲಜಿಯ ಗಣೇಶ್ ಗೊಂದಾಲ್ ಎಂಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಜನರನ್ನ ಯಾಮಾರಿಸಲು ಜ್ಯೋತಿಷ್ಯದ ಚಿಹ್ನೆಗಳನ್ನು ಜಿಗಿ-ಜಿಗಿ ಮಾಡಿ ಅಪ್ ಲೋಡ್ ಮಾಡಿದ್ದಾನೆ. ಕಲರ್ ಫುಲ್ ಪ್ರೋಮೋ ಕಂಡು ಕಾಫಿನಾಡಿನ ಮಹಿಳೆಯೊಬ್ಬರು ಮೋಸ ಹೋಗಿ ಎರಡೇ ತಿಂಗಳಿಗೆ ಲಕ್ಷಕ್ಕೂ ಅಧಿಕ ಹಣವನ್ನ ಕಳೆದುಕೊಂಡಿದ್ದಾರೆ.

ಆನ್‌ಲೈನ್ ಜ್ಯೋತಿಷಿ ಬಗ್ಗೆ ಎಚ್ಚರಿಕೆ ನೀಡಿದ ಎಸ್‌ಪಿ ಉಮಾ ಪ್ರಶಾಂತ್

ಫೇಸ್​​​ಬುಕ್​​​​ನಲ್ಲಿ ಈ ಪ್ರೊಮೋ ನೋಡಿದ ಚಿಕ್ಕಮಗಳೂರಿನ ಮಹಿಳೆ ಕೌಟುಂಬಿಕ ಸಮಸ್ಯೆಯ ಬಗ್ಗೆ ಕಣ್ಣೀರು ಹಾಕಿಕೊಂಡು ಇವರಿಗೆ ಕರೆ ಮಾಡಿದ್ದಾರೆ. ಆಗ ಆತ ಹೆದರಬೇಡಿ. ನಾನೀದ್ದೇನೆ. ನಿಮ್ಮ ಸಮಸ್ಯೆಗೆ ಮುಕ್ತಿ ಕೊಡುತ್ತೇನೆ ಎಂದು ಹೇಳಿ ಲಕ್ಷಕ್ಕೂ ಅಧಿಕ ಹಣವನ್ನು ಮುಂಡಾಯಿಸಿದ್ದಾನೆ ಎನ್ನಲಾಗಿದೆ. ಆರೋಪಿ ತನಗೆ ಹಣ ಬೇಕಾದಾಗೆಲ್ಲ ರಾಮ-ಕೃಷ್ಣನ ಪೂಜೆ ಹೆಸರಿನಲ್ಲಿ ಹಣ ಹಾಕಿಸಿಕೊಂಡಿದ್ದಾನೆ. ಮಹಳೆ ತನ್ನ ಕುಟುಂಬದ ಕಷ್ಟ- ಕಾರ್ಪಣ್ಯ ಮುಗಿದು ಹೋಗುತ್ತದೆ ಎಂದು ಸಾಲ-ಸೋಲ ಮಾಡಿ ಕಳ್ಳ ಜ್ಯೋತಿಷಿಯ ಖಾತೆ ತುಂಬಿದ್ದಾರೆ. ಆದರೆ, ಆತ ಮತ್ತೆ ಹಣ ಕೇಳಿದಾಗ ಅನುಮಾನಗೊಂಡು ಮಹಿಳೆ ನಗರದ ಸೆನ್ ಠಾಣೆಗೆ ದೂರು ನೀಡಿದ್ದಾಳೆ.

ಆರೋಪಿ ಬಂಧನ:ಬೆಂಗಳೂರಿನ ಕೊಟ್ಟಿಗೆ ಹಳ್ಳಿಯಲ್ಲಿ ಯಾರ್ದೋ ದುಡ್ಡಲ್ಲಿ ಎಲ್ಲಮ್ಮನ ಜಾತ್ರೆ ಮಾಡುತ್ತಿದ್ದ ಆರೋಪಿ ಗಣೇಶ್ ಗೊಂದಾಲ್ (25)ನನ್ನು ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ.

