ಕರ್ನಾಟಕ

karnataka

ETV Bharat / state

ಹೊರನಾಡು ಅನ್ನಪೂರ್ಣೇಶ್ವರಿಗೆ ವಿಶೇಷ ಅಲಂಕಾರ: ದೇವಾಲಯಕ್ಕೆ ಹರಿದುಬಂದ ಭಕ್ತರ ದಂಡು

ನವರಾತ್ರಿ ಹಿನ್ನೆಲೆ ಹೊರನಾಡು ಅನ್ನಪೂರ್ಣೆಶ್ವರಿ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬಂದಿದೆ.

By ETV Bharat Karnataka Team

Published : Oct 23, 2023, 11:45 AM IST

devotees-visiting-horanadu-temple
ಹೊರನಾಡು ಅನ್ನಪೂರ್ಣೇಶ್ವರಿಗೆ ವಿಶೇಷ ಅಲಂಕಾರ : ದೇವಾಲಯಕ್ಕೆ ಹರಿದುಬಂದ ಭಕ್ತರ ದಂಡು

ಚಿಕ್ಕಮಗಳೂರು :ಪ್ರವಾಸಿಗರ ಜಿಲ್ಲೆ ಎಂದು ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅದರಲ್ಲೂ ವಾರಾಂತ್ಯದಲ್ಲಿ ನಿರೀಕ್ಷೆಗೂ ಮೀರಿದ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದು, ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಅಲ್ಲಿನ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಜೊತೆಗೆ ಇಲ್ಲಿನ ದೇವಾಲಯಗಳಿಗೆ ಭಕ್ತರ ದಂಡೆ ಹರಿದುಬರುತ್ತಿದೆ.

ಇಲ್ಲಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ನವರಾತ್ರಿ ಹಿನ್ನೆಲೆ ದೇವಿಗೆ ವಿಶೇಷ ಅಲಂಕಾರ, ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡಲಾಗುತ್ತಿದೆ. ದಸರಾ ರಜೆ ಇರುವುದರಿಂದ ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ದಾಖಲೆ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ.

ಹೊರನಾಡಿಗೆ ಬರುವ ಸರ್ಕಾರಿ ಬಸ್ಸುಗಳು ತುಂಬಿ ತುಳುಕುತ್ತಿದ್ದು, ಬಸ್​ಗಳು ಸಿಗದೇ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿರುವುದರಿಂದ ಭಕ್ತರನ್ನು ನಿಯಂತ್ರಿಸುವುದು ಆಡಳಿತ ಮಂಡಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಧಾರ್ಮಿಕ ಕ್ಷೇತ್ರಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳ :ಶಕ್ತಿ ಯೋಜನೆಯಿಂದಾಗಿ ವಾರಾಂತ್ಯದಲ್ಲಿ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಮಹಿಳಾ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಇದರ ಜೊತೆಗೆ ದಸರಾ ರಜೆ ಇರುವುದರಿಂದ ಮಹಿಳೆಯರ ಜೊತೆ ಮಕ್ಕಳು ಬರುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಅನೇಕ ಪ್ರಮುಖ ಧಾರ್ಮಿಕ ಕ್ಷೇತ್ರಗಳು ಮಹಿಳೆಯರು ಹಾಗೂ ಮಕ್ಕಳಿಂದ ತುಂಬಿ ತುಳುಕುತ್ತಿದೆ.

ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುತ್ತಾರೆ. ಇಲ್ಲಿಗೆ ಬರುವ ಮಹಿಳೆಯರು ಸೀಟಿಗಾಗಿ ಬಸ್​ನ ಕಿಟಕಿಯಲ್ಲಿ ಮಕ್ಕಳನ್ನು ಹತ್ತಿಸುವ ದೃಶ್ಯವೂ ಸಾಮಾನ್ಯವಾಗಿದೆ. ಅಲ್ಲದೇ ಒಂದೇ ಬಸ್​ಗೆ 300ಕ್ಕೂ ಹೆಚ್ಚು ಮಹಿಳೆಯರು ಮುಗಿಬಿದ್ದಿರುವ ಘಟನೆ ನಡೆದಿದೆ. ಹೀಗಾಗಿ ಬಸ್​ನಲ್ಲಿ ಪ್ರಯಾಣಿಸಲು ಭಕ್ತರು ಕಷ್ಟಪಡುವಂತಾಗಿದೆ.

ನವರಾತ್ರಿ ಹಿನ್ನೆಲೆ ಶೃಂಗೇರಿ ಶಾರದಾಂಬಾ ದೇವಾಲಯ ಹಾಗೂ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಇಲ್ಲಿನ ಧಾರ್ಮಿಕ ಕ್ಷೇತ್ರಗಳಿಗೆ ಆಗಮಿಸುತ್ತಿದ್ದಾರೆ. ದೇವಾಲಯಕ್ಕೆ ಆಗಮಿಸುವ ಜನರನ್ನು ನಿಯಂತ್ರಿಸಲಾಗದೇ ಸಿಬ್ಬಂದಿ ಹೈರಾಣಾಗಿದ್ದಾರೆ. ಶೃಂಗೇರಿ ಹಾಗೂ ಹೊರನಾಡಿಗೆ ತೆರಳುವ ಬಸ್​ಗಳು ತುಂಬು ತುಳುಕುತ್ತಿದ್ದು, ಪ್ರಯಾಣಿಕರನ್ನು ನಿಭಾಯಿಸಲು ಚಾಲಕ ಮತ್ತು ನಿರ್ವಾಹಕರು ಹರಸಾಹಸ ಪಡುವಂತಾಗಿದೆ.

ಇದನ್ನೂ ಓದಿ :ಅರಮನೆ ಆವರಣದಲ್ಲಿ ಜಂಬೂ ಸವಾರಿ ಅಂತಿಮ ರಿಹರ್ಸಲ್ ಯಶಸ್ವಿ: ಇಂದಿನಿಂದ ಮೂರು ದಿನಗಳ ಕಾಲ ಸಿಎಂ ಮೈಸೂರು ಪ್ರವಾಸ

ABOUT THE AUTHOR

...view details