ಆನ್‌ಲೈನ್ ಜ್ಯೋತಿಷಿ ಬಗ್ಗೆ ಎಚ್ಚರಿಕೆ ನೀಡಿದ ಎಸ್‌ಪಿ: ನಿಮ್ಮ ಸಮಸ್ಯೆಗಾಗಿ ಕೊನೆಯ ಪೂಜೆ ಒಂದಿದೆ. ಅದನ್ನ ಮಾಡಲು ನಾನೇ ಮತ್ತೊಬ್ಬ ದೊಡ್ಡ ಜ್ಯೋತಿಷಿ ಬಳಿ ಹೋಗಬೇಕು ಅಂತಾ ಮತ್ತೆ ಹಣ ಕೇಳಿದ್ದಾನೆ. ಆಗ ಅನುಮಾನಗೊಂಡ ಮಹಿಳೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣೆಗೆ ಹೋಗಿ ದೂರು ನೀಡಿದ್ದಾರೆ.

ಈ ಜ್ಯೋತಿಷಿ ಅಸಲಿಯೋ-ನಕಲಿಯೋ ಗೊತ್ತಿಲ್ಲ. ಆದರೆ 25ನೇ ವಯಸ್ಸಿಗೆ ಅದ್ಯಾವ ವಿದ್ಯೆ ಕಲಿತನೋ ಗೊತ್ತಿಲ್ಲ. ಇವರ ಅಪ್ಪ ಕೂಡ ಜ್ಯೋತಿಷಿಯಂತೆ. ಕೇಳಿದರೆ ಕೊಳ್ಳೇಗಾಲಕ್ಕೆ ಹೋಗಿ ಕಲಿತೆ ಅಂತಾನಂತೆ. ಕೊಳ್ಳೆಗಾಲದಲ್ಲಿ ಕಲಿತ ವಿದ್ಯೆಯನ್ನ ಈಗ ಜೈಲಲ್ಲಿ ಕರಗತ ಮಾಡಿಕೊಳ್ಳುತ್ತಿದ್ದಾನೆ. ಆತ ಮೋಸ ಮಾಡಿರುವುದು ಚಿಕ್ಕಮಗಳೂರು ಮಹಿಳೆಗಾದರೂ ಆತ ಮೂಲತಃ ಬೆಂಗಳೂರಿನವನು. ಹಾಗಾಗಿ ಬೆಂಗಳೂರಿನ ಜನ ಕೂಡ ಇವನ ಬಗ್ಗೆ ಹಾಗೂ ಆನ್‍ಲೈನ್ ಜ್ಯೋತಿಷಿಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಎಸ್​ಪಿ ಉಮಾ ಪ್ರಶಾಂತ್ ಹೇಳಿದ್ದಾರೆ.

ಒಟ್ಟಾರೆ ಕೊಟ್ಟೋನು ಕೋಡಂಗಿ ಇಸ್ಕಂಡೋನು ವೀರಭದ್ರ ಎಂಬಂತಾಗಿದೆ ಆ ಮಹಿಳೆಯ ಪಾಡು. ಕೌಟುಂಬಿಕ ಸಮಸ್ಯೆ ಬಗೆ ಹರಿದು ಮಾನಸಿಕ ನೆಮ್ಮದಿ ಸಿಕ್ಕರೆ ಸಾಕೆಂದು ಕೇಳಿದಾಗೆಲ್ಲ ಸಾಲ-ಸೋಲ ಮಾಡಿ ಹಣ ಹಾಕಿದ ಆ ಮಹಿಳೆ ಇಂದು ಕಣ್ಣೀರು ಸುರಿಸುತ್ತಿದ್ದಾರೆ.

ಇದನ್ನೂ ಓದಿ:ಫೇಸ್‌ಬುಕ್ ಫಾರಿನ್ ಗೆಳತಿ ನಂಬಿ 35 ಲಕ್ಷ ಕಳೆದುಕೊಂಡ ಬೆಂಗಳೂರಿನ ವ್ಯಕ್ತಿ

Last Updated : Oct 14, 2022, 5:37 PM IST

ABOUT THE AUTHOR

...view details